ಕನ್ನಡಪ್ರಭ ವಾರ್ತೆ ಬೆಂಗಳೂರು:
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ರಿಜ್ವಾನ್ ಅರ್ಷದ್, ರಾಜ್ಯದಲ್ಲಿ ಒಟ್ಟು 5,946 ಪೆಟ್ರೋಲ್ ಬಂಕ್ಗಳಿದ್ದು, ಗ್ರಾಹಕರಿಂದ ಬಂದ ದೂರು ಆಧರಿಸಿ ಕಳೆದ ಒಂದು ವಾರದಲ್ಲಿ ಇಲಾಖಾ ಅಧಿಕಾರಿಗಳು ನಡೆಸಿದ 805 ಪೆಟ್ರೋಲ್ ಬಂಕ್ಗಳ ತಪಾಸಣೆಯಲ್ಲಿ 768 ಬಂಕ್ಗಳಲ್ಲಿ ನಿಖರವಾದ ಅಳತೆಯಲ್ಲಿ ಇಂಧನ ದೊರೆಯದೇ ಇರುವುದು ಪತ್ತೆಯಾಗಿದೆ. ಅಂದರೆ ಶೇ.95 ರಷ್ಟು ಬಂಕ್ಗಳಲ್ಲಿ ನಿಖರ ಪ್ರಮಾಣದಲ್ಲಿ ಗ್ರಾಹಕರಿಗೆ ಇಂಧನ ನೀಡುತ್ತಿಲ್ಲ. ಈ ಪೈಕಿ 101 ಬಂಕ್ಗಳ ಮೇಲೆ ಪ್ರಕರಣ ದಾಖಲಿಸಿ 6.66 ಲಕ್ಷ ರು. ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.ಶೇ.85 ನೋಸಲ್ಸ್ನಲ್ಲಿ ವ್ಯತ್ಯಾಸ:
805 ಪೆಟ್ರೋಲ್ ಬಂಕ್ಗಳಲ್ಲಿನ 3,071 ನೋಸಲ್ಸ್ (ಪೆಟ್ರೋಲ್ ಗನ್) ಪೈಕಿ 2,618 ನೋಸಲ್ಸ್ನಲ್ಲಿ ಪೆಟ್ರೋಲ್ ಕೊರತೆ ಬಂದಿದೆ. ಶೇ.85 ನೋಸಲ್ಸ್ನಲ್ಲಿ ಸರಿಯಾದ ಪ್ರಮಾಣದಲ್ಲಿ ಪೆಟ್ರೋಲ್-ಡೀಸೆಲ್ ವಿತರಣೆ ಆಗುತ್ತಿಲ್ಲ. ಕೇಂದ್ರ ಸರ್ಕಾರ ನಿಯಮದ ಪ್ರಕಾರ 5 ಲೀಟರ್ನಲ್ಲಿ 0.5% ವ್ಯತ್ಯಾಸ ಇರಬಹುದು. ಅಂದರೆ, 25 ಎಂಎಲ್ ವರೆಗೆ ವ್ಯತ್ಯಾಸ ಆಗಬಹುದಾಗಿದೆ. ಕೆಲ ಬಂಕ್ಗಳಲ್ಲಿ 50 ಎಂಎಲ್ಗಿಂತ ಹೆಚ್ಚು ವ್ಯತ್ಯಾಸ ಕಂಡು ಬಂದಿದೆ ಎಂದು ಸಚಿವರು ವಿವರಿಸಿದರು.ಕೇಂದ್ರದ ಅಧಿಸೂಚನೆ ಒಪ್ಪುವುದಿಲ್ಲ:ಕೇಂದ್ರ ಸರ್ಕಾರ ಪೆಟ್ರೋಲ್ ಬಂಕ್ಗಳನ್ನು ವರ್ಷಕ್ಕೊಮ್ಮೆ ರಿಕ್ಯಾಲಿಬರೇಷನ್ ಮಾಡಬೇಕೆಂದಿದ್ದ ನಿಯಮವನ್ನು ಎರಡು ವರ್ಷಗಳಿಗೆ ಹೆಚ್ಚಿಸಿರುವುದು ಹಾಗೂ ತಪಾಸಣೆಯ ಅಧಿಕಾರವನ್ನು ಖಾಸಗಿಯವರಿಗೂ ನೀಡಿರುವುದು ಅವೈಜ್ಞಾನಿಕ. ಆದರೆ, ಇದನ್ನು ಒಪ್ಪಿದರೆ ಗ್ರಾಹಕರಿಗೆ ಇನ್ನಷ್ಟು ಹೆಚ್ಚು ಹೊಡೆತ ಬೀಳದೆ ಇರದು. ಬಂಕ್ಗಳಲ್ಲಿನ ವ್ಯತ್ಯಾಸವನ್ನು ಖಾಸಗಿಯವರಿಂದ ನಿಯಂತ್ರಿಸಲು ಸಾಧ್ಯವಾ? ಹೀಗಾಗಿ ಇದನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಹೇಳಿದರು.
ತಪಾಸಣೆ ಯಾವ ದಿನಾಂಕದಂದು ಆಗಿದೆ, ಯಾವಾಗ ಮುಂದೆ ತಪಾಸಣೆ ಮಾಡಬೇಕು ಎಂಬ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಬಂಕ್ಗಳಲ್ಲಿ ಕಡ್ಡಾಯವಾಗಿ ಐದು ಲೀಟರ್ ಕ್ಯಾನ್ ಇಟ್ಟಿರಬೇಕು. ಗ್ರಾಹಕರ ಹಕ್ಕುಗಳೇನು ಎಂಬ ಬಗ್ಗೆ ಮಾಹಿತಿಗಳನ್ನು ಪ್ರಕಟಿಸಬೇಕು ಎಂದು ತಿಳಿಸಿದರು.