ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿ ಉತ್ಪನ್ನಗಳ ಕುರಿತಂತೆ ಸಾಮಾಜಿಕ ಜಾಲತಾಣಲ್ಲಿ ಕೆಎಂಎಫ್ ಉತ್ಪನ್ನಗಳು ಕಲಬೆರಕೆಯಾಗುತ್ತಿವೆ ಎಂಬ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಇದು ಉತ್ಪಾದಕರು ಮತ್ತು ಗ್ರಾಹಕರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದರು.
ಮಂಡ್ಯ ಹಾಲು ಒಕ್ಕೂಟದಲ್ಲಿ ಉತ್ಪಾದನೆಯಾಗುವ ಹಾಲಿನ ಪುಡಿ ಮನ್ಮುಲ್ ಆವರಣದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಮಾಡಿ ಹೆಚ್ಚಿಗೆಯಾದಲ್ಲಿ ಖಾಸಗಿ ಗೋದಾಮಿನಲ್ಲಿ ಬಾಡಿಗೆ ಆಧಾರದ ಮೇಲೆ ಹಾಲಿನ ಪುಡಿಯನ್ನು ದಾಸ್ತಾನು ಮಾಡಲಾಗುತ್ತದೆ. ಇದಕ್ಕೆ ತನ್ನದೇ ಆದ ನಿಯಮಗಳೂ ಇವೆ. ಅದೇ ರೀತಿ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಮಾಸ್ಟರ್ ಇನ್ಸುಲೇಷನ್ ಇಂಕ್ ಕಂಪನಿಗೆ ನಿಯಮಾನುಸಾರ ಗೋದಾಮನ್ನು ಬಾಡಿಗೆ ಆದಾರದ ಮೇಲೆ ಪಡೆದು ಅಲ್ಲಿ ಹಾಲಿನ ಪುಡಿ ದಾಸ್ತಾನು ಮಾಡಲಾಗಿತ್ತು ಎಂದರು.ಮನ್ಮುಲ್ ಆವರದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಖಾಲಿಯಾದ ಕಾರಣ ಖಾಸಗಿ ಗೋದಾಮಿಗೆ ನೀಡುವ ಬಾಡಿಗೆಯನ್ನು ತಪ್ಪಿಸುವ ಸಲುವಾಗಿ ಅಲ್ಲಿಂದ ಹಾಲಿನ ಪುಡಿ ದಾಸ್ತಾನನ್ನು ಎತ್ತುವಳಿ ಮಾಡಲು ಸಂಬಂಧಿಸಿದ ಗೋದಾಮಿನ ಮಾಲೀಕರಿಗೆ ತಿಳಿವಳಿಕೆ ಪತ್ರ ನೀಡಲಾಗಿತ್ತು. ಅದರಂತೆ ಅಲ್ಲಿಗೆ ತೆರಳಿದ ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ನಮ್ಮಲ್ಲಿ ಉತ್ಪಾದನೆಯಾದ ಹಾಲಿನ ಪೌಡರ್ ಚೀಲದಲ್ಲಿ ಒಂದು ಸ್ಟಿಚ್ ಹಾಕಿರುತ್ತೆ. ಅಲ್ಲಿ ದಾಸ್ತಾನಾಗಿದ್ದ ಚೀಲಗಳಲ್ಲಿ ಎರಡು ಸ್ಟಿಚ್ ಹಾಕಲಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ನಾವು ಪರಿಶೀಲನೆ ನಡೆಸಿದ ವೇಳೆ ಕಳಪೆ ಗುಣಮಟ್ಟದ 55.475 ಮೆ.ಟನ್ ಹಾಲಿನ ಪುಡಿ ಚೀಲಗಳು ಕಂಡುಬಂದವು ಎಂದು ವಿವರಿಸಿದರು.
ಕಳಪೆ ಗುಣಮಟ್ಟದ ಹಾಲಿನ ಪುಡಿಯನ್ನು ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಆದರೆ, ಕೆಲವರು ನಂದಿನಿ ಉತ್ಪನ್ನಗಳಿಗೆ ಕೆಟ್ಟ ಹೆಸರುವ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಆರೋಪ ಮಾಡಿ ಗುಣಮಟ್ಟ ಸರಿಯಿಲ್ಲ ಎಂಬಂತೆ ಬಿಂಬಿಸಿ ವರದಿ ಬಿತ್ತರಿಸಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು ಎಂದರು.
ಗೋದಾಮಿನಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ವಿಚಾರಣಾ ಹಂತದಲ್ಲಿದೆ. ಆತನ ಪರವಾನಗಿ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸುವಂತೆ ಕೆಎಂಎಫ್ ದೂರು ನೀಡಲಾಗಿದೆ ಎಂದು ತಿಳಿಸಿದರು.