ಸೇತುವೆ ಕುಸಿದು ಎರಡು ವರ್ಷ ಕಳೆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಮುಂದಾಗದಿರುವುದು ವಿಪರ್ಯಾಸ.

ಕನ್ನಡಪ್ರಭ ವಾರ್ತೆ ಕಮಲಾಪುರ

ಸೇತುವೆ ಕುಸಿದು ಎರಡು ವರ್ಷ ಕಳೆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಮುಂದಾಗದಿರುವುದು ವಿಪರ್ಯಾಸ. ಕಮಲಾಪುರ ಪಟ್ಟಣದ ಜೆಸ್ಕಾಂ ಕಚೇರಿ ಹತ್ತಿರ ಇರುವ ಸೇತುವೆ ಶಿಥಿಲಗೊಂಡು ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಲಾರಿ ಒಂದು ಚಲಿಸುತ್ತಿರುವ ಸಂದರ್ಭ ಸೇತುವೆ ಕುಸಿದು ಬಿದ್ದಿತ್ತು. ಈ ಸೇತುವೆ ತಾಲೂಕಿನ ಬೇಲೂರ್, ಜೀವಣಗಿ, ರೇವಗ್ಗಿ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಸಹಿತ ವಿವಿಧ ಹಳ್ಳಿಗಳಿಗೆ ಕಮಲಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿದ್ದು, ಈ ವಿಷಯ ಇಲಾಖೆ ಅಧಿಕಾರಿಗಳ ಹಾಗೂ ಸ್ಥಳೀಯ ಶಾಸಕರು ಜನಪ್ರತಿನಿಧಿಗಳ ಗಮನಕ್ಕೆ ತಂದ್ದಿದ್ದರೂ ಪ್ರಯೋಜನವಾಗಿಲ್ಲ.

ನನೆಗುದಿಗೆ ಬಿದ್ದಿರುವ ಸೇತುವೆ ಕಾಮಗಾರಿಯ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕಿದ್ದು, ಎರಡು ಬಾರಿ ಗೆದ್ದ ಸ್ಥಳಿಯ ಶಾಸಕರು ಕೂಡ ಸೇತುವೆ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದು, ತಪ್ಪಿದಲ್ಲಿ ಭಾರಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕಲಬುರ್ಗಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು ಇಲ್ಲಿನ ಶಾಸಕರು ಬಸವರಾಜ ಮತ್ತಿಮಡು ಸೇತುವೆ ದುರಸ್ತಿ ಕಾರ್ಯ ಕುರಿತು ಗಮನಹರಿಸುವ ಮೂಲಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವುದರೊಂದಿಗೆ ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ವಾಹನ ಸವಾರರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.