ಹಳಿಯಾಳದಲ್ಲಿ ಕ್ಷೀರಕ್ರಾಂತಿ: ಪ್ರತಿದಿನ 10 ಸಾವಿರ ಲೀ. ಹಾಲು ಉತ್ಪಾದನೆ

KannadaprabhaNewsNetwork | Updated : Jun 16 2025, 05:45 AM IST

ಕೃಷಿ ಪ್ರಧಾನವಾದ ಹಳಿಯಾಳ ತಾಲೂಕಿನಲ್ಲಿ ಪ್ರಗತಿಪರ ಬೆಳವಣಿಗೆಯೊದು ಆರಂಭಗೊಂಡಿದೆ.

ಹಳಿಯಾಳ: ಕೃಷಿ ಪ್ರಧಾನವಾದ ಹಳಿಯಾಳ ತಾಲೂಕಿನಲ್ಲಿ ಪ್ರಗತಿಪರ ಬೆಳವಣಿಗೆಯೊದು ಆರಂಭಗೊಂಡಿದೆ. ತಾಲೂಕಿನ ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪಕಸಬುವನ್ನಾಗಿಸಿಕೊಂಡ ಪರಿಣಾಮ ಹಾಲು ಉತ್ಪಾದನೆಯು ನಿರೀಕ್ಷೆಗೂ ಮೀರಿ ವೃದ್ಧಿಸಿದೆ.ಅಂದಾಜು ಪ್ರತಿ ದಿನವೂ 10 ಸಾವಿರಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗಲಾರಂಭಿಸಿದು, ಹಳಿಯಾಳ ತಾಲೂಕ ಅತ್ಯಲ್ಪ ಅವಧಿಯಲ್ಲಿಯೇ ಹಾಲು ಉತ್ಪಾದನೆಯಲ್ಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನಕ್ಕೆರಿದೆ.

ಹೈನುಗಾರಿಕೆ ಹಳಿಯಾಳ ತಾಲೂಕಿಗೆ ಹೊಸದೇನಲ್ಲ. ಇಲ್ಲಿ ಕೃಷಿಯೊಂದಿಗೆ ಹೈನುಗಾರಿಕೆಯು ಉಪಕಸುಬಾಗಿತ್ತು. ಆದರೆ ಸೂಕ್ತ ಮಾರುಕಟ್ಟೆ ಕೊರತೆಯಿಂದಾಗಿ ಹೈನುಗಾರಿಕೆ ಬೆಳೆಯಲಿಲ್ಲ. ಈ ಬೆಳವಣಿಗೆಗಳ ಸೂಕ್ತ ಅಧ್ಯಯನ ನಡೆಸಿದ ಹಳಿಯಾಳದ ವಿ.ಆರ್.ಡಿ ಟ್ರಸ್ಟ್ ತಾಲೂಕಿನಲ್ಲಿ ಹೈನುಗಾರಿಕೆ ಹಿನ್ನಡೆ, ಬೆಳವಣಿಗೆಗೆ ಇರುವ ಅವಕಾಶಗಳು ಮೊದಲಾದ ಕೋನಗಳಲ್ಲಿ ಬೇರು ಮಟ್ಟದಲ್ಲಿ ಸಮೀಕ್ಷೆಯನ್ನು ನಡೆಸಿತು.

ಸಂಗ್ರಹಿಸಿದ ವರದಿ ಆಧರಿಸಿ ಹೈನುಗಾರಿಕೆ ಬೆಳವಣಗೆಗೆ ನೀಲಿನಕ್ಷೆ ರಚಿಸಿ ತನ್ನ ಅಂಗಸಂಸ್ಥೆಯಾದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಿಂದ ಹೈನುಗಾರಿಕೆ ತರಬೇತಿ ಶಿಬಿರಗಳನ್ನು ಕಾರ್ಯಾಗಾರಗಳನ್ನು ಆರಂಭಿಸಿತು. ಇವರ ಪ್ರಯತ್ನಗಳಿಗೆ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಸಂಸ್ಥೆ ಕೈಜೋಡಿಸಿದರು. ಪರಿಣಾಮ ತಾಲೂಕಿನಲ್ಲಿ ಹೈನುಗಾರಿಕೆ ಕ್ರಮೇಣ ಬೆಳೆಯಲಾರಂಭಿಸಿತು. ರೈತರು ಹೈನುಗಾರಿಕೆಯತ್ತ ಮತ್ತೆ ಒಲವು ತೋರಿಸಲಾರಂಭಿಸಲಾರಂಭಿಸಿದ್ದಾರೆ.

ಪಶು ಸಂಗೋಪನಾ ಇಲಾಖೆ ನೀಡಿದ ಮಾಹಿತಿಯಂತೆ ತಾಲೂಕಿನಲ್ಲಿ 30,300ಕ್ಕಿಂತ ಹೆಚ್ಚು ಜಾನುವಾರುಗಳಿವೆ. 10 ಸಾವಿರಕ್ಕೂ ಹೆಚ್ಚು ರೈತರು ಪಶುಪಾಲನೆ ಹಾಗೂ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರವು ಪ್ರತಿ ಲೀಟರಿಗೆ ನೀಡುವ ಪ್ರೋತ್ಸಾಹಧನ ₹5ಯಂತೆ ತಿಂಗಳಿಗೆ ಅಂದಾಜು ₹15 ಲಕ್ಷಕ್ಕಿಂತ ಹೆಚ್ಚು ಹಣವು ಹಾಲು ಉತ್ಪಾದಕ ರೈತರ ಖಾತೆಗೆ ಜಮೆಯಾಗುತ್ತಿದೆ.

ಪ್ರಸ್ತುತ ತಾಲೂಕಿನಲ್ಲಿ ಅರ್ಲವಾಡ, ಬಿ.ಕೆ.ಹಳ್ಳಿ, ಬಸವಳ್ಳಿ, ಬೆಳವಟಗಿ, ಚಿಬ್ಬಲಗೇರಿ, ದುಸಗಿ, ಗುಂಡೊಳ್ಳಿ, ಹಂಪಿಹೋಳಿ, ಹುಣವಾಡ, ಜನಗಾ, ಜತಗಾ ಗೌಳಿವಾಡಾ, ಜೋಗನಕೊಪ್ಪ, ಕೆ.ಕೆ.ಹಳ್ಳಿ, ಕಾಳಗಿನಕೊಪ್ಪ, ಮುರ್ಕವಾಡ, ನಾಗಶೆಟ್ಟಿಕೊಪ್ಪ, ಪಾಂಡರವಾಳ, ಸಾಂಬ್ರಾಣಿ, ಸಂಕನಕೊಪ್ಪ, ಶಿವಪುರ, ತಟ್ಟಿಗೆರೆ, ತೆಗ್ನಳ್ಳಿ, ತೇರಗಾಂವ, ಯಡೋಗಾ, ಮುತ್ತಲಮುರಿ, ಅಜಗಾಂವ, ತತ್ವಣಗಿ, ಕಾವಲವಾಡ, ಹಳಿಯಾಳ, ಮಲವಡಿ, ಮುಂಡವಾಡ, ಕೆಸರೊಳ್ಳಿ, ಬಾಳಶೆಟ್ಟಿಕೊಪ್ಪ ಸೇರಿ ಒಟ್ಟು 34 ಹಾಲು ಉತ್ಪಾದಕರ ಸಂಘಗಳು ಹಾಗೂ ರಾಯಪಟ್ಟಣ, ಮಂಗಳವಾಡ, ಜಾವಳ್ಳಿ, ಮೊದಲಗೆರಾ ಹೀಗೆ ನಾಲ್ಕು ಉಪಕೇಂದ್ರಗಳು ಸೇರಿ ಒಟ್ಟು 38 ಸಂಘಗಳು ಕೆಎಂಎಫ್‌ನೊಂದಿಗೆ ನೋಂದಾಯಿಸಿಕೊಂಡು ತಾಲೂಕಿನ ಹೈನೋದ್ಯಮವನ್ನು ಸದೃಢಗೊಳಿಸಲಾರಂಭಿಸಿವೆ.

ಗ್ರಾಮೀಣ ಭಾಗದಲ್ಲಿ ಸಂಗ್ರಹವಾಗುವ ಹಾಲು ಕೆಡದಂತೆ ಶೇಖರಣೆ ಮಾಡಲು ಜತಗಾ-ಗೌಳಿವಾಡ ಮತ್ತು ಗುಂಡೊಳ್ಳಿಯಲ್ಲಿ ಹಾಲು ಶಿಥಿಲೀಕರಣಗೊಳಿಸುವ ಬಿಎಂಸಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಪ್ರತಿದಿನವೂ ತಾಲೂಕಿನಿಂದ ಹಾಲು ಧಾರವಾಡದ ಕೆಎಂಎಫ್‌ಗೆ ಸರಬರಾಜಾಗುತ್ತಿದೆ. ಹೈನುಗಾರಿಕೆಗೆ ಉತ್ತಮ ಭವಿಷ್ಯವಿರುವುದನ್ನು ತಾಲೂಕಿನ ರೈತಾಪಿ ವರ್ಗವು ಮನಗಂಡಿದ್ದರಿಂದ ಹೈನೋಧ್ಯಮವು ಬೆಳೆಯುವ ನಿರೀಕ್ಷೆಯಿದೆ.

ಹೈನುಗಾರಿಕೆಗೆ ಸರ್ಕಾರದಿಂದ ದೊರೆಯುವ ಸವಲತ್ತು ಬಗ್ಗೆ ಹೈನೋದ್ಯಮದ ಬೆಳವಣಿಗೆಗೆ ಬೇಕಾದ ಸಕಲ ಮಾರ್ಗದರ್ಶನ ಸಹಕಾರವನ್ನು ಇಲಾಖೆ ನೀಡುತ್ತಿದೆ. ಕ್ಷೇತ್ರದಲ್ಲಿ ಹೈನೋದ್ಯಮ ಬೆಳವಣಿಗೆಗೆ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ನಿರಂತರ ಸಹಕಾರ ನೀಡುತ್ತಿದ್ದಾರೆ.-ಡಾ.ಕೆ.ಎಂ. ನದಾಫ್‌, ಮುಖ್ಯ ಪಶು ವೈದ್ಯಾಧಿಕಾರಿ ಹಳಿಯಾಳ

ಹೈನೋದ್ಯಮ ಬೆಳವಣಿಗೆಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ, ಕೆಎಂಎಫ್‌ನವರು ಹಾಲು ಉತ್ಪಾದಕರಿಗೆ ನೀಡುವ ಸೌಲಭ್ಯಗಳು, ಆರ್ಥಿಕ, ವಿಮಾ ಸವಲತ್ತುಗಳ ಪರಿಣಾಮ ತಾಲೂಕಿನಲ್ಲಿ ಹೈನೋದ್ಯಮ ಬೆಳವಣಿಗೆ ಉತ್ತಮ ಅವಕಾಶಗಳಿವೆ. ಈ ಹಿಂದೆನಂತೆ ಈಗ ಅಳತೆಯಲ್ಲಿ, ಹಾಲಿನ ಗುಣಮಟ್ಟ ಪರಿಶೀಲನೆಯಲ್ಲೂ ವಂಚನೆಯಾಗುತ್ತಿಲ್ಲ. ಕೆಎಂಎಫ್ ಹಾಲಿಗೆ ಉತ್ತಮ ದರ ನೀಡುತ್ತಿದೆ. -ಶಿವದೇವ ದೇಸಾಯಸ್ವಾಮಿ, ಹೈನೋದ್ಯಮಿ