ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಬೇಕು. ಸಂಗೀತ, ನೃತ್ಯ ಸಾಂಸ್ಕೃತಿಕ ಸದಭಿರುಚಿಯಿಂದ ಮನಸ್ಸು ಅರಳುವುದು ಎಂದು ಗದುಗಿನ ವಿಜಯ ಲಲಿತ ಕಲಾ ಸಂಸ್ಥೆಯ ಅಧ್ಯಕ್ಷ ಅಶೋಕ ಅಕ್ಕಿ ಹೇಳಿದರು.
ಗದಗ: ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಬೇಕು. ಸಂಗೀತ, ನೃತ್ಯ ಸಾಂಸ್ಕೃತಿಕ ಸದಭಿರುಚಿಯಿಂದ ಮನಸ್ಸು ಅರಳುವುದು ಎಂದು ಗದುಗಿನ ವಿಜಯ ಲಲಿತ ಕಲಾ ಸಂಸ್ಥೆಯ ಅಧ್ಯಕ್ಷ ಅಶೋಕ ಅಕ್ಕಿ ಹೇಳಿದರು. ಅವರು ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆಯ ರಾಜೇಶ್ವರಿ ಕಲಾ ಕುಟೀರದ 24ನೇ ವಾರ್ಷಿಕೋತ್ಸವ ಸಮಾರಂಭ, ಸಂಗೀತ ನೃತ್ಯೋಲ್ಲಾಸ-2025 ಮಹಾಶಿವರಾತ್ರಿ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಗೀತ, ನೃತ್ಯ, ಚಿತ್ರಕಲೆ ಸಾಂಸ್ಕೃತಿಕ ಸಾಹಿತ್ಯಿಕ ಸಂಘಟನೆಗಳನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಸಂಘಟಿಕರ ಸಂಕಟ ಅನುಭವಿಸಿದವರಿಗೇ ಗೊತ್ತು. ಇವು ಲಾಭವನ್ನು ಕೊಡುವುದಿಲ್ಲ ಆದರೆ ಮಾನಸಿಕ ನೆಮ್ಮದಿ ಸಂತೃಪ್ತಿಯನ್ನು ನೀಡಬಲ್ಲವು. ಗದಗ ಪರಿಸರದಲ್ಲಿ ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆಯ ರಾಜೇಶ್ವರಿ ಕಲಾ ಕುಟೀರ ಕಳೆದ 24 ವರ್ಷಗಳಿಂದ ಗದಗ ಪರಿಸರದಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಗಣನೀಯ ಕಾರ್ಯ ಮಾಡಿದೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿ, ರಂಗನಿರ್ದೆಶಕ ನಿಂಗು ಸೊಲಗಿ ಮಾತನಾಡಿ, ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಹೊರಹೊಮ್ಮಿಸಲು ಇಂತಹ ಸಂಘಟನೆ, ವೇದಿಗಳು ಅಗತ್ಯ. ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸಲು ಪಾಲಕ ಪೋಷಕರೂ ಮುಂದಾಗಬೇಕೆಂದರು. ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಉದ್ಯಮಿ ವಿಜಯಕುಮಾರ ಗಡ್ಡಿ, ಪತ್ರಕರ್ತ, ಹವ್ಯಾಸಿ ಕಲಾವಿದ ಮೌನೇಶ ಬಡಿಗೇರ, ಉಪನ್ಯಾಸಕ ಡಾ. ದತ್ತಪ್ರಸನ್ನ ಪಾಟೀಲ ಮುಂತಾದವರು ಮಾತನಾಡಿದರು. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜೇಶ್ವರಿ ಕಲಾ ಕುಟೀರದ ಸಂಸ್ಥಾಪಕ ಅಧ್ಯಕ್ಷ ಗಜಾನನ ವೇರ್ಣೆಕರ ಕಳೆದ 24 ವರ್ಷಗಳಿಂದ ಗದಗ ಪರಿಸರದಲ್ಲಿ ಸಂಗೀತ, ನೃತ್ಯ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಸಂಸ್ಥೆ ಪರಿಶ್ರಮಿಸಿದೆ. ಕಲಾಭಿಮಾನಿಗಳು, ಚುನಾಯಿತ ಪ್ರತಿನಿಧಿಗಳು ಪ್ರೋತ್ಸಾಹ ಸಹಾಯ ಮಾಡಿದರೆ ಸಂಸ್ಥೆ ಸದೃಢಗೊಂಡು ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಕಾರ್ಯ ಮಾಡಲಿದೆ ಎಂದರು. ಮಹಾಶಿವರಾತ್ರಿಯ ಶಿವಸ್ತುತಿಯ ನೃತ್ಯರೂಪಕದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪೂಜಾ ವೇರ್ಣೆಕರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿನಿಯರ ಹಲವು ತಂಡಗಳಿಂದ ವೈವಿಧ್ಯಮಯ ಸಂಗೀತದ ನೃತ್ಯೋಲ್ಲಾಸವು ಪ್ರೇಕ್ಷಕರ ಮನ ಸೆಳೆಯಿತು. ಜ್ಯೋತಿ ಹೆರಲಗಿ ನಿರೂಪಿಸಿದರು. ನೃತ್ಯ ನಿರ್ದೆಶಕಿ ಮಾಲಾ ತಂಬ್ರಳ್ಳಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.