ಕನಕಪುರ: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಬೆಳೆ ನಾಶವಾಗಿದೆ. ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಜನರ ಕಷ್ಟ ನೋಡಲು ಬಂದ ಸಚಿವ ಎಚ್.ಸಿ.ಬಾಲಕೃಷ್ಣ ಅವರು ಕನಕಪುರದಲ್ಲಿ ಕಾಟಾಚಾರಕ್ಕೆ ಬಂದು ಬರ ವೀಕ್ಷಣೆ ಮಾಡಿ ಹೋಗಿದ್ದಾರೆ ಎಂದು ರೈತ ಮುಖಂಡ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಆರೋಪಿಸಿದರು.
ಕಾವೇರಿ ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕದಿಂದ ಪ್ರತಿದಿನ 12,500 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಬೇಕು ಎಂಬ ತೀರ್ಮಾನ ಅವೈಜ್ಞಾನಿಕ. ಸರ್ಕಾರ ಈ ತೀರ್ಮಾನವನ್ನ ತಿರಸ್ಕರಿಸಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ನೀರು ಕೊಡೋಕೆ ಸಾಧ್ಯವಿಲ್ಲ ಅಂತ ನಿರ್ಣಯ ತೆಗೆದುಕೊಳ್ಳಬೇಕು. ಸರ್ಕಾರ ರೈತರ ಹಿತ ಕಾಪಾಡದಿದ್ದರೆ ರಾಜ್ಯಾದ್ಯಂತ ಚಳವಳಿ ಮಾಡುವುದಾಗಿ ಎಚ್ಚರಿಸಿದರು.
ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಇದು ಕೇವಲ ಬಾಲಕೃಷ್ಣ ಅವರ ವೈಫಲ್ಯ ಅಲ್ಲ, ಇದು ಇಡೀ ರಾಜ್ಯಸರ್ಕಾರದ ವೈಫಲ್ಯ. ಕಾಟಾಚಾರದ ಬರ ವೀಕ್ಷಣೆ ನಮಗೆ ಬೇಡ. ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ. ರಾಜ್ಯದಲ್ಲಿ ಬರ ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಕೆ ಕೆ ಪಿ ಸುದ್ದಿ 03: