ದಾಬಸ್ಪೇಟೆ: ಇಂದಿನ ದಿನಗಳಲ್ಲಿ ನಗರ ಪ್ರದೇಶವೆಲ್ಲಾ ಕಾಂಕ್ರೀಟೀಕರಣವಾಗುತ್ತಿದ್ದು ಮುಂದಿನ ದಿನಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಲಿದೆ. ಪ್ರತಿಯೊಬ್ಬರು ಈಗಲೇ ಎಚ್ಚೆತ್ತುಕೊಂಡು ಮನೆಯ ಅಕ್ಕಪಕ್ಕ, ರಸ್ತೆ ಬದಿಗಳಲ್ಲಿ ಗಿಡಗಳನ್ನು ಬೆಳೆಸಬೇಕು ಎಂದು ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು ತಿಳಿಸಿದರು.
ನೆಲಮಂಗಲದ ಲೋಹಿತ್ ನಗರದ ಎಬಿಬಿ ಕಂಪನಿ ಸಮೀಪದ ಬಡಾವಣೆಯಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವು ಬಡಾವಣೆಗಳಲ್ಲಿ ಒಂದೂ ಮರ ಇಲ್ಲದಿರುವ ಕಾರಣ ಎನ್ಪಿಎ ವತಿಯಿಂದ ಸಸಿ ನೆಟ್ಟು ಪೋಷಣೆ ಮಾಡುವ ಕಾರ್ಯಕ್ರಮ ರೂಪಿಸಲಾಗಿದೆ. ನಾನೇ ಸ್ವತಃ 500 ಸಸಿ ನೆಟ್ಟು ಪೋಷಿಸುವ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಹಿಂದೆ ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ನೆಟ್ಟಿದ್ದ ಸಾವಿರಾರು ಗಿಡಗಳು ದೊಡ್ಡ ಮರಗಳಾಗಿ ಬೆಳೆದು ನೆರಳು ನೀಡುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.ಮಾಜಿ ಶಾಸಕರ ವಿರುದ್ದ ವಾಗ್ದಾಳಿ:
ಎಂ.ಕೆ.ನಾಗರಾಜು ಮಾತನಾಡಿ, ಹಾಲಿ ಶಾಸಕರು ಮಹಿಳೆಯರ ಕೈಯಲ್ಲಿ ರಂಗೋಲಿ ಬಿಡಿಸಿಕೊಂಡು ಓಡಾಡುತ್ತಿದ್ದಾರೆಯೇ ಹೊರತು ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಮಾಜಿ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ಆರೋಪಿಸಿರುವುದು ಸರಿಯಲ್ಲ. ಅವರು 10 ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಲಿಲ್ಲ ಎಂಬುದನ್ನು ಕ್ಷೇತ್ರದ ಜನತೆಗೆ ಚೆನ್ನಾಗಿ ಗೊತ್ತಿದೆ. ಹಾಲಿ ಶಾಸಕರು ಸೋಲೂರನ್ನು ನೆಲಮಂಗಲಕ್ಕೆ ಸೇರ್ಪಡೆಗೊಳಿಸಿ, ಒಳಚರಂಡಿ ಯೋಜನೆಗೆ ಅನುಮೋದನೆ ಕೊಡಿಸಿ, ಕಾವೇರಿ ನೀರು ಪೂರೈಕೆಯ ಪ್ರಸ್ತಾವನೆ ಸಲ್ಲಿಸಿ, 220 ಕೆವಿ ವಿದ್ಯುತ್ ಸ್ಥಾವರ ಸ್ಥಾಪಿಸಿ ಹಾಗೂ ಸೊಂಡೆಕೊಪ್ಪ, ಕೆಂಪಲಿಂಗನಹಳ್ಳಿ, ಬಿನ್ನಮಂಗಲ, ತ್ಯಾಮಗೊಂಡ್ಲು ರಸ್ತೆಗಳನ್ನು ದ್ವಿಪಥ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ಪ್ರತಿ ಗ್ರಾಪಂಗೆ 20 ಕೋಟಿ ರು.ಗಳಿಗೂ ಅಧಿಕ ವೆಚ್ಚದ ಕೆಲಸಗಳು ನಡೆದಿರುವುದಕ್ಕೆ ಸ್ಪಷ್ಟ ಸಾಕ್ಷಿಗಳಿವೆ. ಆರೋಪ ಮಾಡುವ ಮುನ್ನ ಅವರಿಗೆ ವಾಸ್ತವದ ಅರಿವಿರಲಿ ಎಂದು ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.ಈ ಸಂದರ್ಭದಲ್ಲಿ ಎನ್ಪಿಎ ಸದಸ್ಯ ಅಂಜನಮೂರ್ತಿ, ಸಹಾಯಕ ನಿರ್ದೇಶಕ ಶಿವನಂಜಪ್ಪ, ಕಾಂಗ್ರೆಸ್ ಮುಖಂಡರಾದ ಹನುಮಂತೇಗೌಡ, ಸುರೇಶ್, ಬೈರಶೆಟ್ಟಿಹಳ್ಳಿ ರವಿಕುಮಾರ್ ಹಾಗೂ ಪ್ರಾಧಿಕಾರದ ಸಿಬ್ಬಂದಿ ಉಪಸ್ಥಿತರಿದ್ದರು.
ಪೋಟೋ 1 :
ನೆಲಮಂಗಲದ ಲೋಹಿತ್ ನಗರದ ಬಡಾವಣೆಯಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು ಚಾಲನೆ ನೀಡಿದರು.