ಕನ್ನಡಪ್ರಭ ವಾರ್ತೆ ಬೆಂಗಳೂರು

ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಬೇಸರಗೊಂಡು ಆತ್ಮಹತ್ಯೆ ಯತ್ನಿಸಿದ್ದ 16 ವರ್ಷದ ಬಾಲಕಿ ಸೇರಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ಪೀಣ್ಯ ಮತ್ತು ಕಾಡುಗೋಡಿ ಠಾಣೆಗಳ ಹೊಯ್ಸಳ ಪೊಲೀಸರು ರಕ್ಷಿಸಿದ್ದಾರೆ. ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನ ಜತೆ ಹಸೆಮಣೆ ತುಳಿದಳು ಎಂದು ಜಿಗುಪ್ಸೆಯಿಂದ ಆತ್ಮಹತ್ಯೆ ಯತ್ನಿಸಿದ್ದ ಆಟೋ ಚಾಲಕನನ್ನು ಪೀಣ್ಯ ಪೊಲೀಸರು ರಕ್ಷಿಸಿದ್ದಾರೆ.

ಎಚ್‌ಎಸ್‌ಆರ್ ಲೇಔಟ್‌ ನಿವಾಸಿ ಅಭಿಷೇಕ್ ಪೀಣ್ಯ ಹತ್ತಿರ ಖಾಸಗಿ ಶಾಲೆ ಸನಿಹ ಮಂಗಳವಾರ ರಾತ್ರಿ ಆತ ಆತ್ಮಹತ್ಯೆ ಯತ್ನಿಸಿದ್ದ. ಈ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112)ಗೆ ಸಾರ್ವಜನಿಕರು ವಿಷಯ ಮುಟ್ಟಿಸಿದರು. ಮಾಹಿತಿ ಪಡೆದು ತಕ್ಷಣವೇ ಹೊಯ್ಸಳ ವಾಹನದ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಕೆಂಪನಂಜಯ್ಯ ಹಾಗೂ ಹೆಡ್ ಕಾನ್‌ಸ್ಟೇಬಲ್ ತಿಪ್ಪೇಸ್ವಾಮಿ ರಕ್ಷಣೆಗೆ ಧಾವಿಸಿ ಆತನಿಗೆ ಸ್ವಾಂತನ ಹೇಳಿ ಠಾಣೆಗೆ ಕರೆತಂದು ಕುಟುಂಬದವರಿಗೆ ಪೊಲೀಸರು ಒಪ್ಪಿಸಿದ್ದಾರೆ.

ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಅಭಿಷೇಕ್‌, ಹಲವು ವರ್ಷಗಳ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಈ ಪ್ರೀತಿಗೆ ಆಕೆಯ ಪೋಷಕರ ವಿರೋಧವಿತ್ತು. ಕೊನೆಗೆ ತನ್ನ ಕುಟುಂಬದವರು ತೋರಿಸಿದ ಯುವಕನೊಂದಿಗೆ ಆಕೆಯ ವಿವಾಹವಾಯಿತು. ಈ ವಿಷಯ ತಿಳಿದು ಖಿನ್ನತೆಗೊಳಗಾಗಿದ್ದ ಅಭಿಷೇಕ್‌, ನಾಗಸಂದ್ರ ಸಮೀಪದಲ್ಲಿದ್ದ ಸ್ನೇಹಿತನ ಭೇಟಿಗೆ ರಾತ್ರಿ ಬಂದಿದ್ದ. ಆ ವೇಳೆ ಆತ ಆತ್ಮಹತ್ಯೆ ತೀರ್ಮಾನ ಮಾಡಿದ್ದಾನೆ.

ಸೋದರ ಮಾವನ ಕಾಟ


ತನ್ನ ಮಾವನ ಕಾಟದಿಂದ ಬೇಸತ್ತು ಆತ್ಮಹತ್ಯೆ ಯತ್ನಿಸಿದ್ದ 16 ವರ್ಷ ಬಾಲಕಿಯನ್ನು ಕಾಡುಗೋಡಿ ಠಾಣೆ ಪೊಲೀಸರು ಕಾಪಾಡಿದ್ದಾರೆ. ಮನೆಯಲ್ಲಿ ಮಾತ್ರೆ ಸೇವಿಸಿದ್ದಲ್ಲದೆ ಕೈ ಕೊಯ್ದುಕೊಂಡು ಬಾಲಕಿ ಪ್ರಾಣ ತ್ಯಾಗಕ್ಕೆ ಮುಂದಾಗಿದ್ದಳು. ಆಗ ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ-112) ಕರೆ ಮಾಡಿ ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಬಾಲಕಿಯನ್ನು ರಕ್ಷಿಸಿ ಎಎಸ್‌ಐ ಶಿವರಾಜ್ ಹಾಗೂ ಕಾನ್‌ಸ್ಟೇಬಲ್ ಅನಿಲ್ ಕುಮಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.