ಸಚಿವರು ಲಿಂಗಾಯತ, ಮರಾಠರ ಮಧ್ಯ ಜಗಳ ಹಚ್ತಾರೆ: ಭಗವಂತ ಖೂಬಾ ಆರೋಪ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಸ್ವಾತಂತ್ರ ಭಾರತದಲ್ಲಿ ಕೆಲವೊಂದು ಕುಟುಂಬಗಳು ಮಾತ್ರ ಅಭಿವೃದ್ಧಿಯಾಗಿವೆ. ಅದರಲ್ಲಿ ಭಾಲ್ಕಿಯ ಶಾಸಕರ ಕುಟುಂಬವೂ ಒಂದು. ಬೇರೆಯವರನ್ನು ಬೆಳೆಯಲು ಇವರು ಎಂದಿಗೂ ಬಿಟ್ಟಿಲ್ಲ. ಕೇವಲ ತನ್ನ ಕುಟುಂಬದ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ ಎಂದು ಕುಟುಂಬ ರಾಜಕಾರಣದ ವಿರುದ್ಧ ಕೇಂದ್ರ ಸಚಿವರು ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಬೀದರ್

ಕಾಂಗ್ರೆಸ್‌ನವರು ಕೆಟ್ಟ ರಾಜಕಾರಣ ಮಾಡುತ್ತಾರೆ, ಜಾತಿಗಳ ಮಧ್ಯ, ಕುಟುಂಬಗಳ ಮಧ್ಯೆ, ಬಡವರಿಗೆ ಸಾರಾಯಿ, ಹಣ ಹಂಚಿ ಚುನಾವಣೆ ಗೆಲ್ಲುತ್ತಾರೆ. ಇದೇ ಚಾಳಿಯನ್ನು ಭಾಲ್ಕಿ ಶಾಸಕರು ಹಾಗೂ ಉಸ್ತುವಾರಿ ಸಚಿವರು ಲಿಂಗಾಯತ ಮತ್ತು ಮರಾಠ ಜನರ ಮಧ್ಯೆ ಜಗಳ ಹಚ್ಚುತ್ತಾರೆ. ಚುನಾವಣೆಯಲ್ಲಿ ಹಣ, ಹೆಂಡ ಹಂಚಿ ಗೆಲ್ಲುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.

ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದಲ್ಲಿ ಆಯೋಜಿಸಲಾದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಕೆಲವೊಂದು ಕುಟುಂಬಗಳು ಅಭಿವೃದ್ಧಿಯಾದವು, ಅದರಲ್ಲಿ ಭಾಲ್ಕಿಯ ಶಾಸಕರ ಕುಟುಂಬವೂ ಒಂದು. ಬೇರೆಯವರನ್ನು ಬೆಳೆಯಲು ಇವರು ಎಂದಿಗೂ ಬಿಟ್ಟಿಲ್ಲ. ಕೇವಲ ತನ್ನ ಕುಟುಂಬದ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ ಎಂದು ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದರು.

ದೇಶಕ್ಕೆ ಸ್ವಾತಂತ್ರ ಬಂದಾಗ ದೇಶದ ಪ್ರಧಾನಿ ಸರ್ದಾರ್‌ ವಲ್ಲಭಭಾಯಿ ಪಟೇಲರು ಆಗಬೇಕಿತ್ತು, ಆದರೆ ದುರ್ದೈವದಿಂದ ಜವಾಹರಲಾಲ್‌ ನೆಹರು ಪ್ರಧಾನಿಯಾದರು, ನೆಹರು ಪ್ರಧಾನಿಯಾದ ಮೇಲೆ ದೇಶ ಅಭಿವೃದ್ಧಿಯಾಗಲಿಲ್ಲ ಎಂದು ನುಡಿದರು.

ಕಳೆದ 60 ವರ್ಷಗಳಿಂದ ಭಾಲ್ಕಿಯಲ್ಲಿ ಒಂದೇ ಕುಟುಂಬದಿಂದ ತಂದೆಯಿಂದ ಹಿಡಿದು ಮಕ್ಕಳವರೆಗೆ ಅಧಿಕಾರದಲ್ಲಿದ್ದರು. ಬಡವರ ಮಕ್ಕಳಿಗೆ ಆಟವಾಡಲು ಒಂದು ಕ್ರೀಡಾಂಗಣ ನಿರ್ಮಿಸಲು ಆಗಿಲ್ಲ. ಭಾಲ್ಕಿಯಲ್ಲಿ ಸರ್ಕಾರಿ ಕಾಲೇಜುಗಳಿಲ್ಲ, ಸರ್ಕಾರಿ ವಸತಿ ನಿಲಯಗಳಿಲ್ಲ, ಇರುವ ವಸತಿ ನಿಲಯಗಳು ಖಾಸಗಿ ಕಟ್ಟಡದಲ್ಲಿವೆ. ಈ ಪರಿಸ್ಥಿತಿ ಭಾಲ್ಕಿಯಲ್ಲಿರುವುದಕ್ಕೆ ಕಾರಣ, ನಮ್ಮ ಪಕ್ಷದಿಂದ ಶಾಸಕರು ಇಲ್ಲದಿರುವದರಿಂದ ಎಂದು ತಿಳಿಸಿದರು.

ಸಂಸದನಾದ ಮೇಲೆ ಬೀದರ್‌ ಕ್ಷೇತ್ರದಲ್ಲಿ 12 ರಾಷ್ಟ್ರೀಯ ಹೆದ್ದಾರಿಗಳು, ಪಾಸ್‌ಪೋರ್ಟ್‌ ಕೇಂದ್ರ, ಏರಪೋರ್ಟ, ಹೆಚ್ಚುವರಿ ರೈಲು ಸೇವೆ, ಸಿಪೆಟ್‌ ಕಾಲೇಜು, ಸೈನಿಕ ಶಾಲೆ ಮುಂತಾದ ಕೆಲಸಗಳನ್ನು ನಾನು ಮಾಡಿಸಿರುವೆ. ಇದರ ಜೊತೆಗೆ ಫಸಲ್ ಬಿಮಾ ಯೋಜನೆಯಡಿ 600 ಕೋಟಿ ರು. ಪರಿಹಾರ ಕೊಡಿಸಿರುವೆ. ಆದರೆ ಭಾಲ್ಕಿ ಶಾಸಕರು ನನ್ನ ಅಭಿವೃದ್ಧಿ ಬಗ್ಗೆ ಹೊಟ್ಟೆಕಿಚ್ಚು ಪಟ್ಟು, ಇಲ್ಲ ಸಲ್ಲದ ಆರೋಪ ಮಾಡುತ್ತಾರೆ ಎಂದು ಶಾಸಕರ ನಡೆ ಬಗ್ಗೆ ಅಕ್ರೋಷ ವ್ಯಕ್ತಪಡಿಸಿದರು.

ಈ ಕ್ಷೇತ್ರಕ್ಕೆ ನನ್ನನ್ನು 3ನೇ ಬಾರಿಗೆ ಸಂಸದನಾಗಿ ಮಾಡುವುದರೊಂದಿಗೆ, ಮೋದಿ ಅವರಿಗೆ 3ನೇ ಬಾರಿಗೆ ದೇಶದ ಪ್ರಧಾನಿಯನ್ನಾಗಿ ಮಾಡಲು ಎಲ್ಲಾ ಜನರು ಆಶೀರ್ವಾದ ಮಾಡುವಂತೆ ಮನವಿಸಿ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳಿಗೆ ಬ್ಯಾಂಕ್‌ ಚೆಕ್‌, ಉಜ್ವಲ್‌ ಯೋಜನೆಯಡಿ ಗ್ಯಾಸ ವಿತರಣೆ, ಸುಕನ್ಯಾ ಸಮೃದ್ಧಿ ಹಾಗೂ ಇತರೆ ಯೋಜನೆಗಳಡಿಯ ಪಾಸ್‌ ಬುಕ್‌ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಶಿವರಾಜ ಗಂದಗೆ, ಮುಖಂಡರಾದ ಕಿಶನರಾವ್‌ ಪಾಟೀಲ್‌ ಇಂಚೂರಕರ್‌ ಇತರರು ಉಪಸ್ಥಿತರಿದ್ದರು.

Share this article