ಕಂಪ್ಲಿ ಉತ್ಸವಕ್ಕೆ ಸಚಿವ ಜಮೀರ್ ಚಾಲನೆ

KannadaprabhaNewsNetwork |  
Published : Feb 13, 2026, 02:15 AM IST
ಕಂಪ್ಲಿ ಉತ್ಸವಕ್ಕೆ ಸಚಿವ ಜಮೀರ್ ಚಾಲನೆ | Kannada Prabha

ಸಾರಾಂಶ

ರಾಜ್ಯದಲ್ಲೇ ತಾಲೂಕು ಮಟ್ಟದಲ್ಲಿ ಇಷ್ಟೊಂದು ವೈಭವದಿಂದ ಉತ್ಸವ ನಡೆಯುತ್ತಿರುವುದು ಕಂಪ್ಲಿಯಲ್ಲೇ ಎನ್ನುವುದು ಹೆಮ್ಮೆಯ ಸಂಗತಿ

ಕಂಪ್ಲಿ: ಪಟ್ಟಣದ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಂಪ್ಲಿ ಉತ್ಸವದ ಅಂಗವಾಗಿ ನಿರ್ಮಿಸಲಾಗಿದ್ದ ಭವ್ಯ ಕಂಪಿಲರಾಯ ವೇದಿಕೆಯಲ್ಲಿ ಕಂಪ್ಲಿ ಉತ್ಸವಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಗುರುವಾರ ಚಾಲನೆ ನೀಡಿದರು. ವೇದಿಕೆಯಲ್ಲಿ ಕಂಪ್ಲಿಯ ಇತಿಹಾಸ, ಪರಂಪರೆ ಹಾಗೂ ಕಂಪಿಲರಾಯ ಮತ್ತು ಗಂಡುಗಲಿ ಕುಮಾರರಾಮರ ಶೌರ್ಯ ಸಾಹಸವನ್ನು ಕೊಂಡಾಡಿದ ಅವರು, ಉತ್ಸವದ ವೈಭವವನ್ನು ಪ್ರಶಂಸಿಸಿದರು.

2027ರ ಕಂಪ್ಲಿ ಉತ್ಸವವನ್ನು ಈ ಬಾರಿಗಿಂತಲೂ ಹೆಚ್ಚಿನ ಅದ್ಧೂರಿಯಿಂದ ಆಚರಿಸಲಾಗುವುದು. ಆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಘೋಷಿಸಿದರು. ರಾಜ್ಯದಲ್ಲೇ ತಾಲೂಕು ಮಟ್ಟದಲ್ಲಿ ಇಷ್ಟೊಂದು ವೈಭವದಿಂದ ಉತ್ಸವ ನಡೆಯುತ್ತಿರುವುದು ಕಂಪ್ಲಿಯಲ್ಲೇ ಎನ್ನುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಂಪ್ಲಿ, ಕುರುಗೋಡು ಉತ್ಸವಗಳ ಆಚರಣೆಗೆ ಶಾಸಕ ಜೆ.ಎನ್. ಗಣೇಶ್ ಅಪಾರ ಶ್ರಮ ವಹಿಸಿದ್ದಾರೆ. 2018ರಿಂದ 2023ರವರೆಗೆ ತಮ್ಮ ಮೊದಲ ಅವಧಿಯಲ್ಲಿ ₹3 ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಿದ್ದಾರೆ. 300 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಗಣೇಶ್ ಅವರಂತಹ ಶಾಸಕರು ಅಪರೂಪದಲ್ಲೇ ಅಪರೂಪ. ಜನತೆ ಸದಾ ಅವರ ಕೈಹಿಡಿದು ಅಭಿವೃದ್ಧಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಬಡ, ಹಿಂದುಳಿದ ಹಾಗೂ ಶ್ರಮಿಕ ವರ್ಗದ ಪರವಿರುವ ಸರ್ಕಾರವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಈ ಅವಧಿಯಲ್ಲಿ 80 ಸಾವಿರಕ್ಕೂ ಅಧಿಕ ಮನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ನಾಗೇಂದ್ರ, ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲಾಗಿದ್ದ ಕಂಪ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಹೊಂದಿದೆ. ಕಂಪ್ಲಿ ಜನರ ಹಿತಕ್ಕಾಗಿ ಕಂಪಿಲರಾಯರು ಶಾಸಕ ಗಣೇಶ್ ರೂಪದಲ್ಲಿ ಮರುಜನ್ಮ ಪಡೆದಂತಾಗಿದೆ ಎಂದು ಕೊಂಡಾಡಿದರು.

ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಕಂಪ್ಲಿ ಕ್ಷೇತ್ರದ ಜನತೆ ನೀಡಿದ ಆಶೀರ್ವಾದವನ್ನು ನಾನು ಎಂದಿಗೂ ಮರೆಯುವುದಿಲ್ಲ. ಕೊನೆ ಉಸಿರು ಇರುವವರೆಗೂ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ. ಕಂಪ್ಲಿಯನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ರೂಪಿಸುವೆ” ಎಂದು ಹೇಳಿದರು.

ನೂತನ ಕಂಪ್ಲಿ- ಗಂಗಾವತಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನೊತ್ತಾಯಿಸಿ ₹120 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಶೀಘ್ರದಲ್ಲೇ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಇದೇ ವೇಳೆ ಕಂಪ್ಲಿ ಮತ್ತು ಕುರುಗೋಡುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ, 100 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ, ಕಂಪ್ಲಿ ಸೋಮಪ್ಪ ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಶಾಸಕ ನಾರಾ ಭರತ್ ರೆಡ್ಡಿ, ಮುಖಂಡರಾದ ಮುಂಡರಗಿ ನಾಗರಾಜ, ಚಿದಾನಂದ್, ಶ್ರೀನಿವಾಸ ರಾವ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಮುಖಂಡರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯವರಿಗೆ ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಗಳು ಕಾಣಿಸ್ತಿಲ್ಲ-ಸಂಜೀವಕುಮಾರ ನೀರಲಗಿ
ಕಂಪ್ಲಿ ಉತ್ಸವದಲ್ಲಿ ರಂಗಿನ ರಂಗೋಲಿ- ಮೆಹೆಂದಿ ಸಂಭ್ರಮ