ಕನ್ನಡಪ್ರಭ ವಾರ್ತೆ ಬೀದರ್
ಮುಸ್ಲಿಂ ಸಮುದಾಯದ ಮತಗಳಿಂದಲೇ ಕಾಂಗ್ರೆಸ್ನ ಸಾಗರ ಖಂಡ್ರೆ ಗೆದ್ದಿದ್ದು, ಅವರ ತಂದೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ಮುಸ್ಲಿಮರ ಕೆಲಸಗಳನ್ನು ತಲೆಬಾಗಿ ಮಾಡಬೇಕಾಗುತ್ತದೆ. ನಾನು ಅದನ್ನು ಮಾಡಿಸಿ ಕೊಡುತ್ತೇನೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಬೀದರ್ನಲ್ಲಿ ಸೋಮವಾರ ನಡೆದ ವಕ್ಫ್ ಅದಾಲತ್ನಲ್ಲಿ ಸಚಿವರು ಈ ಹೇಳಿಕೆ ನೀಡಿದ್ದು, ಅವರ ಹೇಳಿಕೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅದಾಲತ್ನಲ್ಲಿ ಮಾತನಾಡಿದ ವ್ಯಕ್ತಿಯೊಬ್ಬರು, ಸರ್ವೆ ನಂಬರ್ 93ರ ಸ್ಮಶಾನ ಭೂಮಿ ಅರಣ್ಯ ಪ್ರದೇಶ ಎಂದು ವಿನಾ ಕಾರಣ ಅಡ್ಡಿಪಡಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಆಗ, ಅಕ್ಕ-ಪಕ್ಕದಲ್ಲಿ ಎಲ್ಲೂ ಜಾಗ ಇಲ್ವಾ ಎಂದು ಸಚಿವರು ಆ ವ್ಯಕ್ತಿಯನ್ನು ಪ್ರಶ್ನಿಸಿದರು. ಅದಕ್ಕೆ ಆ ವ್ಯಕ್ತಿ, ಅಕ್ಕ-ಪಕ್ಕದಲ್ಲಿ ಎಲ್ಲೂ ಖಾಲಿ ಜಾಗ ಇಲ್ಲ, ಮೊದಲಿನಿಂದಲೂ ಅಲ್ಲೆ ಅಂತ್ಯಕ್ರಿಯೆ ಮಾಡ್ತೀವಿ ಎಂದರು. ಆಗ ಜಮೀರ್ ಅವರು, ಸಾಗರ ಖಂಡ್ರೆ ಜಯಕ್ಕೆ ‘ಮುಸ್ಲಿಂ ಮತವಷ್ಟೇ’ ಕಾರಣ. "ಝಕ್ ಮಾರ್ ಕೆ ಕಾಮ್ ಕರನಾ ಪಡೆಗಾ " ಎಂದರು. ಉಲ್ಟಾ ಹೊಡೆದ ಜಮೀರ್:
ಬಳಿಕ, ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆ ಎಚ್ಚೆತ್ತ ಜಮೀರ್, ಒಂದೇ ದಿನದಲ್ಲಿ ಉಲ್ಟಾ ಹೊಡೆದಿದ್ದಾರೆ. ಜಿಪಂ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಮುಸ್ಲಿಮರು ಒನ್ ಸೈಡ್ ಮತ ಕೊಟ್ಟಿದ್ದಾರೆ. ಅದಕ್ಕೆ ಸಾಗರ್ ಖಂಡ್ರೆ ಗೆದ್ದಿದ್ದಾರೆ ಅಂದಿದ್ದೆ. ಇದರ ಬಗ್ಗೆ ಸಮಾಜಕ್ಕೆ ಹೇಳಬೇಕು ತಾನೆ, ಮುಸಲ್ಮಾನರು ಓಟ್ ನೀಡದೇ ಗೆಲ್ಲೋದಕ್ಕೆ ಸಾಧ್ಯನಾ?. ಸಾಗರ ಖಂಡ್ರೆ 6 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದಾರೆ. ಮುಸ್ಲಿಮರು 2 ಲಕ್ಷಕ್ಕೂ ಅಧಿಕ ಮತ ಕೊಟ್ಟಿದ್ದಾರೆ, ಇದರಲ್ಲಿ ತಪ್ಪೇನಿದೆ?. ಕೇವಲ ಮುಸ್ಲಿಮರಿಂದ ಮಾತ್ರ ಗೆದ್ದಿದ್ದಾರೆ ಅಂತ ಹೇಳಿಲ್ಲ, ಮುಸ್ಲಿಂ ಸಮುದಾಯ ಒಂದೇ ಅಭ್ಯರ್ಥಿಗೆ ಮತ ಹಾಕಿದ್ದರಿಂದ ಗೆದ್ದಿದ್ದಾರೆ. ಹೀಗಾಗಿ ಏನ್ ಕೆಲಸ ಬೇಕಾದರೂ ಮಾಡಿಸಿಕೊಳ್ಳಬಹುದು ಅಂತ ಹೇಳಿದ್ದೇನೆ ಎಂದರು.