ಧಾರವಾಡ:
ಸಚಿವ ಸಂತೋಷ ಲಾಡ್ ನಗರದ ಸೈದಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.ಜತೆಗೆ ಮಕ್ಕಳೊಂದಿಗೆ ಕುಳಿತು ಊಟ ಸವಿದರು. ಈ ಮೂಲಕ ಹಾಸ್ಟೆಲಿನಲ್ಲಿನ ಊಟದ ಗುಣಮಟ್ಟ ಪರೀಕ್ಷಿಸಿದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರೊಂದಿಗೆ ಶುಕ್ರವಾರ ಸಂಜೆ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಆಗಮಿಸಿದ ಸಚಿವರು, ನೇರವಾಗಿ ಅಡುಗೆ ಕೊಣೆಗೆ ಭೇಟಿ ನೀಡಿ, ಆಹಾರ ತಯಾರಿಕೆ, ಅಡುಗೆ ಪದಾರ್ಥ, ಸ್ವಚ್ಛತೆ, ನೈರ್ಮಲ್ಯ ಪರಿಶೀಲಿಸಿ, ಅಡುಗೆ ಪದಾರ್ಥಗಳ ಗುಣಮಟ್ಟ, ರುಚಿ ಸವಿದರು.ನಂತರ ಊಟದ ಸಭಾಂಗಣದಲ್ಲಿ ವಸತಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಸಂವಾದ ಮಾಡಿ, ಅವರ ಓದು, ಹಾಸ್ಟೆಲ್ ಸೌಲಭ್ಯ, ಇಲಾಖೆ ಅಧಿಕಾರಿಗಳು ತೋರುವ ಕಾಳಜಿ, ಆರೋಗ್ಯ ಸುರಕ್ಷತೆ ಬಗ್ಗೆ ಮಾಹಿತಿ ಪಡೆದರು.
ಸಚಿವರು ಮಾತನಾಡಿ, ಬೇಡಿಕೆ ಅನುಸಾರ ವಸತಿ ನಿಲಯದ ಆಸಕ್ತ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಐಎಎಸ್, ಕೆಎಎಸ್ದಂಥ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು. ನಿಲಯ ಪಾಲಕರಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಿದರು.ವಸತಿನಿಲಯದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ. ಯಾವುದೇ ಕೊರತೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಜ್ಞಾನ ಬೆಳೆಸಲು ಹೆಚ್ಚು ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿನೀಯರು ಇಚ್ಚಿಸಿದಲ್ಲಿ ವಿಶೇಷವಾದ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡುವುದಾಗಿ ಸಚಿವರು ಹೇಳಿದರು.
ಅನಿರೀಕ್ಷಿತವಾಗಿ ಅತಿಥಿಗಳಾಗಿ ಆಗಮಿಸಿದ್ದ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮನೆಯವರಂತೆ ಆತ್ಮೀಯ ಕ್ಷಣಗಳನ್ನು ಕಳೆದ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.ವಿದ್ಯಾರ್ಥಿನಿಯರೊಂದಿಗೆ ಸಚಿವ ಸಂತೋಷ ಲಾಡ್, ಡಿಸಿ ದಿವ್ಯಪ್ರಭು ಮತ್ತು ಮಹಾನಗರಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಚಪಾತಿ, ಸವತಿಕಾಯಿ ಪಲ್ಲೆ, ಅನ್ನ ಸಾಂಬಾರ ಸವಿದರು. ಊಟದ ನಂತರ ವಿದ್ಯಾರ್ಥಿನಿಯರಿಗೆ ಬಾಳೆ ಹಣ್ಣು ನೀಡಲಾಯಿತು.