ಕನ್ನಡಪ್ರಭ ವಾರ್ತೆ ಹೊನ್ನಾವರ
ಇಡಗುಂಜಿಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಾತು ಬಾರದ ದಂಪತಿಯ ಸಮಸ್ಯೆಯನ್ನು ಅರ್ಧ ಗಂಟೆಗಳ ಕಾಲ ಆಲಿಸಿದರು. ಅಗ್ನಿ ಅವಘಡದಿಂದ ಮನೆಗೆ ಹಾನಿಗೊಳಗಾದ ದತ್ತಾತ್ರೇಯ ಈಶ್ವರ ನಾಯ್ಕ ಕುಟುಂಬ ಸಚಿವರಲ್ಲಿ ಮನವಿ ಸಲ್ಲಿಸಿ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಕೋರಿದರು. ಮನೆಯಲ್ಲಿ ದೇವರಿಗೆ ಪೂಜಿಸಿ ಇಟ್ಟ ಆರತಿಯ ಬೆಂಕಿಯಿಂದ ಮನೆಯೆಲ್ಲ ಹತ್ತಿ ಮನೆಯ ಎಲ್ಲಾ ವಸ್ತುಗಳು, ಬಟ್ಟೆ ಬರೆಗಳು ಎಲ್ಲಾ ನಾಶವಾಗಿದೆ. ಇದರಿಂದ ನಮ್ಮ ಕುಟುಂಬಕ್ಕೆ ಈಗ ಉಳಿಯಲು ಸಹ ಜಾಗ ಇರುವುದಿಲ್ಲ, ಹಾಗೆ ಹಾಕಿಕೊಳ್ಳಲು ಬಟ್ಟೆ ಬರೆಗಳು ಸಹ ಇಲ್ಲವಾಗಿದೆ. ನನಗೆ ಹಾಗೂ ನನ್ನ ಪತ್ನಿ ಇಬ್ಬರಿಗೂ ಮಾತು ಬರುವುದಿಲ್ಲ, ಕಿವಿಯು ಕೇಳಿಸುವುದಿಲ್ಲ. ಆದ್ದರಿಂದ ನಮ್ಮ ಜೀವನ ತುಂಬಾ ಕಷ್ಟವಾಗಿದೆ. ಅಂಗವಿಕಲರಾದ ನಮಗೆ ಸರ್ಕಾರದಿಂದ ಸಿಗುವ ಸಹಾಯಧನ ಹಾಗೂ ತಮ್ಮ ಕೈಲಾದಷ್ಟು ಸಹಾಯಧನ ನೀಡಿ ಸಹಕರಿಸಬೇಕು ಎಂದು ಲಿಖಿತ ಮನವಿ ಸಲ್ಲಿಸಿದರು.
ಪತಿ, ಪತ್ನಿ ಇಬ್ಬರು ಮುಖರಾಗಿದ್ದರಿಂದ ಕಷ್ಟಹೇಳಲಾಗದೇ ಕಣ್ಣೀರಿಟ್ಟ ಮನಕಲಕುವ ಘಟನೆ ನಡೆಯಿತು. ಇದರಿಂದ ಸಚಿವರು ಒಮ್ಮೆ ಭಾವುಕರಾಗಿ, ಈಶ್ವರ ನಾಯ್ಕರ 5 ವರ್ಷದ ಪುಟ್ಟ ಬಾಲಕಿಯೊಂದಿಗೆ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಲ್ಲೇ ನಿನಗೆ ಶಿಕ್ಷಣ ನೀಡಿ, ನಿನ್ನ ಶಿಕ್ಷಣದ ಸಂಪೂರ್ಣ ಖರ್ಚುವೆಚ್ಚ ಭರಿಸುವೆ ಎಂದು ವೈಯಕ್ತಿವಾಗಿ ₹25,000 ಧನಸಹಾಯ ನೀಡಿ ಮಾನವೀಯತೆ ಮೆರೆದರು. ಇನ್ನು ಹೆಚ್ಚಿನ ಸಹಾಯ ಒದಗಿಸಿಕೊಡುವುದಾಗಿ ಕುಟುಂಬಕ್ಕೆ ಭರವಸೆ ನೀಡಿದರು. ಅವರಿಗೆ ಮನೆ ನಿರ್ಮಿಸಿಕೊಡಲು ಸೂಕ್ತ ಜಾಗ ಹುಡುಕಿ ಎಂದು ಸ್ಥಳೀಯ ಪ್ರಮುಖರಿಗೆ ತಿಳಿಸಿ, ಎಲ್ಲರೂ ಸೇರಿ ಮನೆ ನಿರ್ಮಿಸಿಕೊಡೋಣ ಎಂದು ಭರವಸೆ ನೀಡಿದರು.ಈ ಬಾರಿ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನತಾದರ್ಶನದಲ್ಲಿ ಪಾಲ್ಗೊಂಡು ತಮ್ಮ ಬೇಡಿಕೆ ಸಲ್ಲಿಸಿರುವುದು ಕಂಡುಬಂತು. ತುರ್ತು ಅನಾರೋಗ್ಯದಿಂದ ನೆರೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು, ನೆರೆಹೊರೆಯವರಿಂದ ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಿಲ್ ತುಂಬಿದ್ದರು. ಸರ್ಕಾರದಿಂದ ನೆರವಿಗಾಗಿ ಸಚಿವರಲ್ಲಿ ಅಳಲು ತೊಡಿಕೊಂಡರು. ಸಿಎಂ ಪರಿಹಾರ ನಿಧಿಯ ಜೊತೆಗೆ ವೈಯಕ್ತಿಕವಾಗಿಯೂ ತಮ್ಮ ಕಷ್ಟಕ್ಕೆ ಆರ್ಥಿಕವಾಗಿ ಸ್ಪಂದಿಸುವುದಾಗಿ ಹೇಳುವ ಮೂಲಕ ಸಚಿವರು ತಿಳಿಸಿದರು.