ಕನ್ನಡಪ್ರಭ ವಾರ್ತೆ ಮಧುಗಿರಿ
ಬುಧವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 2024-25ನೇ ಸಾಲಿನ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿಎಂ ಕಚೇರಿ ಸಾಮರ್ಥ್ಯ ಹೆಚ್ಚಾಗಬೇಕಾದರೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಪ್ರತಿ ಬುಧವಾರ ಶ್ರೀಸಾಮಾನ್ಯರ ಕೈಗೆ ಸಿಗುವ ಮೂಲಕ ಜನರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಡಿ.2ರಂದು ತುಮಕೂರಿಗೆ ಸಿಎಂ ಆಗಮಿಸಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು.ಇದೇ ವೇಳೆ ಜಿಲ್ಲೆಯ ಆರ್ಹ ಫಲಾನುಭವಿಗಳಿಗೆ ತಂತಮ್ಮ ಇಲಾಖೆಗಳಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.ಕಂದಾಯ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, 1962ರಿಂದ ಈವರೆಗೂ ರೈತರಿಗೆ ಸಾಗುವಳಿ ಚೀಟಿ ನೀಡಿದ್ದರೂ ಖಾತೆ ಮಾಡಿ ಕೊಡದೇ ಕೈ ಚಲ್ಲಿದ ಪರಿಣಾಮ ರೈತರಿಗೆ ಅನ್ಯಾಯವಾಗುತ್ತಿದೆ. ಅರಣ್ಯದವರು ಡೀಮ್ಡ್ ಫಾರೆಸ್ಟ್ ಮಾಡಿದ್ದರಿಂದ ರೈತರಿಗೆ ಪ್ರಸ್ತುತ ತೊಂದರೆ ಆಗಿದೆ. ಆದ ಕಾರಣ ಅರಣ್ಯ ಮತ್ತು ಕಂದಾಯ ಅಧಿಕಾರಿಗಳು ಜಂಟಿ ಸರ್ವೆ ಮಾಡಿ ಪಹಣಿ ನೀಡಿ ಹಳ್ಳಿಗಳಲ್ಲಿ ಮಹಜರ್ ಮಾಡಿ ಪೌತಿ ವಾರಸುದಾರರ ಖಾತೆ ಮಾಡುವ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಕಲ್ಪಿಸಿ ಕೊಡಿ ಎಂದರು.
ಕಂದಾಯ ಸಿಬ್ಬಂದಿ ಸತೀಶ್ ನಾಯ್ಕ್ ನೂರಾರು ಕಡತಗಳು ಕಾಣೆಯಾಗಲು ಕಾರಣರಾಗಿದ್ದರು. ಡಿಸಿ ಅವರ ಆದೇಶದಂತೆ ಆತನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ಮಾಡುತ್ತಿದ್ದೇವೆ ಎಂದು ತಹಸೀಲ್ದಾರ್ ಶಿರಿನ್ತಾಜ್ ಸಭೆ ಗಮನ ಸೆಳೆದಾಗ ಮಧ್ಯ ಪ್ರವೇಶಿಸಿದ ಸಚಿವ ರಾಜಣ್ಣ, ಈತನನ್ನು ಕಸ್ಟಡಿಗೆ ಪಡೆದು ನೂರಾರು ಕಡತಗಳು ಕಾಣೆಯಾಗಿಲ್ಲ. ಆತನ ಬಳಿಯೇ ಇದ್ದು ಹಣಕ್ಕೆ ಮಾರುತ್ತಿದ್ದಾನೆ ಬುದ್ದಿ ಕಲಿಸಿ ಕಡತ ವಾಪಸ್ ಪಡೆಯುವಂತೆ ಸೂಚಿಸಿದರು.
ಕೆಡಿಪಿಗೆ ನೂತನವಾಗಿ ಆಯ್ಕೆಯಾದ ನಾಮ ನಿರ್ದೇಶಿತ ಸದಸ್ಯರುಗಳಾದ ಎಂ.ಎಸ್.ಮಲ್ಲಿಕಾರ್ಜುನಯ್ಯ,ದೇವರಾಜು,ನಜೀರ್ಸಾಬ್,ಗೋವಿಂದಪ್ಪ,ನರಸೇಗೌಡ ಬಿ.ನಾಗೇಶ್ಬಾಬು ಇವರುಗಳನ್ನು ತಾಪಂನಿಂದ ಸನ್ಮಾನಿಸಲಾಯಿತು.ಸಭೆಯಲ್ಲಿ ಎಂಎಲ್ಸಿ ಆರ್. ರಾಜೇಂದ್ರ ರಾಜಣ್ಣ, ಜಿಲ್ಲಾಧಿಕಾರಿ ಶುಭಕಲ್ಯಾಣ್,ಎಸ್ಪಿ ಅಶೋಕ್, ಸಿಇಒ ಜಿ.ಪ್ರಭು,ಎಸಿ ಶಿವಪ್ಪ, ತಹಸೀಲ್ದಾರ್ ಶಿರಿನ್ತಾಜ್, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಇಒ ಲಕ್ಷ್ಮಣ್, ತಾಪಂ ಆಡಳಿತಾಧಿಕಾರಿ ಸೋನಿಯಾ ಎಡಿ ಮಧುಸೂದನ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.