ಗದಗ: ಗದಗ- ಬೆಟಗೇರಿ ಅವಳಿ ನಗರದ ಜನತೆಯ ಜೀವನಾಡಿಯಾಗಿರುವ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ದುಷ್ಕರ್ಮಿಗಳು ಕಲ್ಲು ಹಾಕಿರುವ ಅತ್ಯಂತ ವಿಚಿತ್ರ ಹಾಗೂ ಆತಂಕಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಮುಂಡರಗಿಯ ಹಮ್ಮಗಿ ಬ್ಯಾರೇಜ್ನಿಂದ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಪೈಪ್ ಲೈನ್ ನ ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ಈ ಕೃತ್ಯ ನಡೆದಿದೆ. ಪೈಪ್ ಲೈನ್ನಲ್ಲಿ ಕಲ್ಲುಗಳು ಸಿಲುಕಿಕೊಂಡಿದ್ದರಿಂದ ನೀರು ಸರಾಗವಾಗಿ ಹರಿಯದೇ ಸರಬರಾಜು ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಅವಳಿ ನಗರದಾದ್ಯಂತ ಕುಡಿಯುವ ನೀರು ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ.
ಭೂಮಿಯ ಆಳದಲ್ಲಿ ಹಾದುಹೋಗಿರುವ ಬೃಹತ್ ಪೈಪ್ಲೈನ್ಗೆ ಕಲ್ಲು ಹಾಕಿರುವುದು ಹೇಗೆ ಎಂಬ ಪ್ರಶ್ನೆಗೆ ಈಗ ಆಘಾತಕಾರಿ ಉತ್ತರ ಸಿಗುತ್ತಿದೆ. ನೀರು ಸರಾಗವಾಗಿ ಹರಿದು ಹೋಗಲು ಹಾಗೂ ಪೈಪ್ಲೈನ್ನಲ್ಲಿನ ಒತ್ತಡ ನಿಯಂತ್ರಿಸಲು ಗದಗನಿಂದ ಪಾಪನಾಶಿ ಗ್ರಾಮದ ವರೆಗೆ ಒಟ್ಟು 15 ಏರ್ ಪೈಪ್ ವ್ಯವಸ್ಥೆಯನ್ನು ಮಾಡಲಾಗಿದೆ.ಈ ತಾಂತ್ರಿಕ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇರುವ ಯಾರೋ ದುಷ್ಕರ್ಮಿಗಳೇ ಯೋಜಿತವಾಗಿ, ಇದೇ ಏರ್ ಪೈಪ್ಗಳ ಮೂಲಕ ಕಲ್ಲುಗಳನ್ನು ಪೈಪ್ ಲೈನ್ ಒಳಗಡೆ ತಳ್ಳಿದ್ದಾರೆ. ಒಳಗಡೆ ಹೋಗಿರುವ ಕಲ್ಲುಗಳು ನೀರಿನ ಒತ್ತಡಕ್ಕೆ ಮುಂದೆ ಹೋಗಿ ಅಲ್ಲಲ್ಲಿ ಸಿಲುಕಿವೆ.
ಕಠಿಣ ಕ್ರಮಕ್ಕೆ ಆಗ್ರಹ: ಕುಡಿಯುವ ನೀರು ಜನರ ಮೂಲಭೂತ ಹಕ್ಕಾಗಿದ್ದು, ಅದಕ್ಕೇ ಕಲ್ಲು ಹಾಕಿ ವಿಕೃತ ಆನಂದ ಪಡುವ ಇಂತಹ ದುರುಳರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅವಳಿ ನಗರದ ಜನರಿಗೆ ಕುಡಿಯುವ ನೀರು ಸಿಗಬಾರದು ಎನ್ನುವ ಕೆಟ್ಟ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಜಾಗೃತಿ ವಹಿಸಬೇಕು ಎನ್ನುತ್ತಾರೆ ಅವಳಿ ನಗರದ ಸಾರ್ವಜನಿಕರು.