ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರಸಭೆಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಸೋಮವಾರ ದಿಢೀರ್ ಭೇಟಿ ನೀಡಿ, ಕಚೇರಿಗೆ ಆಗಮಿಸಿದಂತಹ ಸಾರ್ವಜನಿಕರ ಜೊತೆ ಸಂಬಂಧಪಟ್ಟ ಅಧಿಕಾರಿ ಹಾಗೂ ನೌಕರರು ಸೌಜನ್ಯದಿಂದ ವರ್ತಿಸಬೇಕು, ಉದ್ಧಟತನದಿಂದ ವರ್ತಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ನಗರಸಭೆಗೆ ಮಧ್ಯಾಹ್ನ ದಿಢೀರ್ ಭೇಟಿ ನೀಡಿ, ಕಚೇರಿಗೆ ಕೆಲಸ, ಕಾರ್ಯಗಳ ನಿಮಿತ್ತ ಆಗಮಿಸುವಂಥ ಬಡವರು, ಸಾರ್ವಜನಿಕರೊಂದಿಗೆ ಅಧಿಕಾರಿಗಳು, ನೌಕರರು ಸೌಜನ್ಯದಿಂದ ವರ್ತಿಸುತ್ತಿಲ್ಲ, ಉದ್ಧಟತನ ಹಾಗೂ ಅಸಭ್ಯವಾಗಿ ವರ್ತಿಸುತ್ತಿರುವ ಕುರಿತುದೂರುಗಳು ಕೇಳಿ ಬಂದಿವೆ. ನಾನು ಪ್ರವಾಸದಲಿದ್ದ ವೇಳೆ ಸಾಕಷ್ಟು ಮಂದಿ ದೂರಿದ್ದಾರೆ. ಇಲ್ಲಿನ ಬೆಳವಣಿಗೆ ಬಗ್ಗೆ ವಿವರಿಸಿದ್ದಾರೆ. ಇದು ಮುಂದುವರೆದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದು ತಾಕೀತು ಮಾಡಿದರು.
ಶಾಸಕರ ಭೇಟಿ ವೇಳೆ ಹಲವರು ಇಲ್ಲಿನ ಸಿಬ್ಬಂದಿ ವಿರುದ್ಧ ದೂರಿದ ಹಿನ್ನೆಲೆ ಪೌರಾಯುಕ್ತರು ಮೊದಲು ನಾಗರಿಕರಿಂದಅರ್ಜಿಗಳನ್ನು ಪಡೆದು ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿ, ಇಷ್ಟು ದಿನದೊಳಗೆ ಬನ್ನಿ ಎಂದು ಸ್ವೀಕೃತಿ ಪತ್ರದಲ್ಲಿ ತಿಳಿಸಿ ಎಂದು ದೂರುದಾರರ ಸಮ್ಮುಖದಲ್ಲಿ ಶಾಸಕರು ಎಚ್ಚರಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಪೌರಾಯುಕ್ತರು ರಮೇಶ್ ಇನ್ನಿತರಿದ್ದರು.-----
ಹೆಸರಿಗೆ ಮಾತ್ರ ಗುಣಶ್ರೀ, ನಿನ್ನ ಬಗ್ಗೆಯೇ ಹೆಚ್ಚು ದೂರುಗಳಿವೆ: ಶಾಸಕರ ಗರಂಕೊಳ್ಳೇಗಾಲ: ಏನಮ್ಮ ನೀನು ಹೆಸರಿಗೆ ಮಾತ್ರ ಗುಣಶ್ರೀ, ಆದರೆ ಕೆಲಸ, ಕಾರ್ಯಕ್ಕೆ ಬರುವವರನ್ನು ಏಕ ವಚನದಲ್ಲಿ ಮಾತನಾಡಿಸುತ್ತೀಯಾ, ಹೋಗೆ, ಬಾರೆ ಅನ್ನುತ್ತೀಯಾ, ನಿನ್ನ ಬಗ್ಗೆ ಸಾಕಷ್ಟು ದೂರುಗಳಿವೆ, ತಿದ್ದಿಕೊಳ್ಳಬೇಕು, ನಿನಗೆ ಇದು ಕೊನೆ ಅವಕಾಶ ಎಂದು ನಗರಸಭೆ ದ್ವಿತೀಯ ದರ್ಜೆ ಸಹಾಯಕಿ ಗುಣಶ್ರೀ ಅವರಿಗೆ ಶಾಸಕ ಎ .ಆರ್. ಕೃಷ್ಣಮೂರ್ತಿ ಅವರು ಸೋಮವಾರ ಎಚ್ಚರಿಕೆ ನೀಡಿದರು.
ನೋಡಮ್ಮ ನೀನು ಸಾರ್ವಜನಿಕರು, ಬಡವರಿಗೆ ಮೊದಲು ಗೌರವ ನೀಡಮ್ಮ, ನಿನ್ನ ಹೆಸರಲ್ಲಿ ಗುಣವಿದೆ. ಆದರೆಸೌಜನ್ಯದ ನಡೆ ಇಲ್ಲ, ಈ ವರ್ಷ ಮಾತ್ರ ಇಲ್ಲಿರು, ಮುಂದೆ ಇಲ್ಲಿಂದ ಹೊರಡಮ್ಮ ಎಂದು ತರಾಟೆ ತೆಗೆದುಕೊಂಡರು.
ಆಯುಕ್ತರು, ರಾಘವೇಂದ್ರ ಬಗ್ಗೆಯೂ ದೂರಿದೆ:ಸಾರ್ವಜನಿಕರಿಂದ ನಗರಸಭೆ ಆಯುಕ್ತರು, ನೌಕರ ರಾಘವೇಂದ್ರ ವಿರುದ್ಧವೂ ದೂರು ಬಂದಿವೆ. ಆದರೆ ಹೆಚ್ಚು ದೂರುಗಳು
ಗುಣಶ್ರೀ ವಿರುದ್ಧ ಕೇಳಿ ಬಂದಿವೆ. ಇಲ್ಲಿಗೆ ಕೆಲಸ- ಕಾರ್ಯಕ್ಕಾಗಿ ಬರುವ ಬಡವರನ್ನು ಏಕ ವಚನದಿಂದ ಮಾತನಾಡಿಸುತ್ತಿರುವ ಕುರಿತುದೂರುಗಳಿವೆ. ಮಹಿಳೆಯರನ್ನು ಸಹ ಇಲ್ಲಿ ಹೋಗೆ, ಬಾರೆ ಎಂದು ಅಗೌರವದಿಂದ ಸಂಭೋದಿಸುವ ಕುರಿತು ನನಗೆ ಸಾಕಷ್ಟು ದೂರುಗಳು ಬಂದಿವೆ. ಇಲ್ಲಿನ ಸಿಬ್ಬಂದಿ ಎಲ್ಲರೂ ಮೊದಲು ಕೆಲಸಕ್ಕೆ ಬರುವವರನ್ನು ಸೌಜನ್ಯದಿಂದ ಮಾತನಾಡಿಸಿ, ಗೌರವ ನೀಡಿ, ಕೆಲಸ ಆದರೆ ಮಾಡಿಕೊಡಿ, ಇಲ್ಲ 1 ವಾರ, ಇಲ್ಲವೇ 15 ದಿನ ಬಿಟ್ಟು ಬರಲು ಸೌಜನ್ಯದಿಂದ ತಿಳಿಸಿ, ಬಳಿಕ ಸ್ಪಂದಿಸಿ, ಮುಂದೆ ಇಂತಹ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಶಾಸಕರು ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದರು.
ವಿವಿಧ ಶಾಖೆಗಳಿಗೂ ಭೇಟಿ:ಇದೇ ವೇಳೆ ಶಾಸಕರು, ವಿವಿಧ ಶಾಖೆಗಳಿಗೂ ಭೇಟಿ ನೀಡಿ ಅಲ್ಲಿ ಕರ್ತವ್ಯ ನಿರ್ವಹಿಸುವ ನೌಕರರನ್ನು ಪರಿಚಯಿಸಿಕೊಂಡು
ಅವರು ತಾತ್ಕಾಲಿಕ ನೌಕರರು, ಸರ್ಕಾರಿ ನೌಕರರೇ ಎಂಬುದನ್ನು ಖಚಿತಪಡಿಸಿಕೊಂಡರು. ಯಾವ ಶಾಖೆ ಗುಮಾಸ್ತರ ವಿರುದ್ಧ ದೂರಿದೆಯೋ ಅಲ್ಲೆ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ಜರುಗಿತು.