ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸರ್ಕಾರಿ ವಸತಿಗೃಹ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಶಾಸಕ ಬಾಲಕೃಷ್ಣ

KannadaprabhaNewsNetwork | Published : Jun 16, 2025 1:00 AM

ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ವಹಿಸಿದ್ದು, ೫ ಕೋಟಿ ರು. ವೆಚ್ಚದಲ್ಲಿ ೧೨ ಮನೆಗಳಿಗೆ ಈ ಸಂಕೀರ್ಣದಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಪ್ರವಾಸಿ ಮಂದಿರದ ಬಳಿ ಲೋಕೋಪಯೋಗಿ ಇಲಾಖೆಯಿಂದ ೫ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ೧೨ ಮನೆಗಳುಳ್ಳ ವಸತಿ ಸಂಕೀರ್ಣದ ಕಾಮಗಾರಿ ಶೇ.೯೦ರಷ್ಟು ಮುಗಿದಿದ್ದು, ಬಾಕಿ ಉಳಿದಿರುವ ಕಾಮಗಾರಿಯನ್ನು ಇನ್ನೊಂದು ತಿಂಗಳಲ್ಲಿ ಮುಗಿಸಿ ಸರ್ಕಾರಿ ಅಧಿಕಾರಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ನಿರ್ಮಾಣವಾಗುತ್ತಿರುವ ವಸತಿ ಸಂಕೀರ್ಣದ ಕಾಮಗಾರಿಯನ್ನು ವೀಕ್ಷಣೆ ಮಾಡಿ, ಗುತ್ತಿಗೆದಾರ ಸುಪ್ರೀತ್ ಅವರೊಂದಿಗೆ ಉಳಿಕೆ ಕಾಮಗಾರಿಯ ಕುರಿತು ಮಾಹಿತಿ ಪಡೆದು ಮಾತನಾಡಿ, ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ವಹಿಸಿದ್ದು, ೫ ಕೋಟಿ ರು. ವೆಚ್ಚದಲ್ಲಿ ೧೨ ಮನೆಗಳಿಗೆ ಈ ಸಂಕೀರ್ಣದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರತಿ ಮನೆಗೆ ೨ ಬೆಡ್ ರೂಂ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೆಳಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ೧೨ ಮನೆಗಳ ಪೈಕಿ ೬ ಮನೆಗಳನ್ನು ಆರೋಗ್ಯ ಇಲಾಖೆಗೆ ಮೀಸಲಿಟ್ಟು, ಉಳಿದ ಆರು ಮನೆಗಳನ್ನು ಇತರೆ ಇಲಾಖೆ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗುವುದು ಎಂದರು. ಸರ್ಕಾರಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡಿ ಈ ಮೂಲಕ ಆಡಳಿತಕ್ಕೆ ಚುರುಕು ನೀಡುವ ಸಲುವಾಗಿ ವಸತಿ ಸಂಕೀರ್ಣಗಳನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ನಿರ್ಮಿಸಲಾಗುತ್ತಿದೆ. ವಸತಿ ಸಂಕೀರ್ಣದ ಮುಂಭಾಗ ಇಂಟರ್ ಲಾಕ್ ಅಳವಡಿಸುವಂತೆ ಸೂಚಿಸಿದ್ದು, ಕಾಮಗಾರಿ ಪಟ್ಟಿಯಲ್ಲಿ ಸೇರಿಲ್ಲದ ಕಾರಣ ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದ ಶಾಸಕರು, ಹಳೆ ಪ್ರವಾಸಿ ಮಂದಿರವು ಶಿಥಿಲಗೊಂಡ ಹಿನ್ನೆಲೆಯಲ್ಲಿ ಇದೀಗ ನವೀಕರಣಗೊಳಿಸಲಾಗಿದ್ದು ಅದರ ಕಾಮಗಾರಿ ಮುಗಿದು ಪೀಠೋಪಕರಣಗಳ ಅಳವಡಿಕೆಯೂ ಸಂಪೂರ್ಣ ಮುಗಿದಿದೆ. ಆಷಾಢದ ತರುವಾಯ ವಸತಿ ಸಂಕೀರ್ಣ ಮತ್ತು ಪ್ರವಾಸಿ ಮಂದಿರ ಎರಡನ್ನೂ ಒಟ್ಟಿಗೆ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಅನಿಲ್‌ ಮರಗೂರು, ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್, ಮುಖಂಡ ಅಡಗೂರು ನಾರಾಯಣಿ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಕಾಶಿನಾಥ್, ಗುತ್ತಿಗೆದಾರ ಸುಪ್ರೀತ್ ಸೇರಿ ಇತರರು ಇದ್ದರು.