ಶಾಸಕ ಸಿ.ಸಿ.ಪಾಟೀಲ ಆರೋಪ ಶುದ್ಧ ಸುಳ್ಳು

KannadaprabhaNewsNetwork |  
Published : Dec 07, 2024, 12:33 AM IST
(6ಎನ್.ಆರ್.ಡಿ1 ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಬಿ.ಆರ್.ಯಾವಗಲ್ ಮಾತನಾಡುತ್ತಿದ್ದಾರೆ.)  | Kannada Prabha

ಸಾರಾಂಶ

ನನ್ನ ವ್ಯಕ್ತಿತ್ವಕ್ಕೆ ಕಳಂಕ ತರಬೇಕೆಂದು ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ

ನರಗುಂದ: ನರಗುಂದ ಕ್ಷೇತ್ರ ಹಾಗೂ ಬೆಣ್ಣೆ ಹಳ್ಳದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ಆದರೆ ಶಾಸಕರು ನಾನು ಗುತ್ತಿಗೆದಾರರಿಂದ ಹಣ ಪಡೆದಿದ್ದೇನೆ ಎಂದು ಆರೋಪ ಮಾಡಿದ್ದು, ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಶಾಸಕ ಬಿ.ಆರ್‌. ಯಾವಗಲ್‌ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಕ್ಷೇತ್ರದ ಶಾಸಕರು ಸಚಿವ ಎಚ್‌.ಕೆ. ಪಾಟೀಲರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಹೇಳಿದ್ದೇನೆ. ಆದರೆ ಶಾಸಕರು ಅದಕ್ಕೆ ಬೇರೆ ಅರ್ಥ ಕಲ್ಪಿಸಿ ಯಾವಗಲ್ಲ ಅವರು ಈ ಕ್ಷೇತ್ರದ ₹ 500 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ ಎಂದು ಗುತ್ತಿಗೆದಾರರ ಬಿಲ್‌ ತಡೆ ಮಾಡಿ ಅವರಿಂದ ₹ 6 ಕೋಟಿ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದು ಸತ್ಯಕ್ಕೆ ದೂರವಾದದ್ದು, ನನ್ನ ವ್ಯಕ್ತಿತ್ವಕ್ಕೆ ಕಳಂಕ ತರಬೇಕೆಂದು ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಜತೆಗೆ ಇತ್ತೀಚೆಗೆ ಶಾಸಕ ಪಾಟೀಲರು ದರ್ಪದಿಂದ ವಿರೋಧ ಪಕ್ಷದವರ ಮೇಲೆ ಆರೋಪ ಮಾಡುತ್ತಿರುವುದು ಖಂಡನೀಯ ಎಂದರು.

ನಾನು ಈ ಕ್ಷೇತ್ರದಲ್ಲಿ ರಾಜಕೀಯಕ್ಕೆ ಬಂದು 40 ವರ್ಷವಾಯಿತು. ನನ್ನ ಅಧಿಕಾರಾವಧಿಯಲ್ಲಿ ಎಂಜಿನೀಯರಿಂಗ್‌, ಡಿಪ್ಲೋಮಾ ಕಾಲೇಜು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಮಲಪ್ರಭಾ ಕಾಲುವೆ ಪುನಶ್ಚೇತನ, ಜಲಾಶಯದಿಂದ ಕುಡಿವ ನೀರಿನ ಯೋಜನೆಗೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ ತೃಪ್ತಿ ನನಗಿದೆ. ನನ್ನ ಅಭಿವೃದ್ಧಿ ಸಹಿಸದೆ ಪಾಟೀಲರು ಈ ರೀತಿಯ ಕೀಳು ಮಟ್ಟದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿ ಹೆಸರಲ್ಲಿ ₹ 500 ಕೋಟಿ ಹಣ ಬಿಡುಗಡೆ ಮಾಡಿ ವಿವಿಧ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ ಅದರಲ್ಲಿ ಎಷ್ಟು ಪರ್ಸೆಂಟ್‌ ಹಣ ಪಡೆದುಕೊಂಡಿದ್ದಾರೆ ಎಂಬುದು ನಮಗೂ ಗೊತ್ತು ಎಂದರು.

ಕ್ಷೇತ್ರದಲ್ಲಿ ನನ್ನ ಜತೆಗಿದ್ದ ಎಲ್‌.ಎಸ್‌. ಪಾಟೀಲರನ್ನು ಪುರಸಭೆ ಅಧ್ಯಕ್ಷರನ್ನಾಗಿ, ಟಿಎಪಿಸಿಎಂಸಿ ಸದಸ್ಯರನ್ನಾಗಿ ಮಾಡಿ ರಾಜಕೀಯವಾಗಿ ಬೆಳೆಸಿದ್ದೇನೆ.ಇವರು ಮಾಜಿ ಶಾಸಕ ಎಸ್‌.ಎಫ್‌. ಪಾಟೀಲರ ಕುಟುಂಬಕ್ಕೆ ಏನು ಮಾಡಿದ್ದಾರೆಂದು ತಿಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಗುರುಪಾದಪ್ಪ ಕುರಹಟ್ಟಿ, ರಾಜು ಕಲಾಲ, ಪ್ರವೀಣ ಯಾವಗಲ್, ನೀಲಪ್ಪ ಗುಡದನ್ನವರ, ಎಂ.ಎಸ್. ಪಾಟೀಲ, ಮಾನೆ, ರವಿ ಯರಗಟ್ಟಿ, ಎಂ.ಬಿ. ಅರಹುಣಸಿ, ಜಗದೀಶ ಕಗದಾಳ, ಮಲ್ಲೇಶ ಅಬ್ಬಗೇರಿ, ವಿಷ್ಣು ಸಾಠೆ, ಪ್ರಕಾಶ ಹಡಗಲಿ ಸೇರಿದಂತೆ ಇತರರು ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ