ಶಿವಮೊಗ್ಗ: ನಗರದಲ್ಲಿ ಯಾವುದೇ ರೀತಿಯ ಗಲಾಟೆಗಳು ನಡೆದರೂ ಅದಕ್ಕೆ ಧರ್ಮದ ಲೇಪನ ಹಚ್ಚಿ, ಅದನ್ನು ಕೋಮು ಬಣ್ಣಕ್ಕೆ ತಿರುಗಿಸುವ ಇಚ್ಛೆ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಹೆಚ್ಚಿದೆ. ಇತ್ತೀಚೆಗೆ ನಗರದ ಮಾರ್ನಾಮಿಬೈಲ್ನಲ್ಲಿ ನಡೆದ ಗಲಾಟೆಯೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಯುವ ಮುಖಂಡ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್ ಕಿಡಿಕಾರಿದರು.
ಶಾಸಕರಾದವರು ಎಲ್ಲರನ್ನೂ ಪ್ರೀತಿಸಬೇಕು. ಎಲ್ಲಾ ಧರ್ಮದವರಿಗೂ ಅವರೇ ಶಾಸಕರು. ಶಿವಮೊಗ್ಗದಲ್ಲಿ ಕೋಮುಗಲಭೆಯಂತಹ ವಾತಾವರಣ ಬಿಂಬಿಸುವಂತಹ ಹೇಳಿಕೆಗಳನ್ನು ನೀಡಬಾರದು. ಶಿವಮೊಗ್ಗ ನಗರದಲ್ಲಿ ಗಣಪತಿ ಸೇರಿದಂತೆ ಎಲ್ಲಾ ಹಬ್ಬಗಳು ಶಾಂತಿಯುತವಾಗಿವೆ. ಒಂದು ಸುಂದರ ನಗರವಾಗಿ ಶಿವಮೊಗ್ಗ ಬೆಳೆಯುತ್ತಿದೆ. ಇಲ್ಲಿ ವಾಸ ಮಾಡಬೇಕೆಂದೇ ಹಲವು ಜಿಲ್ಲೆಯವರು ಶಿವಮೊಗ್ಗ ನಗರ ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹವರಿಗೆ ಶಾಸಕರಾದವರು ಧೈರ್ಯ ಹೇಳಬೇಕೆ ಹೊರತೂ ಇಲ್ಲಿರುವ ಹಿಂದೂಗಳು ಊರು ಬಿಟ್ಟು ಹೋಗುತ್ತಾರೆ ಎಂದು ಹೇಳುತ್ತಾರೆ. ಯಾವ ಹಿಂದೂಗಳು ಶಿವಮೊಗ್ಗ ನಗರವನ್ನು ಬಿಟ್ಟು ಹೋಗಿದ್ದಾರೆ. ಯಾಕೆ ಈ ರೀತಿಯ ಸುಳ್ಳನ್ನು ಹೇಳುತ್ತಾರೆ? ಶಾಸಕರು ತಮ್ಮ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತದೆ ಎಂದರು.
ಯಾವ ತುಷ್ಠೀಕರಣವೂ ಇಲ್ಲಿ ಇಲ್ಲ. ಎಲ್ಲರಿಗೂ ಒಂದೇ ಕಾನೂನು. ಧರ್ಮಕ್ಕಿಂತ ಕಾನೂನೇ ಮುಖ್ಯವಾಗಿರುತ್ತದೆ. ಶಾಂತಿಗಾಗಿ ಹೋರಾಟ ಮಾಡಬೇಕೆ ಹೊರತೂ ನಗರವನ್ನು ಕಲುಷಿತಗೊಳಿಸಲು ಅಲ್ಲ. ಇದೇ ನಗರದಲ್ಲಿ ಮೇಲ್ಸೇತುವೆಯಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ ಒಬ್ಬ ಯುವಕ ಅಪಘಾತದಲ್ಲಿ ಸಾವು ಕಾಣುತ್ತಾನೆ. ಈ ಯುವಕ ಬೇರೆ ಧರ್ಮಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ ಅವರ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಗಾಯಗೊಂಡವರನ್ನು ವಿಚಾರಿಸಿಯೂ ಇಲ್ಲ. ಯಾಕೆ ಈ ಅಧರ್ಮ ಎಂದು ಪ್ರಶ್ನಿಸಿದರು.ಅವರು ಆರೋಪಿಸಿದಂತೆ ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಇದೆ. ಗಾಂಜಾ ತಡೆಗಟ್ಟಲು ನಾವು ಕೂಡ ಒತ್ತಾಯ ಮಾಡುತ್ತೇವೆ. ಗಾಂಜಾ ಸಾಗಣೆ, ಸೇವನೆಗೆ ಯಾವ ಧರ್ಮವೂ ಸೇರಿಲ್ಲ. ಆರೋಪಿಗಳು ಯಾರೇ ಆಗಲಿ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಯಾವ ಸರ್ಕಾರಗಳು ಬಂದರೂ ಗಾಂಜಾ, ಓಸಿ ಮುಂತಾದ ಅಕ್ರಮ ದಂಧೆಗಳು ಇದ್ದೇ ಇರುತ್ತವೆ. ಇವುಗಳನ್ನು ನಾವಂತೂ ಸಹಕಾರ ನೀಡುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಪ್ರಮುಖರಾದ ಎಚ್.ಪಾಲಾಕ್ಷಿ, ವಿಶ್ವನಾಥ್ ಕಾಶಿ, ಯಮುನಾ ರಂಗೇಗೌಡ, ನಾಗರಾಜ್ ಕಂಕಾರಿ, ಚರಣ್, ಮುನ್ನ, ಶರತ್, ಆಸೀಫ್, ಮಧು, ಪವನ್ ಇದ್ದರು.