ಲಕ್ಷ್ಮೇಶ್ವರ: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿನ ಹೃದಯದ ಕಾರ್ಯ, ರಕ್ತದ ಪರಿಚಲನೆ, ರಕ್ತದ ಗುಂಪುಗಳು ದೇಹದ ವಿವಿಧ ಅಂಗಗಳ ಕುರಿತು ಶಾಸಕ ಡಾ. ಚಂದ್ರು ಲಮಾಣಿ ಅವರು ಪಾಠ ಮಾಡುವ ಮೂಲಕ ಗಮನ ಸೆಳೆದರು.
ರಕ್ತದ ವಿಧಗಳು, ರಕ್ತದ ಬಣ್ಣ, ರಕ್ತದಲ್ಲಿನ ವಿವಿಧ ಅಂಶಗಳು, ಹೃದಯದ ಕಾರ್ಯ, ಅಪದಮನಿ, ಅಭಿದಮನಿ, ಹೃದಯದ ಬಡಿತ ಎಷ್ಟಿರಬೇಕು, ಆರೋಗ್ಯವಂತ ಮನುಷ್ಯನ ಗುಣಲಕ್ಷಣಗಳ ಕುರಿತು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಒಂದು ಗಂಟೆಗಳ ಕಾಲ ಬೋಧನೆ ಮಾಡಿದರು.
ವೈದ್ಯರಾಗಿರುವ ಶಾಸಕ ಡಾ. ಚಂದ್ರು ಲಮಾಣಿ ಅವರು ವಿಜ್ಞಾನ ಹಾಗೂ ವೈದ್ಯಕೀಯ ವಿಜ್ಞಾನದ ವಿಷಯದಲ್ಲಿನ ತಮ್ಮ ಜ್ಞಾನವನ್ನು ಮಕ್ಕಳಿಗೆ ತಿಳಿ ಹೇಳುವ ಕಾರ್ಯ ಮಾಡಿದ್ದು ಗಮನಾರ್ಹವಾಗಿತ್ತು. ಯಾವ ಶಿಕ್ಷಕರಿಗೂ ಕಡಿಮೆ ಇಲ್ಲದಂತೆ ಪಾಠ ಮಾಡಿದ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಬಿಡುವಿಲ್ಲದೆ ಕೆಲಸದ ಒತ್ತಡದಲ್ಲಿಯೂ ಶಾಸಕ ಡಾ. ಚಂದ್ರು ಲಮಾಣಿ ಮಕ್ಕಳಿಗೆ ಹೆಚ್ಚು ಅಂಕ ಗಳಿಸುವುದು ಹೇಗೆ, ಪಿಯುಸಿ ನಂತರ ಮುಂದೆ ಯಾವ ಕೋರ್ಸ್ ತೆಗೆದುಕೊಳ್ಳಬೇಕು, ಯಾವ ಕೋರ್ಸ್ ತೆಗೆದುಕೊಂಡರೆ ಏನು ಮಾಡಲು ಸಾಧ್ಯ ಎನ್ನುವ ಕುರಿತು ಪ್ರೇರಕವಾಗುವ ಮಾತುಗಳನ್ನು ಕೇಳಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತ ಅವರ ಮನಸ್ಸನ್ನು ಅರಿತು ಪಾಠ ಮಾಡಿದ್ದು ಹೆಚ್ಚು ಗಮನ ಸೆಳೆಯಿತು.