ಕನ್ನಡಪ್ರಭ ವಾರ್ತೆ ಆಲೂರು
ಮೂಲ ಸೌಕರ್ಯಗಳು ಬಲವರ್ಧನೆಗೊಂಡರೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ರಾಯರಕೊಪ್ಪಲು ಗ್ರಾಮದಿಂದ ಹಾಸನ ಮಾರ್ಗವಾಗಿ ಬೆಂಗಳೂರಿನ ವರೆಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಯರ ಕೊಪ್ಪಲು ಗ್ರಾಮದಿಂದ ನಿತ್ಯ ಹಾಸನ ಹಾಗೂ ಬೆಂಗಳೂರು ನಗರಕ್ಕೆ ಹೋಗಿ ಬರಲು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಹಲವು ದಿನಗಳಿಂದ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಗ್ರಾಮಕ್ಕೆ ಸೂಕ್ತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಹಲವು ದಿನಗಳ ಬೇಡಿಕೆಯಾಗಿತ್ತು. ಹೀಗಾಗಿ ಜನರ ಬೇಡಿಕೆಗೆ ಸ್ಪಂದಿಸಿ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ರಾಯರಕೊಪ್ಪಲು ಗ್ರಾಮಕ್ಕೆ ನೂತನ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರಿಗೆ ಸಮಸ್ಯೆ ಬಗೆಹರಿಸಲಾಗಿದೆ. ನಿತ್ಯ ಬೆಳಿಗ್ಗೆ 5 ಗಂಟೆಯಿಂದ ರಾಯರ ಕೊಪ್ಪಲು ಗ್ರಾಮದಿಂದ ಬೆಂಗಳೂರಿಗೆ ಬಸ್ ಸಂಚರಿಸಿ ಪುನಃ ರಾತ್ರಿ 9 ಗಂಟೆಗೆ ರಾಯರಕೊಪ್ಪಲು ಗ್ರಾಮಕ್ಕೆ ಬಂದು ನಿಲ್ಲುವುದು ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು, ರಾಯರ ಕೊಪ್ಪಲು ಗ್ರಾಮಕ್ಕೆ ಬಸ್ ಸಂಚಾರ ಕಲ್ಪಿಸಿದಕ್ಕೆ ಸಂತಸವಾಗಿದೆ. ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ಹೋಗಬೇಕಾದರೆ ಬಹಳ ತೊಂದರೆಯಾಗುತ್ತಿತ್ತು. ಪ್ರತಿದಿನ ಬಸ್ಗಾಗಿ ಕಾದು ಬಸ್ ಹತ್ತಿದರು ಸಹ ಬಸ್ನಲ್ಲಿ ಕುಳಿತುಕೊಂಡು ಸಂಚಾರ ಮಾಡಲು ಆಸನಗಳು ಸಿಗುತ್ತಿರಲಿಲ್ಲ. ಆದರೆ ಇದೀಗ ಬಸ್ ವ್ಯವಸ್ಥೆ ಮಾಡಿರುವುದರಿಂದ ಆ ಸಮಸ್ಯೆ ಇರುವುದಿಲ್ಲ ಎಂದು ಸಂತಸ ಹಂಚಿಕೊಂಡರು.ಈ ಸಂದರ್ಭ ಹಾಸನ ಕೆಎಸ್ಆರ್ಟಿಸಿ ಸಂಚಾರಿ ನಿಯಂತ್ರಣಾಧಿಕಾರಿ ರೇಣುಕಾ, ಗ್ರಾಮದ ಹಿರಿಯ ಮುಖಂಡ ನಂಜುಂಡಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೂವಯ್ಯ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಶಿಧರ್, ಹಿರಿಯ ಮುಖಂಡ ಮಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಚೇತನ್, ಹರೀಶ್, ಕುಮಾರ್, ಚೇತನ್, ಧರಣಿ, ಸತೀಶ್, ಹರ್ಷ ಕೆಂಚಾಂಬ, ರಾಜಣ್ಣ, ಸತೀಶ್ ಶಿಗಾವರ ಸೇರಿದಂತೆ ಮುಂತಾದವರು ಹಾಜರಿದ್ದರು.