ಕನ್ನಡಪ್ರಭ ವಾರ್ತೆ ಹುಣಸೂರು
ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ 4.65 ಕೋಟಿ ರು.ಗಳ ಅಭಿವೃದ್ದಿ ಕಾಮಗಾರಿಗೆ ಶಾಸಕ ಜಿ.ಡಿ. ಹರೀಶ್ ಗೌಡ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು.70 ಲಕ್ಷ ರು. ವೆಚ್ಚದಡಿ ಪಟ್ಟಣದ ಬಜಾರ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಕಾಮಗಾರಿಗಳನ್ನು ಗುರುತಿಸಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಬಹುವರ್ಷಗಳಿಂದ ಬೇಡಿಕೆಯಿದ್ದ ಮುಖ್ಯರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದ್ದು, ನಾಗರಿಕರು ಈ ಬಗ್ಗೆ ಗಮನವಹಿಸಬೇಕು. ಮೂಲಸೌಕರ್ಯ ಕೊರತೆ ಮುಂತಾದ ಎಲ್ಲ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಬರಗಾಲದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಗರಸಭಾ ಸದಸ್ಯರಾದ ಕೃಷ್ಣರಾಜ ಗುಪ್ತ, ಸಿರಾಜ್, ಮಾಲಿಕ್ ಪಾಷಾ, ಹಿರಿಯ ಮುಸ್ಲಿಂ ಮುಂಖಡರಾದ ಹಜರತ್ ಜಾನ್ ಸೇರಿದಂತೆ ನಾಗರಿಕರು ಇದ್ದರು.ಚಾಲನೆ ನೀಡಿದ ಕಾಮಗಾರಿ ವಿವರ
ಬಿಳಿಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕಟ್ಟಡ ಕಾಮಗಾರಿಗೆ 150 ಲಕ್ಷ ರು.ಗಳು, ನಗರದ ಎನ್.ಎಸ್. ತಿಟ್ಟು ಬಡಾವಣೆಯ ಅಲ್ಪಸಂಖ್ಯಾತ ಕಾಲೋನಿಯ ರಸ್ತೆ ಅಭಿವೃದ್ಧಿಗೆ 30 ಲಕ್ಷ ರು.ಗಳು, ರಜಾಕ್ ಮೊಹಲ್ಲಾ ರಸ್ತೆ ಅಭಿವೃದ್ಧಿಗಾಗಿ 50 ಲಕ್ಷ ರು. ಗಳು, ಬಜಾರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ 70 ಲಕ್ಷ ರು. ಗಳು, ನಿಮಿಷಾಂಬ ಕಲ್ಯಾಣಮಂಟಪದ ಮುಂಭಾಗದ ಅಲ್ಪಸಂಖ್ಯಾತ ಕಾಲೋನಿಯ ಅಭಿವೃದ್ಧಿಗಾಗಿ 10 ಲಕ್ಷ ರು. ಗಳು, ಮಾಧವ ಪ್ರೌಢಶಾಲೆ ಬಳಿಯ ಅಲ್ಪಸಂಖ್ಯಾತರ ಕಾಲನಿಗೆ 10 ಲಕ್ಷ ರು.ಗಳು, ವಿ.ಪಿ.ಬೋರೆ ಬಡಾವಣೆಯ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗಾಗಿ 10 ಲಕ್ಷ ರು. ಗಳು.ಹೋಲಿ ಫ್ಯಾಮಿಲಿ ಸ್ಕೂಲ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ 60 ಲಕ್ಷ ರು.ಗಳು, ತಾಲೂಕಿನ ರತ್ನಪುರಿಯ ಸಂತೆಕೆರೆ ಕೋಡಿ ಗ್ರಾಮದ ಅಲ್ಪಸಂಖ್ಯಾತ ಕಾಲನಿಯ ರಸ್ತೆ ಅಭಿವೃದ್ಧಿಗಾಗಿ 10 ಲಕ್ಷ ರು. ಗಳು, ರತ್ನಪುರಿಯ ಅಲ್ಪಸಂಖ್ಯಾತ ಕಾಲನಿಗಳಿಗೆ 10 ಲಕ್ಷ ರು.ಗಳು, ಬಲ್ಲೇನಹಳ್ಳಿ ಗ್ರಾಮದ ಅಲ್ಪಸಂಖ್ಯಾತ ಕಾಲೋನಿಗಳ ರಸ್ತೆ ಅಭಿವೃದ್ಧಿಗಾಗಿ 25 ಲಕ್ಷ ರು.ಗಳು, ಗಾವಡಗೆರೆ ಮತ್ತು ಬೋರೆಗೌಡನಕೊಪ್ಪಲು ಗ್ರಾಮದ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗಾಗಿ 5 ಲಕ್ಷ ರು.ಗಳನ್ನು ಮೀಸಲಿಡಲಾಗಿದೆ.