ಹೊಗೆಸೊಪ್ಪು ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಿಸುವ ಶಾಸಕ ಜಿ.ಡಿ.ಹರೀಶ್‌ ಗೌಡ ಒತ್ತಾಯ

KannadaprabhaNewsNetwork |  
Published : Mar 19, 2026, 01:15 AM IST
52 | Kannada Prabha

ಸಾರಾಂಶ

ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಸಭೆಯಲ್ಲಿ ಬಿಡಿಸಿಟ್ಟರು. ರಾಜ್ಯದಲ್ಲಿ 50 ಸಾವಿರಕ್ಕೂ ಹಚ್ಚು ರೈತಕುಟುಂಬಗಳು ತಂಬಾಕು ಕೃಷಿಯನ್ನು ತೊಡಗಿಸಿಕೊಂಡಿದ್ದು, ಹಳೆ ಮೈಸೂರು ಭಾಗದ ಹುಣಸೂರು, ಕೆ.ಆರ್. ನಗರ, ಎಚ್.ಡಿ. ಕೋಟೆ, ಪಿರಿಯಾಪಟ್ಟಣ ಮತ್ತು ಅರಕಲಗೂಡು ತಾಲೂಕಿನಲ್ಲಿ ತಂಬಾಕು ಬೆಳೆಯುತ್ತಿದ್ದಾರೆ. ಈ ಬಾರಿ ತಂಬಾಕು ದರದಲ್ಲಿನ ತೀವ್ರ ಕುಸಿತ ರೈತರಲ್ಲಿ ಆತಂಕ ಉಂಟು ಮಾಡಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ತಂಬಾಕಿನ ಬೆಲೆ ತೀವ್ರ ಕುಸಿತಗೊಂಡಿರುವ ಹಿನ್ನೆಲೆ ರಾಜ್ಯ ಸರ್ಕಾರ ಹೊಗೆಸೊಪ್ಪು ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಿಸುವ ಮತ್ತು ತಂಬಾಕು ಬೆಳೆಯನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ಮೂಲಕ ರೈತರ ನೆರವಿಗೆ ಮುಂದಾಗಬೇಕೆಂದು ಶಾಸಕ ಜಿ.ಡಿ. ಹರೀಶ್‌ ಗೌಡ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಮಂಗಳವಾರ ತಡರಾತ್ರಿವರೆಗೆ ನಡೆದ ಅಧಿವೇಶನದಲ್ಲಿ ನಿಯಮ 73ರಡಿ ಗಮನ ಸೆಳೆವ ಸೂಚನೆ ಸಂಖ್ಯೆ 422ರಡಿ ಮಾತನಾಡಿ, ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಸಭೆಯಲ್ಲಿ ಬಿಡಿಸಿಟ್ಟರು. ರಾಜ್ಯದಲ್ಲಿ 50 ಸಾವಿರಕ್ಕೂ ಹಚ್ಚು ರೈತಕುಟುಂಬಗಳು ತಂಬಾಕು ಕೃಷಿಯನ್ನು ತೊಡಗಿಸಿಕೊಂಡಿದ್ದು, ಹಳೆ ಮೈಸೂರು ಭಾಗದ ಹುಣಸೂರು, ಕೆ.ಆರ್. ನಗರ, ಎಚ್.ಡಿ. ಕೋಟೆ, ಪಿರಿಯಾಪಟ್ಟಣ ಮತ್ತು ಅರಕಲಗೂಡು ತಾಲೂಕಿನಲ್ಲಿ ತಂಬಾಕು ಬೆಳೆಯುತ್ತಿದ್ದಾರೆ. ಈ ಬಾರಿ ತಂಬಾಕು ದರದಲ್ಲಿನ ತೀವ್ರ ಕುಸಿತ ರೈತರಲ್ಲಿ ಆತಂಕ ಉಂಟು ಮಾಡಿದೆ. ಜನವರಿ ತಿಂಗಳಿನಲ್ಲಿ ಕೆ.ಜಿ ತಂಬಾಕಿಗೆ 278 ರು. ಇತ್ತು. ಫೆಬ್ರವರಿ ತಿಂಗಳಿನಲ್ಲಿ ಅದು 262ಕ್ಕೆ ಕುಸಿದರೆ, ಮಾರ್ಚಿ ತಿಂಗಳಿನಲ್ಲಿ ದರ 243 ರು. ಗಳಿಗೆ ಕುಸಿದಿದೆ. ಮೂರು ತಿಂಗಳಿನಲ್ಲಿ ಕೆಜಿಯೊಂದಕ್ಕೆ 35 ರು.ಗಳ ಕುಸಿತ ಕಂಡಿದೆ.

ಇದೀಗ ಈ ಕುಸಿತ 45 ರು. ಗಳಿಗೆ ತಲುಪಿದೆ. ಒಂದು ಕೆಜಿ ಹೊಗೆಸೊಪ್ಪು ಬೆಳೆಯಲು ಕನಿಷ್ಠ 185 ರು. ಗಳ ಖರ್ಚು ರೈತರಿಗಾಗುತ್ತದೆ. ಇಂತಹ ಆತಂಕದ ಸ್ಥಿತಿಯನ್ನು ಎದುರಿಸಲಾಗದೇ ತಾಲೂಕಿನ ಹಿರೀಕ್ಯಾತನಹಳ್ಳೀ ಗ್ರಾಮದ ಮಹದೇವ ಎಂಬ ಕೃಷಿಕ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರದ ಪಟ್ಟಿಯಲ್ಲಿಲ್ಲ: ತಮ್ಮ ಗಮನಸೆಳೆವ ಸೂಚನೆಗೆ ರಾಜ್ಯ ಕೃಷಿ ಮಂತ್ರಿ ಉತ್ತರ ನೀಡಿದ್ದು, ಅದರಲ್ಲಿ ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸುತ್ತದೆ. ಪ್ರತಿವರ್ಷ ಮುಂಗಾರು ಹಂಗಾಮಿಗೆ 14 ಬೆಳೆಗಳಿಗೆ (ಭತ್ತ, ಮುಸುಕಿನ ಜೋಳ, ಜೋಳ, ರಾಗಿ, ಸಜ್ಜೆ, ಉದ್ದು, ಹೆಸರು, ತೊಗರಿ, ಶೇಂಗಾ, ಸೂರ್ಯಕಾಂತಿ, ಸೋಯಾಬೀನ್, ಎಳ್ಳು, ಹುಚ್ಚೆಳ್ಳು ಮತ್ತು ಹತ್ತಿ) ಮತ್ತು ಹಿಂಗಾರು ಹಂಗಾಮಿಗೆ 6 ಬೆಳೆಗಳಾದ ಗೋದಿ, ಬಾರ್ಲಿ, ಕಡಲೆ, ಮಸೂರ, ಸಾಸುವೆ ಮತ್ತು ಕುಸುಬೆಗೆ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಕೇಂದ್ರ ಸರ್ಕಾರ ಘೋಷಿಸುವ ಬೆಳೆಗಳಲ್ಲಿ ತಂಬಾಕು ಸೇರ್ಪಡೆಗೊಂಡಿಲ್ಲವೆಂದಿದ್ದಾರೆ.

ಇದಲ್ಲದೇ ಫಸಲ್ ಬಿಮೆ ಯೋಜನೆ ವ್ಯಾಪ್ತಿಗೆ ತಂಬಾಕು ಸೇರಿಸಬೇಕೆನ್ನುವ ತಮ್ಮ ಒತ್ತಾಯಕ್ಕೆ ಉತ್ತರಿಸಿರುವ ಸಚಿವರು, ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯನ್ನು ಕೇಂದ್ರದ ಮಾರ್ಗಸೂಚಿಯನ್ವಯ ಜಾರಿಗೊಳಿಸಲಾಗುತ್ತಿದ್ದು, ತಂಬಾಕು ಬೆಳೆ ಸೇರಿಲ್ಲ. ರಾಜ್ಯಮಟ್ಟದ ಬೆಳೆ ವಿಮೆ ಸಮನ್ವಯ ಸಮಿತಿ ಸಭೆಯಲ್ಲಿ ಹೊಸ ಬೆಳೆ ಸೇರ್ಪಡೆ ಇಲ್ಲದೇ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿದೆ ಹಾಗೂ ಈ ಕುರಿತು ತಂಬಾಕು ಬೆಳೆಯನ್ನು ಸೇರ್ಪಡೆಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲವೆಂದಿದ್ದಾರೆ ಎಂದರು.

25 ರಿಂದ 30 ರು. ಪರಿಹಾರ ನೀಡಿರಿ:

2015ರಲ್ಲಿ ನೆರೆಯ ಆಂಧ್ರಪ್ರದೇಶದಲ್ಲಿ ತಂಬಾಕು ಬೆಳೆಗಾರರು ಇಂತಹುದೇ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ವೇಳೆ ಅಲ್ಲಿನ ಸರ್ಕಾರ ರೈತರ ನೆರವಿಗೆ ದಾವಿಸಿ ಪ್ರತಿ ಕೆಜಿಗೆ 5 ರು. ಗಳ ಪರಿಹಾರ ನೀಡಿದೆ. ಅಂತೆಯೇ ರಾಜ್ಯದಲ್ಲಿ ನಮ್ಮ ತಂಬಾಕು ಬೆಳೆವ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದು, ಸರ್ಕಾರ ಕನಿಷ್ಟ 30 ರು. ಗಳ ಬೆಂಬಲ ಬೆಲೆ ನೀಡುವ ಮೂಲಕ ರೈತರ ನೆರವಿಗೆ ಬರಬೇಕು. ಈ ಬಾರಿ ರಾಜ್ಯದಲ್ಲಿ 85 ಮಿಲಿಯನ್ ಕೆಜಿ ತಂಬಾಕು ಬೆಳೆದಿದ್ದು, ಇದಕ್ಕಾಗಿ 250 ಕೋಟಿ ರು. ಗಳ ಮೊತ್ತ ಖರ್ಚು ಮಾಡಬೇಕಿದೆ ಅಷ್ಟೇ ಎಂದು ಮನವಿ ಮಾಡಿದರು.

ಆಂಧ್ರದಲ್ಲಿ ಆಗುವುದು ಇಲ್ಯಾಕೆ ಆಗುವುದಿಲ್ಲ:

ತಂಬಾಕು ಬೆಳೆಯನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸೇರ್ಪಡೆಗೊಳಿಸುವ ಕುರಿತು 2025 ಜ. 25ರಂದು ಕೇಂದ್ರ ಮತ್ತು ಕರ್ನಾಟಕ ಹಾಗೂ ಆಂಧ್ರ ರಾಜ್ಯಗಳ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿ ಪರಿಶೀಲನೆ ನಡೆಸಿ ಪರಿಣಿತರ ಸಮಿತಿ ನೀಡಿದ ವರದಿಯನ್ವಯ ತಂಬಾಕು ಬೆಳೆಯನ್ನು ಫಸಲ್ ಬಿಮಾ ಯೋಜನೆಯಡಿ ಸೇರ್ಪಡೆಗೊಳಿಸಬಹುದಾಗಿದೆ ಎಂದಿದೆ.

ಈ ಕುರಿತು ಆಂಧ್ರ ಸರ್ಕಾರ ತಂಬಾಕು ಬೆಳೆಯನ್ನು ಅಲ್ಲಿನ ರಾಜ್ಯ ಸರ್ಕಾರ ಮಟ್ಟದ ಸಮಿತಿ ಒಪ್ಪಿಗೆ ಸೂಚಿಸಿ ಸೇರ್ಪಡೆಗೊಳಿಸಿದೆ. ಆದರೆ ರಾಜ್ಯದಲ್ಲಿ 2025ರ ಮಾ. 3ರಂದು ನಡೆದ ರಾಜ್ಯಮಟ್ಟದ ಕೋ ಆರ್ಡಿನೇಷನ್ ಸಮಿತಿ ತಂಬಾಕು ಬೆಳೆಯನ್ನು ವಿಮಾ ಯೋಜನೆಯ ವ್ಯಾಪ್ತಿಗೆ ತರುವ ಕುರಿತು ತೀರ್ಮಾನವನ್ನು ಮುಂದೂಡುವ ನಿರ್ಧಾರ ಕೈಗೊಂಡಿದೆ. ಆಂಧ್ರ ಪ್ರದೇಶದಲ್ಲಿ ಒಪ್ಪಿಗೆಯಾಗುವ ನಿಯಮ ಇಲ್ಲೇಕೆ ಆಗುತ್ತಿಲ್ಲ. ನಮ್ಮ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿರುವುದು ಏಕೆ ಎಂದು ಪ್ರಶ್ನಿಸಿ ಸರ್ಕಾರ ಈ ಕುರಿತು ಗಮನಹರಿಸಬೇಕೆಂದು ಒತ್ತಾಯಿಸಿದರು.

ಸಾಲ ಮನ್ನಾ ಮಾಡಲಿ:

ರಾಜ್ಯ ಸರ್ಕಾರ ತಂಬಾಕಿಗೆ ಬೆಂಬಲ ಬೆಲೆ ನೀಡಲಿ, ಜೊತೆಯಲ್ಲಿ ಫಸಲ್ ಬಿಮಾ ಯೋಜನೆಯ ವ್ಯಾಪ್ತಿಗೆ ತಂಬಾಕನ್ನು ಒಳಪಡಿಸಲಿ. ಇವೆಲ್ಲವೂ ರೈತರಿಗೆ ಅನುಕೂಲವಾಗಲಿದೆ. ಈ ಕುರಿತು ಈಗಾಗಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕೇಂದ್ರದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್‌ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಲಾಗಿದೆ. ಜೊತೆಯಲ್ಲಿ ರೈತರು ತೀವ್ರ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಈ ಹಿಂದೆ ರೈತರ ಅನುಕೂಲಕ್ಕಾಗಿ ಕುಮಾರಣ್ಣ 26 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಹಾಗೆಯೇ ಈಗಲೂ ಸರ್ಕಾರ ಸಾಲ ಮನ್ನಾಮಾಡಲು ಮುಂದಾಗಲಿ ಎಂದು ಹರೀಶ್‌ ಗೌಡ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯಂಗ ಸ್ನಾನಕ್ಕೆ ಒತ್ತು ನೀಡುವುದು ಅಗತ್ಯ: ಡಾ.ಚಂದ್ರಕಾಂತ್ ನಾಗಸಮುದ್ರ
2024ನೇ ಸಾಲಿನ ಶ್ರೀಶಿವರಾತ್ರೀಶ್ವರ ಪ್ರಶಸ್ತಿಗೆ ಪ್ರೊ.ಬಾಲಚಂದ್ರ ಜಯಶೆಟ್ಟಿ ಆಯ್ಕೆ