ಕನ್ನಡಪ್ರಭ ವಾರ್ತೆ ರಿಪ್ಪನ್ಪೇಟೆ
ಈಚೆಗೆ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ವಿದ್ಯಾರ್ಥಿ ಮನೆಗೆ ಮತ್ತು ಕೃಷಿ ಜಮೀನಿನಲ್ಲಿ ಹಾವು ಕಚ್ಚಿ ಮೃತರಾದ ಮಹಿಳೆ ಮನೆಗೆ ಮಳೆಹಾನಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರ ಮನೆಗಳಿಗೆ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಆಧ್ಯಕ್ಷ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ನೀಡಿದರು.ಇದೇ ಸಂದರ್ಭ ಸಮೀಪದ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿಕೊಪ್ಪದಲ್ಲಿ ಹಾವು ಕಡಿತಕ್ಕೊಳಗಾಗಿ ದುರ್ಮರಣಕ್ಕೀಡಾದ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಧನ ಸಹಾಯ ಮಾಡಿದರು.
ಗವಟೂರು ಗ್ರಾಮದಲ್ಲಿ ಮನೆಯನ್ನು ಮುನ್ನಡೆಸಬೇಕಿದ್ದ ಪದವಿ ವಿದ್ಯಾರ್ಥಿ ತಮ್ಮ ಮನೆಯ ಮುಂಭಾಗದಲ್ಲಿನ ಕಂಬದಲ್ಲಿ ವಿದ್ಯುತ್ ಲೈನ್ ಹರಿದು ಬಿದ್ದು ಸಾವನ್ನಪ್ಪಿದ ಕಾರ್ತಿಕ್ ಕುಟುಂಬಕ್ಕೆ ಸಾಂತ್ವನ ಹೇಳಿ ಅದಷ್ಟು ಬೇಗ ಮೆಸ್ಕಾಂ ಇಲಾಖೆಯಿಂದ ಶೀಘ್ರ 5 ಲಕ್ಷ ರು. ಪರಿಹಾರ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ಭಾರಿ ಗಾಳಿ ಮಳೆಯಿಂದಾಗಿ ಹಾನಿಗೊಳ್ಳಗಾದ ಹರತಾಳು ಶುಂಠಿಕೊಪ್ಪ ಮಾರುತಿಪುರ ಜೇನಿ ಅರಳಿಕೊಪ್ಪ ಮೇಲಿನ ಬೇಸುಗೆ ಮೆಣಸಕಟ್ಟೆ ಎಂ.ಗುಡ್ಡೆಕೊಪ್ಪ ವರಕೋಡು ಕೋಡೂರು ಕುಸುಗುಂಡಿ ಚಿಕ್ಕಜೇನಿ ಮತ್ತು ರಿಪ್ಪನ್ಪೇಟೆ ವ್ಯಾಪ್ತಿಯ ಬಹಳಷ್ಟು ಅವಘಡ ಸಂಭವಿಸಿದ ಪ್ರದೇಶಗಳಿಗೆ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯಿತ್ ಅಧ್ಯಕ್ಷ ಧನಲಕ್ಷ್ಮಿ, ಮೆಸ್ಕಾಂ ಎಇಇ ಚಂದ್ರಶೇಖರ್, ತಾ.ಪಂ ಇಒ ನರೇಂದ್ರ, ಪಿಡಿಒ ಮಧುಸೂದನ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ,ಹೋಬಳಿ ಘಟಕದ ಅಧ್ಯಕ್ಷ ಗಣಪತಿ ಗವಟೂರು, ಗ್ರಾಮ ಪಂಚಾಯ್ತಿ ಸದಸ್ಯ ಡಿ.ಈ. ಮಧುಸೂಧನ್, ಆಶೀಫ್ ಭಾಷಾ ಮತ್ತಿತರರು ಇದ್ದರು.