- ಸ್ವಚ್ಛತಾ ಕರ್ಮಚಾರಿಗಳಿಗೆ ಕಾಯಂ ನೇಮಕ । ದಸಂಸ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲಾ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕರ್ಮಚಾರಿಗಳಿಗೆ ಕಾಯಂ ನೇಮಕ ಹಾಗೂ ನೇರಪಾವತಿ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು. ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ದಲಿತ ಚಳುವಳಿ ಹರಿಕಾರ ಪ್ರೊ.ಬಿ. ಕೃಷ್ಣ ಪ್ಪನವರ 87ನೇ ಜಯಂತಿ ಮತ್ತು ದಸಂಸ ಸದಸ್ಯತ್ವ ಆಂದೋಲನ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಆಸ್ಪತ್ರೆ ಮತ್ತು ಗ್ರಾಪಂಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ನೇರ ಪಾವತಿಯಡಿ ನೇಮಕಾತಿ ಮಾಡಿಕೊಂಡು ಗುತ್ತಿಗೆ ಪದ್ಧತಿ ರದ್ದು ಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾರ್ಮಿಕ ವರ್ಗಕ್ಕೆ ಸ್ಪಂದಿಸಲಾಗುವುದು ಎಂದರು. ಜೀವನದ ಹಂಗನ್ನು ತೊರೆದು ನಗರಾದ್ಯಂತ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸಿದ್ಧ. ಆ ನಿಟ್ಟಿನಲ್ಲಿ ಜಿಲ್ಲೆಯ ಸ್ವಚ್ಛತಾ ಕರ್ಮಚಾರಿಗಳು ಮನೆ, ನಿವೇಶನ, ನಿಗಧಿತ ಸಮಯಕ್ಕೆ ವೇತನದ ಬೇಡಿಕೆಗಳನ್ನು ಪುರಸ್ಕರಿಸಿ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.ನಾಡಿನ ದಲಿತ ಚಳುವಳಿ ಹರಿಕಾರ ಪ್ರೊ.ಬಿ.ಕೃಷ್ಣಪ್ಪನವರು ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದಲ್ಲದೇ ಶೋಷಿತರ ಧ್ವನಿಯಾದವರು. ಕೇವಲ ದಲಿತ ಜನಾಂಗಕ್ಕೆ ಸೀಮಿತರಾಗದೇ ಬದುಕಿನ ನೊಂದವರ ಎಲ್ಲಾ ವರ್ಗಕ್ಕೆ ನ್ಯಾಯ ಕೊಡಿಸುವಲ್ಲಿ ಚಳುವಳಿ ರೂಪಿಸಿ ಶೋಷಿತರ ಏಳಿಗೆಗೆ ಆಧಾರವಾದವರು ಎಂದರು.ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟು ಸಾವು ಸಾಮಾನ್ಯ. ಈ ನಡುವೆ ಬಡವರು, ಶೋಷಿತರನ್ನು ಕಾಪಾಡುವಲ್ಲಿ ಹೋರಾಟ ಬೆಳೆಸಿಕೊಂಡಲ್ಲಿ ಮರಣ ನಂತರ ಜನಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಲು ಪ್ರೊ.ಬಿ .ಕೃಷ್ಣಪ್ಪನವರ ಹೋರಾಟವೇ ಸಾಕ್ಷಿ ಎಂದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪನವರು ಬಿ.ಆರ್.ಅಂಬೇಡ್ಕರ್ ಅವರ ಆಶಯದ ರಥವನ್ನು ಎಳೆದವರು. ಸಾಧ್ಯವಾದಲ್ಲಿ ನಾವುಗಳು ಆ ರಥವನ್ನು ಮುಂದೆಳೆಯಲು ಪ್ರಯತ್ನಿಸಬೇಕೆ ಹೊರತು, ಹಿಂದಿಕ್ಕುವ ಕೆಲಸಕ್ಕೆ ಕೈಹಾಕಬಾರದು ಎಂದು ಹೇಳಿದರು.ಪ್ರಸ್ತುತ ಸಂವಿಧಾನದಡಿ ಮೀಸಲಾತಿ ಲಾಭ ಪಡೆದು ಸಾಮಾಜಿಕ ಹಾಗೂ ಆರ್ಥಿಕವಾಗಿ ಉನ್ನತ ಸ್ಥಾನಕ್ಕೇರಿರುವ ಜನರು ತನ್ನ ಬೇರನ್ನು ಮರೆಯಬಾರದು. ಒಂದು ವೇಳೆ ಮೂಲ ಮರೆತರೇ ಅಂಬೇಡ್ಕರ್ ರವರ ತ್ಯಾಗಕ್ಕೆ ಅಪಪ್ರಚಾರ, ಶಕ್ತಿಕೊಟ್ಟ ವೇದಿಕೆಗೆ ದ್ರೋಹವೆಸಗಿದಂತೆ. ಹೀಗಾಗಿ ಮೂಲವನ್ನು ಸಮಾಜದ ವೈಚಾರಿಕ ಚಿಂತನೆಗಳಡಿ ಜೀವಿಸಬೇಕಿದೆ ಎಂದರು.ದಸಂಸ ಸದಸ್ಯತ್ವ ಆಂದೋಲನ ಕೇವಲ ರಶೀದಿಗಳಿಗೆ ಸೀಮಿತವಾಗದೇ, ಹೃದಯಕ್ಕೆ ನಾಟಬೇಕು. ವೈಚಾರಿಕವಾಗಿ ವಿಚಾರ ಅಳವಡಿಸಿಕೊಂಡು ಸದಸ್ಯತ್ವ ಪಡೆದಾಗ ಮಾತ್ರ ಸದಸ್ಯತ್ವಕ್ಕೆ ಶಕ್ತಿ ಬರಲಿದೆ. ಸುಮ್ಮನೆ ರಶೀದಿ ಕೊಟ್ಟಲ್ಲಿ ಆಶಯ ಗಳು ಈಡೇರುವುದಿಲ್ಲ. ವೈಚಾರಿಕತೆ ಅಳವಡಿಸಿಕೊಂಡು ಹೃದಯದಲ್ಲಿ ಪ್ರತಿಷ್ಟಾಪಿಸಿಕೊಂಡು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಹೋರಾಟವನ್ನು ಮುನ್ನಡೆಸಬೇಕು ಎಂದು ಹೇಳಿದರು.ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ಗುತ್ತಿಗೆ ಕಾರ್ಮಿಕರಿಗೆ ಸರ್ಕಾರ ನಿಗಧಿಗೊಳಿಸಿರುವ ವೇತನ ಜೀವನಕ್ಕೆ ಸಾಕಾಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಹಾಗೂ ತುರ್ತು ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ. ಹೀಗಾಗಿ ಸಮಾಜಕ್ಕಾಗಿ ದುಡಿಯುವ ಸ್ವಚ್ಛತಾ ಕರ್ಮ ಚಾರಿಗಳ ಮೂಲಬೇಡಿಕೆ ಈಡೇರಿಸಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಸಂಸ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ದಲಿತರ ಮೇಲಿನ ದೌರ್ಜನ ತಡೆಗಟ್ಟಲು 1974 ರಲ್ಲಿ ಪ್ರೊ.ಬಿ.ಕೃಷ್ಣಪ್ಪನವರು ದಸಂಸವನ್ನು ಹುಟ್ಟುಹಾಕಿ ಶೋಷಿತರ ಪರ ಹೋರಾಟ ಕ್ಕಿಳಿದು ಬದುಕಿನುದ್ಧಕ್ಕೂ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ಮಹತ್ವದ ನಾಯಕರಾಗಿದ್ದರು ಎಂದರು.ಕಾರ್ಯಕ್ರಮದಲ್ಲಿ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಸಣ್ಣ ಮತ್ತು ಮಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎನ್. ರಾಜಶೇಖರ್, ದಸಂಸ ಹಿರಿಯ ಮುಖಂಡ ಶ್ರೀಧರ್ ಕಲಿವೀರ್, ರಾಜ್ಯ ಸಂಘಟನಾ ಸಂಚಾಲಕರಾದ ಎಂ.ಶಿವಾನಂದ ಸಾವಳಗಿ, ಮಾರುತಿ ಬಿ.ಹೊಸಮನಿ, ರಾಜಶೇಖರ್, ವೆಂಕಟರಾಮಪ್ಪ, ದುರ್ಗಾದಾಸ್, ಎನ್.ಲೋಕೇಶ್, ಕೆ.ನಂಜಪ್ಪ, ಆದಿನಾರಾಯಣ, ತಮ್ಮಣ್ಣ ಕಾನಗಡ್ಡಿ, ಮಹದೇವ ಪ್ರಸಾದ್ ಉಪಸ್ಥಿತರಿದ್ದರು.
9 ಕೆಸಿಕೆಎಂ 1ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ದಲಿತ ಚಳುವಳಿ ಹರಿಕಾರ ಪ್ರೊ.ಬಿ. ಕೃಷ್ಣ ಪ್ಪನವರ 87ನೇ ಜಯಂತಿ ಮತ್ತು ದಸಂಸ ಸದಸ್ಯತ್ವ ಆಂದೋಲನವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.