- ಚನ್ನಗಿರಿ ಪಟ್ಟಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕಚೇರಿ ಉದ್ಘಾಟನೆ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ₹2 ಸಾವಿರ ನೆರವು ಜನರಿಗೆ ವರದಾನವಾಗಿದೆ. ಈ ಹಣ ಬಡವರ ಕಷ್ಟಗಳಿಗೆ ಕೊಂಚ ಸಹಕಾರಿಯಾಗುತ್ತಿದೆ ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕಚೇರಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಜನರ ಹಿತದೃಷ್ಠಿಯಿಂದ ಪಂಚ ಗ್ಯಾರಂಟಿಗಳಾದ ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದ ಬಡವರು ಮತ್ತು ಕಡುಬಡವರ ಬದುಕಿಗೆ ಕೊಂಚ ಆಸರೆಯಾಗುತ್ತಿದೆ. ಪಂಚ ಗ್ಯಾರಂಟಿಗಳ ನೆರವು ಬಳಸಿ ಅನೇಕರು ಸ್ವಉದ್ಯೋಗಗಳನ್ನು ಪ್ರಾರಂಭಿಸಿರುವ ಉದಾಹರಣೆಗಳಿವೆ. ಮಹಿಳೆಯರು, ನಿರುದ್ಯೋಗಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವ ಯೋಜನೆಗಳಿವು ಎಂದರು.ಕ್ಷೇತ್ರ ಶಾಸಕ ಬಸವರಾಜು ವಿ. ಶಿವಗಂಗಾ ಮಾತನಾಡಿ, ವಿರೋಧ ಪಕ್ಷದವರು ಪಂಚ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದೆ. ಕಳೆದೆರಡು ವರ್ಷದಿಂದ ಪಂಚ ಗ್ಯಾರಂಟಿ ಸವಲತ್ತುಗಳನ್ನು ಸರ್ಕಾರ ಯಶಸ್ವಿಯಾಗಿ ನಿರ್ವಹಿಸಿ, ಜನತೆಗೆ ತಲುಪಿಸುತ್ತಿದೆ. ರಾಜ್ಯದ ಅಭಿವೃದ್ಧಿಗೂ ಹಲವಾರು ಕಾಮಗಾರಿ, ಕೆಲಸಗಳನ್ನು ಸರ್ಕಾರ ಹಮ್ಮಿಕೊಂಡಿದೆ. ದೇವರಹಳ್ಳಿಯಲ್ಲಿ ₹6.45 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ ಪೂಜೆ ಕಾಮಗಾರಿ ಇದಕ್ಕೆ ಸಾಕ್ಷಿ ಎಂದ ಅವರು, ಬಿಜೆಪಿಯವರು ವಿನಾಕಾರಣ ಟೀಕಿಸುವುದು ಸರಿಯಲ್ಲ ಎಂದರು.
ಪಂಚ ಗ್ಯಾರಂಟಿಗಳ ನೂತನ ಕಚೇರಿಯನ್ನು ಶಾಸಕ ಬಸವರಾಜ ವಿ. ಶಿವಗಂಗಾ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಬಸವಂತಪ್ಪ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಪಂಚ ಗ್ಯಾರಂಟಿಗಳ ಜಿಲ್ಲಾ ಅಧ್ಯಕ್ಷ ಶಾಮನೂರು ಬಸವರಾಜ್, ನಂಜನಾಯ್ಕ್, ತಾಲೂಕು ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ತಹಸೀಲ್ದಾರ್ ಎನ್.ಜೆ. ನಾಗರಾಜ್, ತಾಪಂ ಕಾರ್ಯನಿರ್ವಾಹಕಾಧಿಕಾರಿ ಬಿ.ಕೆ.ಉತ್ತಮ, ಸದಸ್ಯರಾದ ರಾಜೇಶ್ವರಿ, ಶಶಿಕಲಾಮೂರ್ತಿ, ಸುಬ್ರಮಣಿ, ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಹಾಜರಿದ್ದರು.- - -
-9ಕೆಸಿಎನ್ಜಿ2:ಚನ್ನಗಿರಿಯಲ್ಲಿ ಪಂಚ ಗ್ಯಾರಂಟಿಗಳ ನೂತನ ಕಚೇರಿಯನ್ನು ಶಾಸಕ ಬಸವರಾಜ ವಿ. ಶಿವಗಂಗಾ, ಮಾಯಕೊಂಡ ಕ್ಷೇತ್ರ ಶಾಸಕ ಬಸವಂತಪ್ಪ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.