ಶಾಸಕ ಹರೀಶ್ ನೀತಿಪಾಠದ ಅಗತ್ಯ ನನಗಿಲ್ಲ: ಎಂ.ಪಿ.ರೇಣುಕಾಚಾರ್ಯ

KannadaprabhaNewsNetwork |  
Published : Jan 24, 2024, 02:05 AM IST
23ಕೆಡಿವಿಜಿ11-ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಭದ್ರಾ ಅಣೆಕಟ್ಟೆಗೆ ಬಾಗಿನ ಬಿಡಲು ಹೋದಾಗ ನಾನು ಸಂಸದ ಸಿದ್ದೇಶ್ವರರ ಗೆಲ್ಲಿಸಬೇಕೆಂದು ಹೇಳಿದ್ದೆ. ಆಗ ಜಗಳೂರಿನ ಎಸ್.ವಿ.ರಾಮಚಂದ್ರಪ್ಪ, ಚನ್ನಗಿರಿ ಮಾಡಾಳು ವಿರೂಪಾಕ್ಷಪ್ಪ ಧ್ವನಿಗೂಡಿಸಿದ್ದರು. ಎರಡನೇ ಬಾರಿ ಚಿತ್ರದುರ್ಗ ಜಿಲ್ಲೆ ಜೋಗಿಮಟ್ಟಿಯಲ್ಲಿ ನಾವು ಸಭೆ ಮಾಡಿ, ಸಿದ್ದೇಶ್ವರ್‌ರಿಗೆ ಸ್ಪರ್ಧಿಸುವಂತೆ ಹೇಳಿದ್ದೆವು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರದ ಶಾಸಕ ಬಿ.ಪಿ.ಹರೀಶ್‌ ನನ್ನ ಸ್ನೇಹಿತರಾಗಿದ್ದು, 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹೇಳದೇ, ಕೇಳದೇ ರಾತ್ರೋರಾತ್ರಿ ಕಾಂಗ್ರೆಸ್‌ಗೆ ಓಡಿ ಹೋಗಿದ್ದ ಇಂತಹ ಸ್ನೇಹಿತರಿಂದ ನೀತಿ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಬಿ.ಪಿ.ಹರೀಶ್‌ರ ಎಲ್ಲಾ ಕೆಲಸ, ಕಾರ್ಯಗಳ ಸರ್ಕಾರದ ಮಟ್ಟದಲ್ಲಿ ಮಾಡಿಸಿಕೊಟ್ಟಿದ್ದೇನೆ ಎಂದರು. ದಾವಣಗೆರೆ ಲೋಕಸಭಾ ಸದಸ್ಯರ ಹಠಾವೋ ಅಂದಿದ್ದು ನಾನಲ್ಲ. ಕಾಂಗ್ರೆಸ್ಸಿನವರು ಅಂತಹ ಮಾತುಗಳನ್ನಾಡಿದ್ದಾರೆ. ಭದ್ರಾ ಅಣೆಕಟ್ಟೆಗೆ ಬಾಗಿನ ಬಿಡಲು ಹೋದಾಗ ನಾನು ಸಂಸದ ಸಿದ್ದೇಶ್ವರರ ಗೆಲ್ಲಿಸಬೇಕೆಂದು ಹೇಳಿದ್ದೆ. ಆಗ ಜಗಳೂರಿನ ಎಸ್.ವಿ.ರಾಮಚಂದ್ರಪ್ಪ, ಚನ್ನಗಿರಿ ಮಾಡಾಳು ವಿರೂಪಾಕ್ಷಪ್ಪ ಧ್ವನಿಗೂಡಿಸಿದ್ದರು. ಎರಡನೇ ಬಾರಿ ಚಿತ್ರದುರ್ಗ ಜಿಲ್ಲೆ ಜೋಗಿಮಟ್ಟಿಯಲ್ಲಿ ನಾವು ಸಭೆ ಮಾಡಿ, ಸಿದ್ದೇಶ್ವರ್‌ರಿಗೆ ಸ್ಪರ್ಧಿಸುವಂತೆ ಹೇಳಿದ್ದೆವು. ಆಗ ಇದೇ ಬಿ.ಪಿ.ಹರೀಶ ದಾವಣಗೆರೆಯಲ್ಲಿ ಸಿದ್ದೇಶ್ವರ ಸ್ಪರ್ಧೆ ಮಾಡುವುದು ಬೇಡ. ಸೋಲುತ್ತೀರಿ ಎಂಬುದಾಗಿ ಹೇಳಿದ್ದನ್ನೇ ಮರೆತಂತಿದೆ. ಮೊನ್ನೆ ಮೊನ್ನೆವರೆಗೂ ಲೋಕಸಭಾ ಸದಸ್ಯ ಸಿದ್ದೇಶ್ವರ, ಪಕ್ಷದ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದವರು ಈಗ ದಿಢೀರನೇ ಸಿದ್ದೇಶ್ವರರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಕದ್ದು ಮುಚ್ಚಿ ಯಾರನ್ನೂ ಭೇಟಿಯಾಗಿಲ್ಲ:

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡಿದ್ದು ಹೊನ್ನಾಳಿ-ನ್ಯಾಮತಿ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಿ. ಹಿಂದೆ ಬಿಜೆಪಿ ಸರ್ಕಾರದಲ್ಲಿ ತಂದಿದ್ದ 1300 ಕೋಟಿ ರು. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಅವುಗಳ ಪೈಕಿ ಅನೇಕ ಕಾಮಗಾರಿ ಮುಕ್ತಾಯದ ಹಂತದಲ್ಲಿವೆ. ಅವುಗಳಿಗೆ ತಡೆ ಹಿಡಿದ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದೆನೇ ಹೊರತು, ನಾನು ತಲೆಗೆ ಟವಲು ಹಾಕಿಕೊಂಡು, ಕದ್ದು ಮುಚ್ಚಿ ಯಾರನ್ನೂ ಭೇಟಿಯಾಗಿಲ್ಲ. ಬಹಿರಂಗವಾಗಿಯೇ ಭೇಟಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷ ಸೇರುವುದಕ್ಕಲ್ಲ ಎಂದು ಹರಿಹರ ಶಾಸಕ ಬಿ.ಪಿ.ಹರೀಶ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಟೀಕೆಗೆ ರೇಣುಕಾಚಾರ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಹಿರಿಯ ಮುಖಂಡರಾದ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಹೊನ್ನಾಳಿ ಕೆ.ಜಿ.ಸುರೇಶ, ಎಸ್‌ಓಜಿ ಕಾಲನಿ ಹನುಮಂತಪ್ಪ, ಕೆ.ಎಸ್‌.ಮೋಹನಕುಮಾರ, ಅಣಜಿ ಬಸವರಾಜ, ಪಿ.ಎಸ್‌.ರಾಜು ವೀರಣ್ಣ, ಚೇತನಾ ಬಾಯಿ ಇತರರಿದ್ದರು.

ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್. ನಾವು ರವೀಂದ್ರನಾಥರ ಮನೆಗೆ ಭೇಟಿ ನೀಡಿದರೆ ಅದಕ್ಕೂ ಟೀಕಿಸುತ್ತಾರೆ. ರಾತ್ರೋರಾತ್ರಿ ಹೋಗಿ ಕಾಂಗ್ರೆಸ್ ಸೇರಿದ್ದವರಿಂದ ನೀತಿ ಪಾಠ ನಾನು ಕಲಿಯಬೇಕಿಲ್ಲ. ನನ್ನ ಬಗ್ಗೆ ಮಾತನಾಡುವ ನೈತಿಕತೆಯಾದರೂ ಬಿ.ಪಿ.ಹರೀಶ್‌ರಿಗೆ ಏನಿದೆ?

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

......

ಹಗುರವಾಗಿ ಮಾತನಾಡುವುದು ಬಿಡಲಿ

ಯಾರೋ ಪುಣ್ಯಾತ್ಮ ನನಗೆ ಹಲ್ಕಟ್‌ಗಿರಿ ಎಂಬ ಪದವನ್ನು ಬಳಸಿ, ನಾನು ಯಾರದ್ದೋ ಕಾಲಿಗೆ ಬಿದ್ದು ಬಿ ಫಾರಂ ಪಡೆದಿದ್ದಾಗಿ ಹೇಳಿದ್ದಾರೆ. ನನ್ನ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಅಂತಹ ವ್ಯಕ್ತಿ ಬಿಡಬೇಕು. ಕಾಲಿಗೆ ಬೀಳುವ ಜಾಯಮಾನವು ನನ್ನದಲ್ಲ. ನನಗೆ ಯಡಿಯೂರಪ್ಪನವರು, ಸಂಘಟನೆ, ವರಿಷ್ಠರು ಬಿ ಫಾರಂ ಕೊಟ್ಟಿದ್ದಾರೆಯೇ ಹೊರತು, ದಾವಣಗೆರೆ ಜಿಲ್ಲೆಯವರಲ್ಲ ಎಂದು ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್‌ ಟೀಕೆಗೆ ಎಂ.ಪಿ.ರೇಣುಕಾಚಾರ್ಯ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದರು.

.......

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ