ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ತಂದಿರುವುದನ್ನು ಸಹಿಸದೇ ಕೆಲವರು ನನ್ನ ವಿರುದ್ಧ ಅಸೂಯೆ ಪಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಬೇಸರ ವ್ಯಕ್ತಪಡಿಸಿದರು.ಸಮೀಪದ ಯಡಗನಹಳ್ಳಿಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ಸುಮಾರು 22 ಕೋಟಿ ರು. ವೆಚ್ಚದಲ್ಲಿ ಲೋಕಸರ ಶಾಖಾ ನಾಲೆ ಕಟ್ ಅಂಡ್ ಕವರ್, ಆರ್ಸಿಸಿ ಟ್ರಫ್ ಮತ್ತು ಅಡ್ಡ ಮೋರಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಚುನಾವಣೆ ಪೂರ್ವದಿಂದಲು ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದರು. ಜನರಿಗೆ ಸಿಗುವುದಿಲ್ಲ. ಇವರ ಉದ್ಯಮ - ವಹಿವಾಟಿಗಾಗಿ ಅಧಿಕಾರ ಬೇಕೆ ಎಂದು ವ್ಯಂಗ್ಯವಾಡುತ್ತಿದ್ದರು. ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳು ಅವರಿಗೆ ತಕ್ಕ ಉತ್ತರ ಸಿಕ್ಕಿದೆ ತಿರುಗೇಟು ನೀಡಿದರು.ಬೇರೆ ರಾಜಕಾರಣಿಗಳಂತೆ ನಾನು ಸುಳ್ಳು ಭರವಸೆ ನೀಡದೆ. ವಿರೋಧಿಗಳ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಸರ್ಕಾರದಿಂದ ಈಗಾಗಲೇ 1000 ಕೋಟಿ ರು. ಅನುದಾನ ತಂದು ಕೆಲಸ ಮಾಡುತ್ತಿದ್ದೇನೆ. ಅಪಪ್ರಚಾರಕ್ಕೆ ಕಿವಿಗೊಡದೆ ನನ್ನೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ನೀರಾವರಿ ಕಾಮಗಾರಿಗಳಿಗೆ 650 ಕೋಟಿ ಅನುದಾನ ತಂದು ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಈಗಾಗಲೇ ಹಲವು ಕಾಮಗಾರಿಗಳು ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಲೋಕಸರ ನಾಲಾ ವ್ಯಾಪ್ತಿ 3.5 ಕಿ.ಲೋ.ನಾಲೆ ಅಭಿವೃದ್ಧಿಯನ್ನು 30 ಕೋಟಿ ರು. ವೆಚ್ಚದಲ್ಲಿ ಗ್ರಾಮಸ್ಥರ ಸುರಕ್ಷಿತೆ ಹಾಗೂ ರೈತರ ಕಲ್ಯಾಣಕ್ಕಾಗಿ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ ಎಂದರು.ಲೋಕಸರ ನಾಲೆಯು ಸಬ್ಬನಹಳ್ಳಿ ಗ್ರಾಮದಿಂದ ಕೆ.ಎಂ.ದೊಡ್ಡಿಯ ಭಾಗದ ಜಲಾನಯನ ಪ್ರದೇಶದವರೆಗೂ ನೀರು ಸರಾಗವಾಗಿ ಹರಿಯಲು ನಾಲೆಗಳ ಆಧುನೀಕರಣ ಅತ್ಯಗತ್ಯ. ಕಾಡುಕೊತ್ತನಹಳ್ಳಿ, ಯಡಗನಹಳ್ಳಿ, ಕೆ.ಶೆಟ್ಟಹಳ್ಳಿ ಹಾಗೂ ಮಾದರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಬಿ.ಬಸವರಾಜು ಮಾತನಾಡಿ, ಶಾಸಕರು ಮದ್ದೂರು ಕ್ಷೇತ್ರದ ಸವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ 4 ಕಡೆ ಕಚೇರಿಗಳನ್ನು ತೆರೆದು ಕ್ಷೇತ್ರದ ಜನತೆ ಜತೆ ನಿರಂತರ ಸಂಪರ್ಕದಲ್ಲಿದ್ದು ರಾಜ್ಯದಲ್ಲೇ ಮಾದರಿ ಶಾಸಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಭಾರತಿನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಮುಖಂಡರಾದ ಕೆಂಚೆಗೌಡ, ಪುಟ್ಟೇಗೌಡ, ಪುಟ್ಟಣ, ಮಾದೇಗೌಡ, ಎಸ್.ಕೆಂಚೆಗೌಡ, ಚನ್ನಬಸವೇಗೌಡ, ಮಾದೇಗೌಡ, ಗೌಡಪ್ಪ, ಕರಡಕೆರೆ ಮನು, ರವಿಕುಮಾರ್ ಸೇರಿದಂತೆ ಹಲವರು ಇದ್ದರು.