ಸವಣೂರು: ಸವಣೂರಿನಲ್ಲಿ ನೀರಿಗಾಗಿ ನಡೆದ ದೊಂಬಿ ಗಲಾಟೆಯಲ್ಲಿ ರೈತರ ಸಾಕಷ್ಟು ದಾಖಲೆಗಳು ಸುಟ್ಟು ಹೋಗಿದ್ದರ ಪರಿಣಾಮವಾಗಿ ಸುಮಾರು 27 ವರ್ಷಗಳಿಂದ ನನೆಗುದಿಗೆ ಬಿದ್ದ ದಾಖಲೆಗಳನ್ನು ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ರೈತರ ಮನೆಗಳಿಗೆ ತೆರಳಿ ಮೂಲ ದಾಖಲಾತಿ ಅಥವಾ ಅದೆ ಗ್ರಾಮದಲ್ಲಿ ಕುಳಿತು ಪಂಚರ ದಸ್ತು ತೆಗೆದುಕೊಂಡು ರೈತರ ಉತ್ತಾರದಲ್ಲಿ ಇರುವ ಹಲವಾರು ಶರತ್ತುಗಳನ್ನು ತೆಗೆದು ಹಾಕಿ ರೈತರ ಸಂಕಷ್ಟಗಳನ್ನು ದೂರ ಮಾಡಬೇಕು ಎಂದು ಶಾಸಕ ಯಾಸೀರಖಾನ್ ಪಠಾಣ ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದರು.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರು ಹೋರಾಟಕ್ಕೆ ಮುಂದಾದರೆ, ಆಡಳಿತ ಪಕ್ಷದ ಶಾಸಕನಾಗಿ ನಾನೇ ಸ್ವತಃ ಜನರೊಂದಿಗೆ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗಲಿದೆ. ನೀರಿನ ಸಮಸ್ಯೆ ಎದುರಾದಲ್ಲಿ ಅಧಿಕಾರಿಗಳನ್ನು ತಕ್ಷಣ ವಜಾಗೊಳಿಸಲಾಗುವುದು. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ಅಧಿಕಾರಿಗಳು ಕಾರ್ಯವನ್ನು ಕಡ್ಡಾಯವಾಗಿ ನಿರ್ವಹಿಸಿದಲ್ಲಿ ಮಾತ್ರ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.
ಕರ್ನಾಟಕ ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಆಶೀರ್ವದಿಸಿದ ಜನರ ಸಮಸ್ಯೆ ಆಲಿಸಲು ಸರ್ಕಾರ ಅಧಿಕಾರಿಗಳ ತಂಡದೊಂದಿಗೆ ತೆರಳಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ಉಪ ವಿಭಾಗಾಧಿಕಾರಿ ಸಮೀರಪ್ರಕಾಶ ಕೋಡೆ, ತಾಪಂ ಇಒ ಬಿ.ಎಸ್. ಶಿಡೇನೂರ, ಪ್ರಮುಖರಾದ ಗುಡ್ಡಪ್ಪ ಜಲದಿ, ಮಂಜುನಾಥ ಉಳಾಗಡ್ಡಿ, ಸುಭಾಸ ಮಜ್ಜಗಿ, ಎಂ.ಜೆ. ಮುಲ್ಲಾ, ಮಾಂತೇಶ ಸಾಲಿ, ಮೌಲಾಸಾಬ ಹೊಂಬರಡಿ, ರವಿ ಕರಿಗಾರ, ಮಲ್ಲೇಶ ಹರಿಜನ, ನಾಗಪ್ಪ ತಿಪ್ಪಕ್ಕನವರ, ತಾಪಂ ಕೆಡಿಪಿ ಸರ್ವ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು. ಬಿಇಒ ಎಂ.ಎಫ್. ಬಾರ್ಕಿ ಹಾಗೂ ಶಿಕ್ಷಕ ವಿದ್ಯಾಧರ ಕುತನಿ ಕಾರ್ಯಕ್ರಮ ನಿರ್ವಹಿಸಿದರು.