ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಸರ್ಕಾರ ತಾರತಮ್ಯವಿಲ್ಲದೆ ರಾಜ್ಯವ್ಯಾಪಿ ಬರ ಘೋಷಿಸಿ, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಒತ್ತಾಯಿಸಿದರು.
ಸವಣೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಸರ್ಕಾರ ತಾರತಮ್ಯವಿಲ್ಲದೆ ರಾಜ್ಯವ್ಯಾಪಿ ಬರ ಘೋಷಿಸಿ, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಒತ್ತಾಯಿಸಿದರು.
ಸವಣೂರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಎದುರಿಗೆ ಸಾಂಕೇತಿಕ ಪ್ರತಿಭಟನೆ ಕೈಗೊಂಡು ಉಪವಿಭಾಗಾಧಿಕಾರಿ ಸಮೀರ ಪ್ರಕಾಶ ಕೋಡೆ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ತಾಲೂಕಿನ 24 ಕೆರೆಗಳಿಗೆ ನೀರು ತುಂಬಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ನದಿಯಲ್ಲಿ ನೀರು ಹರಿಯುತ್ತಿದ್ದಾಗ ಕೆರೆ ತುಂಬಿಸದಿರುವುದಕ್ಕೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಪ್ರಶ್ನಿಸಿ. ರೈತರ ಸಮಸ್ಯೆ ಕೇಳಲು ಬರುವವರಿಗೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಬಾರದು, ಸಮರ್ಪಕ ಮಳೆಯಾಗದೆ ಜಿಲ್ಲೆಯಲ್ಲಿ ಬೆಳೆಗಳು ಹಾನಿಗೊಳಗಾಗಿದ್ದು, ಸಾಮಾನ್ಯವಾಗಿ 50 ಟನ್ವರೆಗೆ ಇಳುವರಿ ನೀಡುತ್ತಿದ್ದ ಕಬ್ಬು ಕೆಲವೆಡೆ ಕೇವಲ 20 ಟನ್ಗೆ ಕುಸಿದಿದೆ. ಬರ ಪಟ್ಟಿಯಿಂದ ಕೈಬಿಟ್ಟ ಹಿರೇಕೆರೂರು, ರಟ್ಟಿಹಳ್ಳಿ ತಾಲೂಕುಗಳನ್ನೂ ಪರಿಶೀಲಿಸಿ ಪರಿಹಾರ ವ್ಯಾಪ್ತಿಗೆ ಸೇರಿಸಬೇಕು ಪರಿಹಾರದ ಜೊತೆಗೆ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದೂ ಆಗ್ರಹಿಸಿದರು.
ಗ್ರಾಮೀಣ ರಸ್ತೆ ಹಾಗೂ ಜಮೀನು ದಾರಿಗಳ ಸಮಸ್ಯೆಗಳನ್ನು ಸರ್ಕಾರ ತುರ್ತಾಗಿ ಪರಿಹರಿಸಿ ರೈತರಿಗೆ ನೆರವಾಗಬೇಕು ಬರ ಪರಿಸ್ಥಿತಿಯನ್ನು ಶಾಸಕಾಂಗ ಮತ್ತು ಕಾರ್ಯಾಂಗ ಗಂಭೀರವಾಗಿ ಪರಿಗಣಿಸಬೇಕು ಎಂದರು. 80 ವರ್ಷಗಳಿಂದ ರೈತರ ಘೋರಿಯ ಮೇಲೆ ರಾಜಕೀಯ ಮಾಡುತ್ತ ಬಂದಿರುವುದನ್ನು ಎಲ್ಲ ಪಕ್ಷಗಳೂ ನಿಲ್ಲಿಸಬೇಕು. 20 ವರ್ಷಗಳ ಹಿಂದೆಯೇ ಸಲ್ಲಿಕೆಯಾದ ಡಾ. ಸ್ವಾಮಿನಾಥನ್ ಆಯೋಗದ ವರದಿ ಕೂಡಲೇ ಜಾರಿಯಾಗಬೇಕು ಎಂದು ಒತ್ತಾಯಿಸಿ, ಕೃಷಿಗೆ ಸಂಬಂಧಿಸಿದಂತೆ ವಿದ್ಯುತ್ ಪೂರೈಕೆಯನ್ನು ಐದಾರು ಗಂಟೆಗಳಿಂದ ಕನಿಷ್ಠ ಏಳು ಗಂಟೆಗೆ ಹೆಚ್ಚಿಸಬೇಕು. ರೈತರು ತೆರಿಗೆ ಪಾವತಿಸಿ ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದು, ಅವರನ್ನು ಗೌರವದಿಂದ ಕಾಣಬೇಕು. ಜಿ ರಾಮ್ ಜಿ ಯೋಜನೆಯನ್ನು ಕೃಷಿ ಚಟುವಟಿಕೆಗೆ ಜೋಡಣೆ ಮಾಡಬೇಕು, ಎಥೆನಾಲ್ಗೆ ಇರುವ ಕಟ್ಟಲೆಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬೇಕು, ರೈತರ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 29ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹುಬ್ಬಳ್ಳಿಯ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವಂತೆ ಚೂನಪ್ಪ ಪೂಜೇರಿ ಕರೆ ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮ್ ಚೌಗಲಾ, ತಾಲೂಕು ಅಧ್ಯಕ್ಷ ಸಂಗಮೇಶ ಪೀತಾಬ್ರಶೆಟ್ಟಿ, ಕಿಶನ್ ನಂದಿ,ಪ್ರಕಾಶ ನಾಯ್ಕ,ಹನಮಂತಪ್ಪ ಹುಚ್ಚಣ್ಣನವರ, ರುದ್ರಪ್ಪ ಬಳಿಗಾರ, ಹನಮಂತ ಸಿದ್ದಾಪುರ, ಬಸಯ್ಯಾ ಹಿರೇಮಠ, ಶಿವನಗೌಡ ಗಾಜಿಗೌಡ, ಶಿವಾನಂದ ಜಡಿಮಠ ಹಾಗೂ ರೈತ ಮುಖಂಡರು ಇದ್ದರು.