ಗಾಂಧಿನಗರ, ಭೋವಿ ಕಾಲೋನಿ, ಕುಷ್ಠರೋಗಿಗಳ ಕಾಲೋನಿ, ಗಂಜಾಂ ಕುರಾದ್ ಟೀದಿ, ಆದಿ ಜಾಂಬವ ಬೀದಿ ಕಾಲೋನಿ, ಹಂಗರಹಳ್ಳಿ ಕಾಲೋನಿ, ಮಹಮದ್ ಶಾ ಲೇಔಟ್ಗಳಲ್ಲಿ ವಾಸ ಮಾಡುತ್ತಿರುವ ಕೆಲ ಬಡವರಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ ಕೆಲವರಿಗೆ ಮನೆ ಹಕ್ಕುಪತ್ರ ಸಿಕ್ಕಿಲ್ಲ. ಅಂತಹವರನ್ನು ಗುರುತಿಸಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಹಲವು ವಾರ್ಡ್ಗಳಿಗೆ ಶಾಸಕ, ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡರು ತಹಸೀಲ್ದಾರ್, ಅಧಿಕಾರಿಗಳು, ಪುರಸಭೆ ಅಧ್ಯಕ್ಷರು, ಸದಸ್ಯರೊಂದಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
ಪಟ್ಟಣದ ಭೋವಿ ಕಾಲೋನಿ, ಪೂರ್ಣಯ್ಯ ಬೀದಿ, ಅಂಚೆಶಿಪ್ಪಯ್ಯ ಬೀದಿ, ಹಳೇ ಅಂಚೆ ಕಚೇರಿ ರಸ್ತೆ, ಪೇಟೆಬೀದಿ ಮುಖ್ಯ ರಸ್ತೆ, ಕಾಳಮ್ಮನಗುಡಿ ಬೀದಿ, ಕುಂಬಾರಗೇರಿ ಬೀದಿ, ಗಂಗಾಮತಸ್ಥರ ಬೀದಿ, ಮಾರ್ಕೆಟ್ ಬೀದಿ, ಗೋಸೇಗೌಡ ಬೀದಿ, ರಾಂಪಾಲ್ ರಸ್ತೆ, ಅಂಚೆ ಕಚೇರಿ ಬೀದಿಯಲ್ಲಿ ಸಂಚಾರ ನಡೆಸಿದರು.
ಕುಡಿಯುವ ನೀರು, ಬೀದಿದೀಪ, ರಸ್ತೆ, ಮ್ಯಾನ್ ಹೋಲ್, ಚರಂಡಿ ಇತರ ಸಮಸ್ಯೆಗಳ ಕುರಿತು ಆಯಾಯ ವಾರ್ಡ್ ನಿವಾಸಿಗಳಿಂದ ಅಹವಾಲು ಸ್ವೀಕರಿಸಿದರು.
ವಾರ್ಡ್ನಲ್ಲಿನ ಹದಗಟ್ಟ ರಸ್ತೆ, ವಿದ್ಯುತ್ ದೀಪ, ಹೈಮಾಸ್ಟ್ ದೀಪ, ಚರಂಡಿ ಅವ್ಯವಸ್ಥೆ, ಶುದ್ಧ ಕುಡಿಯುವ ನೀರು ಘಟಕಗಳ ತೊಂದರೆ ಕುರಿತು ಮಾಹಿತಿ ಪಡೆದು ವಾರದೊಳಗೆ ಎಲ್ಲಾ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಪುಸರಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಹಾಗೂ ಸೆಸ್ಕ್ ಇಲಾಖೆ ಎಇಇ ಮಂಜುನಾಥ ಪ್ರಸಾದ್ ಅವರಿಗೆ ತಾಕೀತು ಮಾಡಿದರು.
ನಂತರ ಗಾಂಧಿನಗರ, ಭೋವಿ ಕಾಲೋನಿ, ಕುಷ್ಠರೋಗಿಗಳ ಕಾಲೋನಿ, ಗಂಜಾಂ ಕುರಾದ್ ಟೀದಿ, ಆದಿ ಜಾಂಬವ ಬೀದಿ ಕಾಲೋನಿ, ಹಂಗರಹಳ್ಳಿ ಕಾಲೋನಿ, ಮಹಮದ್ ಶಾ ಲೇಔಟ್ಗಳಲ್ಲಿ ವಾಸ ಮಾಡುತ್ತಿರುವ ಕೆಲ ಬಡವರಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ ಕೆಲವರಿಗೆ ಮನೆ ಹಕ್ಕುಪತ್ರ ಸಿಕ್ಕಿಲ್ಲ. ಅಂತಹವರನ್ನು ಗುರುತಿಸಬೇಕು. ಅವರ ದಾಖಲಾತಿ ಸಂಗ್ರಹಿಸಿ ಹಕ್ಕುವತ್ತ ವಿತರಣೆ ಮಾಡಬೇಕು. ಇ-ಖಾತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಕ್ವಾಟ್ರಸ್ ಹಿಂಭಾಗ ಸರ್ಕಾರಿ ಜಾಗದಲ್ಲಿ ಹತ್ತಾರು ವರ್ಷಗಳಿಂದ ಮನೆ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿರುವ ಫಲಾನುಭವಿಗಳಿಗೂ ಪುರಸಭೆಯಿಂದ ಹಕ್ಕುಪತ್ರ ನೀಡಲು ಕ್ರಮ ವಹಿಸಬೇಕು ಎಂದರು.
ಅಂಕಾಳಮ್ಮ ದೇವಾಲಯ ಒಳಾಂಗಣಕ್ಕೆ ಕಾಂಕ್ರೀಟ್, ಸಿಂಗಣ್ಣ ಗರಡಿಗೆ ನೂತನ ಕಟ್ಟಡಕ್ಕೆ ಅಗತ್ಯ ಅನುದಾನ, ರಾಂಪಾಲ್ ಬೀದಿ ಶ್ರೀ ಆಂಜನೇಯ ದೇಗುಲ ಅಡಿಗೆ ಮನೆ ಕಾಮಗಾರಿಗೆ ಅನುದಾನ, ಕುಂಬಾರ್ ಗೇರಿ ಬೀದಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಅನುದಾನ, ಮುಖ್ಯ ಬೀದಿಯಲ್ಲಿರುವ ಪೇಟೆ ನಾರಾಯಣ ಸ್ವಾಮಿ ದೇಗುಲ ಅಭಿವೃದ್ಧಿದೇಗುಲ ಅವರಣದಲ್ಲಿ ವಾಕಿಂಗ್ ಪಾಥ್, ಕುಳಿತುಕೊಳ್ಳಲು ಕಲ್ಲುಬೆಂಚು ಉದ್ಯಾನವನ, ಸೋಲಾರ್ ಲೈಟ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು. ಶ್ರೀರಂಗಪಟ್ಟಣ ಟೌನ್ ಕುಡಿಯುವ ನೀರು ಸರಬರಾಜು ಮಾಡುವ ಘಟಕಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ಎ.ಬಿ ವೇಣು, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಪ್ರಭಾರ ಅಧ್ಯಕ್ಷ ಎಂ.ಎಲ್ ದಿನೇಶ್, ಸದಸ್ಯರಾದ ಎಂ.ನಂದೀಶ್, ಎಸ್.ನಂದೀಶ್, ಕೃಷ್ಣಪ್ಪ, ಗಂಜಾಂ ಶಿವು, ಎಸ್.ಟಿ.ರಾಜು ಶ್ರೀನಿವಾಸ್, ಪೂರ್ಣಿಮಾ, ರಾಧ ಶ್ರೀಕಂಠು, ಮುಖಂಡರಾದ ಸೋಮಸುಂದರ್, ಯುವ ಘಟಕ ಅಧ್ಯಕ್ಷ ರಜಿನಿಕಾಂತ್ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.
ವೃದ್ಧ ಮಹಿಳೆಗೆ ಮನೆ ನಿರ್ಮಾಣ ಶಾಸಕರ ಭರವಸೆ
ಶ್ರೀರಂಗಪಟ್ಟಣ:
ಪಟ್ಟಣದ ಲಕ್ಷ್ಮಿಗುಡಿ ಸಮೀಪ ವೃದ್ಧ ಮಹಿಳೆ ವೆಂಕಟಮ್ಮ ನರಸಿಂಹಯ್ಯರ ಮನೆ ಗೋಡೆ ಮಳೆಯಿಂದಾಗಿ ಕಳೆದ ನಾಲೈದು ಹಿಂದೆ ಕಿುಸಿದು ಬಿದ್ದು ನಾಶವಾಗಿತ್ತು.
ವಾರ್ಡ್ಗಳಿಗೆ ಭೇಟಿ ನೀಡಿದ ಶಾಸಕ ರಮೇಶ ಬಂಡಿಸಿದ್ದೇಗೌಡರು ವೃದ್ಧ ಮಹಿಳೆ ಮನೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗೋಪಾಲಕೃಷ್ಣ ರೇ, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಹರೀಶ್ ಕುಮಾರ್ ಅವರು ಆಗಮಿಸಿದ್ದರು.
ಮನೆ ಕಳೆದುಕೊಂಡು ಮಹಿಳೆಗೆ ತಾಲೂಕು ಆಡಳಿತದಿಂದ ನೆರವು ನೀಡುವಂತೆ ತಹಸೀಲ್ದಾರ್ ಪರಶುರಾಮ್ ಅವರಿಗೆ ನ್ಯಾಯಾಧೀಶರು ಸಲಹೆ ನೀಡಿದರು. ಆಗ ಶಾಸಕರು ತಾಲೂಕು ಆಡಳಿತದಿಂದ 1. 25 ಲಕ್ಷ ರು., ಪುರಸಭೆಯಿಂದ 1.25 ಲಕ್ಷ ಭರಿಸಬೇಕು. ವೈಯುಕ್ತಿಕವಾಗಿ ನಾನು ಹಣ ನೀಡುತ್ತೇನೆ. 5 ಲಕ್ಷ ರು. ವೆಚ್ಚದಲ್ಲಿ ಶೀಘ್ರ ವೃದ್ಧೆಗೆ ಮನೆ ನಿರ್ಮಿಸಿ ಕೊಡುವಂತೆ ನ್ಯಾಯಾಧೀಶರ ಸಮ್ಮುಖದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣಗೆ ಸೂಚಿಸಿದರು. ಇಂದಿನಿಂದಲೇ ಮನೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ತಾಕೀತು ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.