ಬರಗಾಲದ ಟಾಸ್ಕ್ಫೋರ್ಸ್ ಸಮಿತಿ ಸಭೆ । ಪ್ರತಿ ಗ್ರಾಪಂಗಳಿಗೆ ಭೇಟಿ ನೀಡುವಂತೆ ಸೂಚನೆ
ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ನಡೆದ ಬರಗಾಲದ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಸಮಗ್ರ ವರದಿ, ಸಂಪೂರ್ಣ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಶಾಸಕ ಶ್ರೀನಿವಾಸ ಮಾನೆ ಸಿಡಿಮಿಡಿಗೊಂಡರು.
ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಶಾಸಕ ಮಾನೆ, ಮುಂದಿನ ಮೂರ್ನಾಲ್ಕು ತಿಂಗಳು ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹೆಚ್ಚಿದೆ. ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಯ ಉಂಟಾಗಬಾರದು. ಇದಕ್ಕಾಗಿ ಯಾವ ಸಿದ್ಧತೆ ಮಾಡಿಕೊಂಡಿದ್ದೀರಿ? ಅಗತ್ಯವಿರುವ ಹಣಕಾಸು ಯಾವ ಮೂಲದಿಂದ ಒದಗಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ತಾಪಂ ಇಒ ದೇವರಾಜ ಅಸಮರ್ಪಕ ಉತ್ತರ, ಅಪೂರ್ಣ ಮಾಹಿತಿ ನೀಡಿದರು. ಅದಕ್ಕೆ ಶಾಸಕರು ಬೇಸರ ವ್ಯಕ್ತಪಡಿಸಿ, ತಕ್ಷಣವೇ ಪ್ರತಿ ಗ್ರಾಪಂಗಳಿಗೆ ಭೇಟಿ ನೀಡಿ, ವಾಸ್ತವತೆ ಅರಿಯಿರಿ. ಹಣಕಾಸಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆದು ಸಮಗ್ರ ವರದಿ ಸಿದ್ಧಪಡಿಸಿ. ಫೆ. ೩ರಂದು ಮತ್ತೆ ಸಭೆ ನಡೆಸೋಣ. ಕಾಟಾಚಾರದ ಸಭೆಯಿಂದ ಸಮಯ ಹಾಳು ಮಾಡುವುದು ಬೇಡ ಎಂದರು.ಕುಡಿಯುವ ನೀರು ಪೂರೈಕೆಗೆ ೧೫ನೇ ಹಣಕಾಸಿನಲ್ಲಿ ಹಣ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಹಣ ಬಿಡುಗಡೆಗೊಂಡಿಲ್ಲ ಎಂದು ತಾಪಂ ಇಒ ದೇವರಾಜ ಸಭೆಯಲ್ಲಿ ಗಮನ ಸೆಳೆದಾಗ ಮೊದಲೇ ಮಾಹಿತಿ ನೀಡಿದರೆ ಜಿಪಂ ಸಿಇಒ, ಅಗತ್ಯ ಬಿದ್ದರೆ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಬಹುದಿತ್ತು. ಮೊದಲೇ ಏಕೆ ಗಮನಕ್ಕೆ ತರಲಿಲ್ಲ ಎಂದು ಶ್ರೀನಿವಾಸ ಮಾನೆ ಪ್ರಶ್ನಿಸಿದರು.
ತಹಸೀಲ್ದಾರ್ ರೇಣುಕಾ ಎಸ್., ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಆರ್.ಸಿ. ನೆಗಳೂರ, ಹೆಸ್ಕಾಂ ಎಇಇ ಆನಂದ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನಕುಮಾರ, ಉಪ ತಹಸೀಲ್ದಾರರಾದ ನಾಗರಾಜ ಸೂರ್ಯವಂಶಿ, ಎಂ.ಎಂ. ಮುಗದುಂ, ಕಂದಾಯ ನಿರೀಕ್ಷಕರಾದ ಎಸ್.ಎಸ್. ರಾಠೋಡ, ನಾಗರಾಜ ನಂದಿಹಳ್ಳಿ, ಮಾರುತಿ ಹೊನಕುಪ್ಪಿ ಸೇರಿದಂತೆ ಇತರರು ಇದ್ದರು.