ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಪರಿಷತ್
ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಮತ್ತು ಬಿಜೆಪಿಯ ಕೆ.ಎಸ್. ನವೀನ್ ಅವರು, ನಿಯಮ 330ರ ಅಡಿಯಲ್ಲಿ ರಾಜ್ಯದಲ್ಲಿ ಮದ್ಯಪಾನಿಗಳ ಪೈಕಿ ಲಿವರ್ ಸಿರೋಸಿಸ್/ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ಸಂಬಂಧ ಅಬಕಾರಿ ಆದಾಯದ ಶೇ.20ರಷ್ಟು ಮೊತ್ತ ಮೀಸಲಿಡುವಂತೆ ಕೋರಿದರು.
ಅದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ರಾಜ್ಯದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ 195.27 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 47.46 ಲಕ್ಷ ಪೆಟ್ಟಿಗೆಗಳು ಕಡಿಮೆ ಮಾರಾಟವಾಗಿದೆ. ಶೀತ ವಾತಾವರಣ, ಚಳಿ ಹೆಚ್ಚಿರುವ ಕಾರಣ ಬಿಯರ್ ಮಾರಾಟ ಕುಸಿತ ಕಂಡಿದೆ ಎಂದರು.ಇನ್ನು, ಅಬಕಾರಿ ಆದಾಯವನ್ನು ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡಲಾಗುತ್ತಿದೆ. ಈ ಆದಾಯವನ್ನು ಬಜೆಟ್ನಲ್ಲಿ ಅನುಮೋದಿಸಿದ ಕಾರ್ಯಕ್ರಮಗಳಿಗೆ ವ್ಯಯಿಸಲಾಗುತ್ತಿದೆ. ಸಂಚಿತ ನಿಧಿಗೆ ಜಮೆಯಾಗಿರುವ ಅನುದಾನವನ್ನು ಬೇರೆ ಉದ್ದೇಶಕ್ಕೆ ವೆಚ್ಚ ಮಾಡಲಾಗದು. ಆದ್ದರಿಂದ ಮದ್ಯಪಾನಿಗಳಲ್ಲಿ ಲಿವರ್ ಸಿರೋಸಿಸ್/ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆಗೆ ಅಬಕಾರಿ ಆದಾಯದಿಂದ ವೆಚ್ಚ ಭರಿಸಲಾಗದು ಎಂದು ಸ್ಪಷ್ಟಪಡಿಸಿದರು.ಈ ಉತ್ತರದಿಂದ ಸಂತುಷ್ಟಗೊಳ್ಳದ ವಿಪಕ್ಷ ಸದಸ್ಯರು, ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದೆ. ಅದರ ನಡುವೆ ರಾಜ್ಯ ಸರ್ಕಾರ 46 ಸಾವಿರ ಕೋಟಿ ರು. ಅಬಕಾರಿ ಆದಾಯ ಸಂಗ್ರಹದ ಗುರಿ ನೀಡಿದೆ. ಹೀಗೆ ಹೆಚ್ಚಿನ ಪ್ರಮಾಣದ ಗುರಿ ನೀಡುವ ಮೂಲಕ ಮದ್ಯಪಾನಿಗಳ ಸಂಖ್ಯೆ ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು.
ಅದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಶಿವಕುಮಾರ್, ಕಳಪೆ ಮದ್ಯ ಮಾರಾಟದಿಂದಾಗಿ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಜತೆಗೆ ಹೊಸದಾಗಿ 1,500 ಮದ್ಯದಂಗಡಿ ತೆರೆಯಲು ಸರ್ಕಾರ ಯೋಜಿಸಿದೆ. ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಅಂತಿಮವಾಗಿ ಸಭಾನಾಯಕ ಎನ್.ಎಸ್. ಬೋಸರಾಜು ಅವರು, ರಾಜ್ಯದ ಜನರ ಆರೋಗ್ಯ ಮತ್ತು ಚಿಕಿತ್ಸೆಗಾಗಿ ರಾಜ್ಯ ಸರ್ಕಾರದಿಂದ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹೀಗಾಗಿ ಅಬಕಾರಿ ಆದಾಯದಲ್ಲಿ ಲಿವರ್ ಸಿರೋಸಿಸ್/ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆಗೆ ಅನುದಾನ ನೀಡಲಾಗದು ಎಂದರು.