ಕನ್ನಡಪ್ರಭ ವಾರ್ತೆ ಭಾರತೀನಗರ
ನೀರಿಲ್ಲದೆ ರೈತರ ಬೆಳೆಗಳು ಒಣಗುತ್ತಿವೆ. ವಿ.ಸಿ.ನಾಲೆಗಳಿಗೆ ನೀರು ಕೊಡಿಸುವಲ್ಲಿ ಜಿಲ್ಲೆಯ ಶಾಸಕರು ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಆಕ್ರೋಶ ವ್ಯಕ್ತಪಡಿಸಿದರು.ಭಾರತೀನಗರದಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಮತ್ತು ಜಾನುವಾರುಗಳಿಗೆ ನೀರಿಲ್ಲದೆ ಜನರು ತತ್ತರಿಸುತ್ತಿದ್ದರೂ ಇದೆಲ್ಲವನ್ನು ಕಂಡು ಕಾಣದಂತೆ ಶಾಸಕರು ಮೂಕರಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ರೈತರು ಸಾಲ ಮಾಡಿ ಬೆಳೆಗಳನ್ನು ಹಾಕಿದ್ದಾರೆ. ಈಗ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ಅವರದೇ ಸರ್ಕಾರವಿದ್ದರೂ ಕನಿಷ್ಠ ಜಾನುವಾರುಗಳಿಗಾದರೂ ನೀರು ಬಿಡಿಸಲು ಚಿಂತನೆ ಮಾಡದಂತಹ ಸ್ಥಿತಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ತಲುಪಿದ್ದಾರೆ ಕಿಡಿಕಾರಿದರು.ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿಗಗಾಹ ಸತತ ಮೂರು ವರ್ಷಗಳ ಕಾಲ ಬರಗಾಲ ಆವರಿಸಿತ್ತು. ಆ ವೇಳೆಯು ಕೆಆರ್ ಎಸ್ ಅಣೆಕಟ್ಟೆಯಲ್ಲಿ 75 ಅಡಿ ವರೆಗೆ ನೀರಿತ್ತು. ಕುಡಿಯುವ ನೀರು ಮತ್ತು ವ್ಯವಸಾಯಕ್ಕೂ ನೀರು ಕೊಟ್ಟಂತಹ ಉದಾಹರಣೆ ಇದೆ. ಇದಕ್ಕೆ ಬೇಕಾದರೆ ನೀರಾವರಿ ಇಲಾಖೆ ಬಳಿ ಇರುವ ಕಡತವನ್ನು ತೆಗೆದು ನೋಡಲಿ ಎಂದು ಸಲಹೆ ಮಾಡಿದರು.
ಕೆಆರ್ಎಸ್ನಲ್ಲಿ 12 ಅಡಿಯಷ್ಟು ಹೆಚ್ಚುವರಿ ನೀರಿದೆ. ಅಂದರೆ ಇಂದು 19 ಅಡಿಯಷ್ಟು ನೀರಿದ್ದರೂ ಸಹ ವಿಸಿ ನಾಲೆಗೆ ನೀರು ಬಿಡಿಸುವಲ್ಲಿ ಮುಖಂಡರು ವಿಫಲರಾಗಿದ್ದಾರೆ. ಜಿಲ್ಲೆಯಿಂದ ಆಯ್ಕೆಯಾದ ಶಾಸಕರು ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.ನೀರಾವರಿ ಇಲಾಖೆ ವ್ಯವಸ್ಥೆಯಲ್ಲಿ ಹೋರಾಟ ನಡೆಸಿ ನೀರು ಬಿಡಿಸುವಂತಹ ತಿಳುವಳಿಕೆ ಅವರಿಗಿಲ್ಲವೆನೋ ಎಂಬಂತೆ ಕಾಣುತ್ತಿದೆ. ವಿಸಿ ನಾಲೆಗಳಿಗೆ ನೀರು ಬಿಡದಿರುವುದರ ಹಿಂದೆ ಕಾಣದ ಕೈಗಳ ಹುನ್ನಾರ ಇರಬಹುದೆಂದು ನಾನು ಭಾವಿಸಿದ್ದೇನೆ ಎಂದರು.
ಯಾವ ಶಾಸಕರಿಗೂ ಇದರ ಬಗ್ಗೆ ಅರಿಯುವ ಜ್ಞಾನವಂತಿಕೆ ಇಲ್ಲ. ನೀರಿಲ್ಲದೇ ರೈತರು ಬೆಳೆದ ಬೆಳೆಗಳು ಒಣಗಿ ನಷ್ಟಕ್ಕೊಳಗಾಗಿದ್ದಾರೆ. ದಯಮಾಡಿ ತಾತ್ಸಾರ ಮನೋಭಾವನೆ ಬಿಟ್ಟು ತಕ್ಷಣವೇ ವಿಸಿ ನಾಲೆಗಳಿಗೆ ನೀರನ್ನು ಬಿಡುಗಡೆ ಮಾಡಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ನೀರಾವರಿ ಸಚಿವರು, ಸಂಬಂಧ ಪಟ್ಟ ಇಲಾಖೆಯವರು ಆದಷ್ಟು ಬೇಗ ನೀರು ಹರಿಸಲು ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದರು.