ಕನ್ನಡಪ್ರಭ ವಾರ್ತೆ, ತುಮಕೂರು
ಮೊಬೈಲ್ ಬಳಕೆಯಿಂದ ಸೃಜನ ಶೀಲತೆ ಮರುಟಿ ಹೋಗುತ್ತಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ, ತುಮಕೂರು ವಿಶ್ವವಿದ್ಯಾಲಯ, ದರೈ ಸ್ತ್ರೀ ಕಲ್ಚರಲ್ ಟ್ರಸ್ಟ್ ಹಾಗೂ ಸಮತಾ ಪ್ರಕಾಶನದ ವತಿಯಿಂದ ತುಮಕೂರುವ ವಿವಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಶಿವಣ್ಣ ತಿಮ್ಲಾಪುರ ಬರೆದಿರುವ ‘ತೊಗಲ ಯೋಗಿ’ ಕವನ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ಇಂದಿನ ಯುವಕರ ಅಭಿರುಚಿಯೆಂದರೆ ಎಲ್ಲೇ ಕುಳಿತುಕೊಳ್ಳಲಿ ಮೊಬೈಲ್ ಹಿಡಿದಿರುತ್ತಾರೆ. ಪಕ್ಕದಲ್ಲಿ ಯಾರು ಕುಳಿತಿರುತ್ತಾರೆ ಎಂಬ ಬಗ್ಗೆ ವಿಚಾರಿಸುವುದಿಲ್ಲ. ಬಸ್ ಇಲ್ಲವೇ ಟ್ರೈನ್ ನಲ್ಲಿ ಕುಳಿತುಕೊಳ್ಳಲಿ ಅವರು ಮೊಬೈಲ್ ಹಿಡಿದುಕೊಳ್ಳುತ್ತಾರೆ. ಹೀಗಾಗಿ ಒಬ್ಬರಿಗೊಬ್ಬರಿಗೆ ಪರಿಚಯ ಮಾಡಿಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಹೊಸ ತಂತ್ರಜ್ಞಾನದಿಂದ ದುಷ್ಪರಿಣಾಮವೇ ಹೆಚ್ಚು ಆಗುತ್ತಿವೆ. ತಂತ್ರಜ್ಞಾನದಿಂದ ಯಾವ ರೀತಿ ದುರುಪಯೋಗ ಮಾಡಿಕೊಳ್ಳಬಹುದು. ಹೀಗೆ ದುರುಪಯೋಗ ಮಾಡುವುದರಿಂದ ಸ್ವಂತಕ್ಕೆ ಆಗುವ ಲಾಭವೇನು? ಈ ರೀತಿಯ ಬುದ್ದಿವಂತರೂ ಕೂಡ ಇದ್ದಾರೆ ಎಂದರು.ಕ್ರಿಪ್ಕೋ ಕರೆನ್ಸಿ ವಿಚಾರದಲ್ಲಿ ತನಿಖೆ ಎದುರಿಸುತ್ತಿರುವ ಶ್ರೀಕಿ ಅನ್ನುವ ವ್ಯಕ್ತಿ ಬಹಳ ಬುದ್ದಿವಂತ. ಅವನನ್ನು ನೋಡಲು ಪೆಕರನಂತೆ ಕಾಣುತ್ತಾನೆ. ಅಸಾಧಾರಣ ಬುದ್ದಿವಂತ ಅವನು. ಆದರೆ ಆ ಬುದ್ದಿವಂತಿಕೆಯನ್ನು ತಂತ್ರಜ್ಞಾನ ದುರುಪಯೋಗಪಡಿಸಿಕೊಳ್ಳಲು ಬಳಸಿಕೊಂಡು ಅಪರಾಧ ಎಸಗಿದ್ದಾನೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ತಿದ್ದುವ ಕೆಲಸ ಮಾಡಬೇಕು ಎಂದರು.
ಡಾ.ಶಿವಣ್ಣ ತಿಮ್ಲಾಪುರ ಹಳ್ಳಿನಲ್ಲಿ ಹುಟ್ಟಿ,ಹಳ್ಳಿಯಲ್ಲಿಯೇ ವಿದ್ಯಾಭ್ಯಾಸ ಮಾಡಿ ತನ್ನ ಛಾಪನ್ನು ಮೂಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಇಂದಿನ ಯುವಕರಿಗೆ ಶಿವಣ್ಣ ಮಾದರಿಯಾಗಿದ್ದಾರೆ ಎಂದರುಡಾ.ಅಗ್ರಹಾರ ಕೃಷ್ಣಮೂರ್ತಿ ತೊಗಲ ಯೋಗಿ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ, ದಲಿತ ಮತ್ತು ಬಂಡಾಯ ಸಾಹಿತ್ಯದ 50 ವರ್ಷಗಳ ಕಾಲಘಟ್ಟದಲ್ಲಿ ಆರಂಭದಲ್ಲಿ ಇದ್ದ ಸಿಟ್ಟು, ಸೆಡುವ, ನೋವು, ಆಕ್ರೋಶ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಆದರೆ ಯಾವುದಕ್ಕೂ ರಾಜೀಯಾಗದೆ ತಮಗೆ ಅನಿಸಿದ್ದನ್ನು ಹೇಳುವ ರೀತಿ ಬದಲಾಗಿದೆ. ಕಾವ್ಯದ ಓದುವಿನಲ್ಲಿ ಏರುಪೇರುಗಳಾಗುತ್ತಿರುವ ಇಂದಿನ ದಿನಗಳಲ್ಲಿ ಕಾವ್ಯದ ಮೂಲಕವೇ ಹೊಸದೊಂದನ್ನು ಹೇಳಲು ಹೊರಟಿರುವ ಡಾ.ಶಿವಣ್ಣ ತಿಮ್ಮಲಾಪುರ ಅವರ ಕವಿತೆಗಳು ಕಾವ್ಯದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡುವ,ಶರಣರ ಕಾಲಘಟ್ಟ ಮತ್ತು ಅಧುನಿಕ ಕಾಲಘಟ್ಟವನ್ನು ಒಂದು ವಾಕ್ಯದಲ್ಲಿ ಕಟ್ಟಿಕೊಡುವ ಇವರ ಜಾಣ್ಮೆ ಮೆಚ್ಚಲೇಬೇಕು. ನೇಗಿಲ ಯೋಗಿ, ತೊಗಲ ಯೋಗಿ ಪದಗಳನ್ನು ಗಮನಿಸಿದರೆ, ಕುವೆಂಪು ಅವರಿಂದ ಪ್ರೇರೇಪಿರಾದಂತೆ ಕಂಡು ಬರುತ್ತದೆ.ಇವರಿಂದ ಮತ್ತಷ್ಟು ಕೃತಿಗಳು ಹೊರಬರಲಿ, ಕನ್ನಡ ಸಾಹಿತ್ಯ ಲೋಕದಲ್ಲಿ ಬಹುಕಾಲ ಉಳಿಯುವಂತಾಗಲಿ ಎಂದು ಶುಭ ಹಾರೈಸಿದರು.ಸಂಸ್ಕೃತಿ ಚಿಂತಕ ಡಾ.ನಟರಾಜ ಬೂದಾಳ್ ಅಧ್ಯಕ್ಷತೆ ವಹಿಸಿದ್ದರು. ಕವನ ಸಂಕಲನ ಕುರಿತು ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿದರು.ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸಾಹಿತಿ ತುಂಬಾಡಿ ರಾಮಯ್ಯ, ಕುಲಸಚಿವೆ ನಾಹಿದಾ ಜಮ್ ಜಮ್, ಚರಕ ಆಸ್ಪತ್ರೆಯ ಡಾ.ಬಸವರಾಜು, ಸಾಮಾಜಿಕ ಹೋರಾಟಗಾರ ಡ್ಯಾಗೇರಹಳ್ಳಿ ವಿರೂಪಾಕ್ಷ, ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ.ಬಿ.ಆರ್.ರೇಣುಕಪ್ರಸಾದ್, ತೊಗಲ ಯೋಗಿ ಕೃತಿಕಾರ ಡಾ.ಶಿವಣ್ಣ ತಿಮ್ಲಾಪುರ ಮತ್ತಿತರರಿದ್ದರು.