ಕನ್ನಡಪ್ರಭ ವಾರ್ತೆ ಮಡಿಕೇರಿ
ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸ್ಮಶಾನವೇ ಇಲ್ಲವಾಗಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಮಶಾನ ಜಾಗ ಒದಗಿಸುವಂತೆ ಆಗ್ರಹಿಸಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗ ಅಣಕು ಶವಯಾತ್ರೆ ಪ್ರತಿಭಟನೆ ನಡೆಸಿದರು .ಸ್ಮಶಾನ ಹೋರಾಟ ಸಮಿತಿ ಸಂಚಾಲಕ ಪಿ.ಆರ್. ಭರತ್ ಮಾತನಾಡಿ, ನೆಲ್ಯಹುದಿಕೇರಿಯಲ್ಲಿ ಬಡವರು ಮತ್ತು ಕೂಲಿಕಾರ್ಮಿಕರೇ ಹೆಚ್ಚಾಗಿ ವಾಸವಾಗಿದ್ದಾರೆ. ಆದರೆ ಇವರುಗಳಿಗೆ ಬಹಳಷ್ಟು ವರ್ಷಗಳಿಂದ ವ್ಯವಸ್ಥಿತವಾದ ಸ್ಮಶಾನ ಜಾಗವಿಲ್ಲದೆ ಪರದಾಡುವಂತಾಗಿದೆ.ಸ್ಮಶಾನ ಹೋರಾಟ ಸಮಿತಿಯ ಹೋರಾಟಗಳ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ತಹಸೀಲ್ದಾರರು ಸಭೆ ನಡೆಸಿ ಮೂರು ತಿಂಗಳ ಅವಧಿಯಲ್ಲಿ ಸ್ಮಶಾನ ಜಾಗ ಒದಗಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಏಳು ತಿಂಗಳು ಕಳೆದಿದ್ದರೂ ಸ್ಮಶಾನ ಜಾಗ ದೊರಕಿಲ್ಲ. ಹೀಗಿದ್ದೂ ಈ ಅವಧಿಯಲ್ಲಿ ತಹಸೀಲ್ದಾರರು ಬೆಟ್ಟದಕಾಡು ಮಾರ್ಗದ ಬಳಿಯ ಸರ್ವೇ ನಂ.177 ರಲ್ಲಿ 1.02 ಎಕರೆ ಜಾಗವನ್ನು ಸ್ಮಶಾನಕ್ಕೆಂದು ಗುರುತಿಸಿದ್ದಾರೆ. ಆದರೆ, ಇದನ್ನು ಸ್ಮಶಾನಕ್ಕೆ ನಿಗದಿಗೊಳಿಸಿ ಆರ್ಟಿಸಿ ಮಾಡುವಲ್ಲಿ ನೆಲ್ಯಹುದಿಕೇರಿ ವ್ಯಾಪ್ತಿಯ ಭೂ ಮಾಫಿಯಾಗಳು, ರಿಯಲ್ ಎಸ್ಟೇಟ್ ದಂದೆಗಳು ಅಡ್ಡಗಾಲು ಹಾಕುತ್ತಿವೆ ಎಂದು ಆರೋಪಿಸಿದರು.ನೆಲ್ಯಹುದಿಕೇರಿ ಸ.ನಂ.183 ರಲ್ಲಿ 1.8 ಎಕರೆ ಜಾಗ ಸ್ಮಶಾನಕ್ಕೆಂದು ಮೀಸಲಾಗಿ ಆರ್ಟಿಸಿಯಾಗಿದ್ದರೂ ಕೂಡ ಅದು ಒತ್ತುವರಿಯಾಗಿ ಕಾಫಿ ತೋಟವಾಗಿ ಪರಿವರ್ತನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಂದಿನ ದಿನಗಳಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಸಾವು ಸಂಭವಿಸಿದಾಗ, ಅಂತ್ಯಸಂಸ್ಕಾರವನ್ನು ಒತ್ತುವರಿ ಜಾಗದಲ್ಲೇ ನಡೆಸಲಾಗುವುದು.ಈ ಸಂದರ್ಭ ಉಂಟಾಗಬಹುದಾದ ಸಂಘರ್ಷಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಕಾರಣರಾಗುತ್ತಾರೆ ಎಂದ ಭರತ್, ನೆಲ್ಯಹುದಿಕೇರಿಯಲ್ಲಿ ಸ್ಮಶಾನ ಜಾಗಕ್ಕಾಗಿ ಕಾನೂನಾತ್ಮಕ ಹೋರಾಟಕ್ಕೂ ಸ್ಮಶಾನ ಹೋರಾಟ ಸಮಿತಿ ಸಿದ್ಧವಿದೆ ಎಂದು ಎಚ್ಚರಿಸಿದರು.ಇದೇ ಸಂದರ್ಭದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು. ಮಳೆಯ ನಡುವೆಯೂ ಪ್ರತಿಭಟನೆ ನಡೆಸಿ ಸ್ಮಶಾನ ಜಾಗಕ್ಕಾಗಿ ಒತ್ತಾಯಿಸಿದರು.ಈ ಸಂದರ್ಭದ ಪ್ರಮುಖರಾದ ಟಿ.ಟಿ. ಉದಯಕುಮಾರ್, ಎನ್. ನಾರಾಯಣ, ಕೆ.ಜಿ. ರಮೇಶ್, ಸುರೇಶ್, ಪ್ರಭಾಕರ, ಚಂದ್ರ, ಮುಕುಂದ, ರವಿ, ಅನಿಲ್, ರಾಜು, ಶಿವರಾಮ, ದಾಸ್, ರಮೇಶ್, ಬೋಜಿ, ಬೇಬಿ, ಸುಶೀಲಾ, ಕುಟ್ಟನ್, ಅಭಿ ಸೇರಿದಂತೆ ಸ್ಥಳೀಯರು ಪ್ರತಿಭಟನೆಯಲ್ಲಿದ್ದರು.