ಶಂಕರ ಭಟ್ಟ ತಾರೀಮಕ್ಕಿ
ಯಲ್ಲಾಪುರ: ದೇಶ, ವಿದೇಶದ ನೂರಾರು ಜಾತಿಯ ಹಣ್ಣಿನ ಗಿಡಗಳನ್ನು ಕೇವಲ 4 ಎಕರೆ ಭೂಮಿಯಲ್ಲಿ ಪೋಷಿಸಿದ ತಾಲೂಕಿನ ವಜ್ರಳ್ಳಿ ಗ್ರಾಪಂನ ಕುಗ್ರಾಮ ಬಾಗಿನಕಟ್ಟಾದ ಯುವಕ ಸುಬ್ರಹ್ಮಣ್ಯ ಗಾಂವ್ಕರ ರೈತರಿಗೆ ಮಾದರಿಯಾಗಿದ್ದಾರೆ.ಇವರು ತಮ್ಮ ೪ ಎಕರೆ ಜಮೀನಿನಲ್ಲಿ ಅಡಕೆ ಬೆಳೆಯೊಂದಿಗೆ ನೂರಾರು ದೇಶಿ ಮತ್ತು ವಿದೇಶಿ ತಳಿಯ ವೈವಿಧ್ಯಮಯ ಹಣ್ಣು ಹಂಪಲು ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿರುವ ಯುವಕನ ಧೈರ್ಯ ಯುವಜನಾಂಗಕ್ಕೆ ಸ್ಫೂರ್ತಿಯಾಗಿದೆ.
ನೂರಾರು ಜಾತಿಯ ಹಣ್ಣು ಹಂಪಲುಗಳನ್ನು ರಾಜ್ಯ- ಹೊರ ರಾಜ್ಯ, ಹೊರದೇಶಗಳಿಂದ ತರಿಸಿ, ಅವುಗಳನ್ನು ನೆಟ್ಟಿದ್ದಾರೆ. ಅವು ಇಂದು ಫಲ ನೀಡುತ್ತಿವೆ. ಆದರೆ ಅವರ ಹಣ್ಣು-ಹಂಪಲುಗಳಿಗೆ ಇಲ್ಲಿ ಸೂಕ್ತ ಮಾರುಕಟ್ಟೆ ಇಲ್ಲವಾಗಿದೆ. ಕೃಷಿಯಲ್ಲಿ ಆಸಕ್ತಿ, ಶ್ರದ್ಧೆ ಹೊಂದಿದವರು ಸುಬ್ರಹ್ಮಣ್ಯ ಗಾಂವ್ಕರ ಅವರ ಕೃಷಿ ನೋಡಿಕೊಂಡು ತಮ್ಮ ಜಮೀನಿನಲ್ಲೂ ಅಳವಡಿಸಿಕೊಳ್ಳಬಹುದು.ಸಹಕಾರಿ ಸಂಘ ಕಟ್ಟಿದ ಯುವಕ:
ಯುವಕ ರೈತನಷ್ಟೇ ಅಲ್ಲದೇ ಸಾಮಾಜಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡು ಶ್ರೀದೇವಿ ಸೇವಾ ರೈತ ಉತ್ಪಾದಕ ಕಂಪನಿ ಕಳಚೆ ಎಂಬ ಸಹಕಾರಿ ಸಂಸ್ಥೆಯನ್ನು ಕಟ್ಟಿದ್ದಾರೆ. ಈ ಮೂಲಕ ರೈತರಿಗೆ ಮಾರ್ಗದರ್ಶಕರಾಗಿದ್ದಾರೆ. ಸದಾ ಜನೋಪಕಾರಿಯಾಗಿ ಬಾಗಿನಕಟ್ಟಾ, ಬೀಗಾರ, ತಾರಗಾರ ಜನರಿಗೆ ಆಪದ್ಬಾಂಧವರಾಗಿದ್ದಾರೆ.ಇವರು ತನ್ನ ೪ ಏಕರೆ ತೋಟದ ಸುತ್ತ ಹಣ್ಣಿನ ಗಿಡ ಬೆಳೆಸಿದ್ದಲ್ಲದೇ, ತೋಟದ ನಡುವೆಯೂ ಕೆಲವು ಸಣ್ಣ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಅದಕ್ಕೆ ಅಡಿಕೆ ತೋಟದಂತೆ ಗೊಬ್ಬರ, ಮಣ್ಣು ಅಗತ್ಯ ಸೌಲಭ್ಯವನ್ನು ಒದಗಿಸಿದ್ದಾರೆ. ೧೦೨ ಜಾತಿಯ ಗಿಡಗಳಲ್ಲಿ ಸುಮಾರು ೪೦ ಜಾತಿಯ ಗಿಡಗಳು ವಿದೇಶಿ ತಳಿಗಳಾಗಿವೆ. ಬುಷ್ ಪೇಪರ್ ಜಾಕ್, ಬಂಬು ತೈವಾನ್ ಗೇರು, ೪ ರೀತಿಯ ಏಲಕ್ಕಿ, ೨೫ಕ್ಕೂ ಹೆಚ್ಚಿನ ಜಾತಿಯ ಮಾವಿನಹಣ್ಣು, ಹಲಸು, ಬಕ್ಕೆ, ರಾಮಫಲ, ಸೀತಾಫಲ, ಹನುಮಫಲ, ದ್ರಾಕ್ಷಿ, ಬಾದಾಮಿ, ಮರ ದ್ರಾಕ್ಷಿ, ಬಳ್ಳಿ ದ್ರಾಕ್ಷಿ, ಬಳ್ಳಿ ಪಪ್ಪಾಯಿ, ಚಂದನ, ಶ್ರೀಗಂಧ, ದಾಲ್ಚಿನ್ನಿ, ಲವಂಗ, ಇಂಗು ಹೀಗೆ ನೂರಾರು ಜಾತಿಯ ತಳಿಗಳನ್ನು ಬೆಳೆಸಿದ್ದಾರೆ. ಅಲ್ಲದೇ ಸೊಪ್ಪಿನ ಬೆಟ್ಟದಲ್ಲಿ ಹಲವು ರೀತಿಯ ಗಿಡಗಳನ್ನು ಬೆಳೆಸುತ್ತಿದ್ದಾರೆ.
ಇವರಿಗೆ ಈಗಾಗಲೇ "ಉತ್ತಮ ಆಧುನಿಕ ಕೃಷಿಕ'''''''' ಮತ್ತು ಸಂಘಟಕ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.ರೈತರು ಸಾಮಾನ್ಯ ಭೂಮಿಯಲ್ಲಿ ಹಣ್ಣು ಹಂಪಲು, ಸೊಪ್ಪಿನ ಬೆಟ್ಟದಲ್ಲಿ ಏಲಕ್ಕಿ, ಕಾಳುಮೆಣಸು ಬೆಳೆದರೆ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಎಲ್ಲ ರೈತೋತ್ಪನ್ನಗಳ ಮಾರುಕಟ್ಟೆ ಅಸಾಧ್ಯವಾದದ್ದೇನೂ ಅಲ್ಲ ಎನ್ನುತ್ತಾರೆ ಬಾಗಿನಕಟ್ಟಾದ ಯುವ ರೈತ ಸುಬ್ರಹ್ಮಣ್ಯ ಗಾಂವ್ಕರ.