ಜಿಲ್ಲೆಯಾದ್ಯಂತ ಗುಡುಗು ಸಹಿತ ಸಾಧಾರಣ ಮಳೆ

KannadaprabhaNewsNetwork |  
Published : Apr 15, 2025, 12:59 AM IST
ಮನೆ ಮೇಲೆ ಮರ ಬಿದ್ದು ಅಪಾರ ಹಾನಿ | Kannada Prabha

ಸಾರಾಂಶ

ಚಿಕ್ಕಮಗಳೂರು: ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲಿ ಸೋಮವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದೆ.

ಚಿಕ್ಕಮಗಳೂರು: ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲಿ ಸೋಮವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದೆ.ಕಡೂರು ತಾಲೂಕಿನ ಬೀರೂರು ಹಾಗೂ ಶೃಂಗೇರಿ, ಕೊಪ್ಪ ತಾಲೂಕುಗಳಲ್ಲಿ ಬಲವಾಗಿ ಗಾಳಿಯೊಂದಿಗೆ ಭಾರೀ ಮಳೆ ಯಾಗಿದೆ. ಹೀಗಾಗಿ ಕೆಲವೆಡೆ ಮರಗಳು ಬಿದ್ದ ಪರಿಣಾಮ ವಿದ್ಯುತ್‌ ಸಂಪರ್ಕದಲ್ಲಿ ಅಡಚಣೆಯಾಗಿತ್ತು.ತರೀಕೆರೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಂಜೆ 5.30ರ ವೇಳೆಗೆ ಸಾಧಾರಣ ಮಳೆಯಾಗಿದ್ದರೆ, ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಬಲವಾಗಿ ಗಾಳಿ ಬೀಸಿದ್ದು, ಗುಡುಗು ಸಹಿತ ಮಳೆಯಾಗಿದೆ. ಆದರೆ, ಕಡೂರು ಪಟ್ಟಣದಲ್ಲಿ ಸಂಜೆ ವೇಳೆಗೆ ಆಗಿರಲಿಲ್ಲ, ದಟ್ಟವಾಗಿ ಮೋಡ ಕವಿದ ವಾತಾವರಣ ಇತ್ತು.ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದ ಮಲೆನಾಡು ಪ್ರದೇಶದಲ್ಲಿ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಆರಂಭ ವಾದ ಮಳೆ ಆಗಾಗ ಬಿಟ್ಟು ಬಿಟ್ಟು ಬರುತ್ತಿತ್ತು. ಈ ವಾತಾವರಣ ಸಂಜೆ 6 ಗಂಟೆವರೆಗೆ ಮುಂದುವರಿದಿದ್ದರಿಂದ ವಾತಾವರಣ ತಂಪಾಗಿತ್ತು. ಮೂಡಿಗೆರೆಯಲ್ಲೂ ಸಾಧಾರಣ ಮಳೆಯಾದರೆ, ಶೃಂಗೇರಿ ತಾಲೂಕಿನಾದ್ಯಂತ ಮಧ್ಯಾಹ್ನ 3 ಗಂಟೆಗೆ ಗುಡುಗು ಸಹಿತ ಆರಂಭವಾದ ಮಳೆ ಸಂಜೆ 5.30ರವರೆಗೆ ಬಿಡುವಿಲ್ಲದೆ ಸುರಿಯಿತು. ಗಾಳಿಯಿಂದಾಗಿ ಮರ ಬಿದ್ದ ಪರಿಣಾಮ ವಿದ್ಯುತ್‌ ಸಂಪರ್ಕದಲ್ಲಿ ಅಡಚಣೆಯಾಗಿತ್ತು. ಎನ್‌.ಆರ್‌.ಪುರ ತಾಲೂಕಿನ ಕೆಲವೆಡೆ ಮೋಡ ಕವಿದ ವಾತಾವರಣ ಇತ್ತು.

-- ಬಾಕ್ಸ್--

ಗಾಳಿ, ಮಳೆ ಆರ್ಭಟ, ರಸ್ತೆಗುರುಳಿದ ಮರಗಳು

ಶೃಂಗೇರಿ: ತಾಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ ಗುಡುಗು ಸಿಡಿಲು ಗಾಳಿಯ ಆರ್ಭಟದೊಂದಿಗೆ ಭಾರೀ ಮಳೆ ಸುರಿಯಿತು. ಮಧ್ಯಾಹ್ನ ದಟ್ಟ ಮೋಡ ಕವಿದು ಜೋರಾದ ಗಾಳಿ ಬೀಸಲಾರಂಬಿಸಿತು. ನಂತರ ಗುಡುಗು ಸಿಡಿಲಿನ ಆರ್ಭಟ ದೊಂದಿಗೆ ಕೆಲ ಹೊತ್ತು ಭಾರೀ ಮಳೆ ಸುರಿಯಿತು.

ಶೃಂಗೇರಿ ಪಟ್ಟಣದಲ್ಲಿ ದಾರಾಕಾರವಾಗಿ ಗಾಳಿ ಸಹಿತ ಮಳೆ ಸುರಿಯಿತು. ಕೆಲವೆಡೆ ಗಾಳಿ ಆರ್ಭಟಕ್ಕೆ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಉರುಳಿಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ಕುಂಚೇಬೈಲು ಬಳಿ ರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆ ಮರಗಳು ಉರುಳಿಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ತಂತಿಗಳು ನೆಲದ ಮೇಲೆ ಬಿದ್ದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ನೆಮ್ಮಾರು ಕೆರೆಕಟ್ಟೆ, ಮೆಣಸೆ, ಬೇಗಾರು, ವಿದ್ಯಾರಣ್ಯ ಪುರ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಭಾರೀ ಮಳೆ ಸುರಿಯಿತು. ಗಾಳಿಯ ರಭಸಕ್ಕೆ ಕೆಲವೆಡೆ ಛಾವಣಿಯ ಶೀಟ್ ಗಳು ಹಾರಿ ಹೋಗಿವೆ. ಯಾವುದೇ ರೀತಿಯ ಅನಾಹುತಗಳು ಉಂಟಾಗಿಲ್ಲ. ಶನಿವಾರ ರಾತ್ರಿಯೂ ಭಾರೀ ಮಳೆ ಸುರಿದಿತ್ತು.

14 ಶ್ರೀ ಚಿತ್ರ 3

ಶೃಂಗೇರಿ ತಾಲೂಕಿನ ಕುಂಚೇಬೈಲು ಬಳಿ ಗಾಳಿ ಮಳೆಯ ಆರ್ಭಟಕ್ಕೆ ರಸ್ತೆ ಮೇಲೆ ಮರಗಳು ಉರುಳಿ ಬಿದ್ದಿರುವುದು.

--

ಮನೆ ಮೇಲೆ ಮರ ಬಿದ್ದು ಅಪಾರ ಹಾನಿಕೊಪ್ಪ: ಬಸರೀಕಟ್ಟೆಯಲ್ಲಿ ಸುರಿದ ಭಾರಿ ಗಾಳಿ, ಮಳೆಗೆ ಸೋಮೇಶ್ವರ ಖಾನ್ ವಾಸಿ ಮೈಕೆಲ್ ಎಂಬುವವರ ಮನೆಗೆ ಮೇಲೆ ದೊಡ್ಡ ಮರ ಬಿದ್ದು ಅಪಾರ ಹಾನಿಯಾಗಿದೆಸ್ಥಳೀಯರ ಸಹಕಾರದಿಂದ ಮರಗಳ ತೆರವು ಮಾಡಲಾಗಿದೆ. ಸಂಬಂಧಿಸಿದ ಇಲಾಖೆಯವರು ಶೀಘ್ರದಲ್ಲೇ ಅವರಿಗೆ ಪರಿಹಾರ ನೀಡಬೇಕೆಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಹೇಳಿದರು.ನಮ್ಮ ಭಾಗದಲ್ಲಿ ಕಳೆದ ವರ್ಷದ ಮಳೆಗೆ ಹಾನಿಯಾದ ಮನೆಗಳಿಗೆ, ವಸತಿ ಪ್ರದೇಶಗಳಿಗೆ ಪರಿಹಾರ ಇನ್ನೂ ಬರದೆ ಇದ್ದು ಅವುಗಳ ದುರಸ್ತಿ ಕಾಮಗಾರಿ ಅತಿ ಹೆಚ್ಚು ಮಳೆ ಪ್ರಾರಂಭವಾಗುವ ಮೊದಲೆ ಕೈಗೊಳ್ಲಬೇಕು. ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಹೊದರೆ ಭಾರಿ ಅನಾಹುತಗಳಾಗುವ ಸಾಧ್ಯತೆ ಇದೆ ಎಂದರು.ಮರ ತೆರವು ಕಾರ್ಯದಲ್ಲಿ ಆಲ್ವಿನ್, ಹರೀಶ್, ಗಂಗಾ, ರಮೇಶ್, ಜಾನ್, ರವಿ, ಸುನೀಲ್ ಇನ್ನಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''