ಜಾನಪದ ಸಮ್ಮೇಳನ । ತಾಲೂಕು ಮಟ್ಟದ 4ನೇ ಉತ್ಸವ । ಎತ್ತಿನ ಗಾಡಿಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣೆಗೆ
ಕನ್ನಡಪ್ರಭ ವಾರ್ತೆ ಕಡೂರುಜಾನಪದ ಸಂಸ್ಕೃತಿಯಲ್ಲಿ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಆಧುನಿಕ ಭರಾಟೆಯಲ್ಲಿ ಜಾನಪದ ಶ್ರೀಮಂತಿಕೆ ಮರೆಯಾಗುತ್ತಿರುವುದು ವಿಪರ್ಯಾಸ ಸಂಗತಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕಿನ ಚಿಕ್ಕನಲ್ಲೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕದಿಂದ ನಡೆದ ತಾಲೂಕು ಮಟ್ಟದ 4ನೇ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ನಮ್ಮ ಕಡೂರು ತಾಲೂಕು ಜಾನಪದ ತವರೂರಾಗಿತ್ತು. ಜಾನಪದ ಕಲೆ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ದೊಡ್ಡ ಆಸ್ತಿಯಾಗಿ ಉಳಿಯಬೇಕು. ಜೀವನಾನುಭವವನ್ನು ನೇರವಾಗಿ ನಮಗೆ ತಿಳಿಸುವ ಮತ್ತು ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಶಕ್ತಿ ಜಾನಪದದಲ್ಲಿದೆ ಎಂದರು.
ಕಡೂರು ವಿಧಾನಸಭಾ ಕ್ಷೇತ್ರದ 115 ಕೆರೆ ತುಂಬಿಸುವ ಭದ್ರಾ ಉಪಕಣಿವೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. 2 ನೇ ಹಂತದ ಯೋಜನೆಗೆ 400 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಚಿಕ್ಕನಲ್ಲೂರು ಕೆರೆಗೂ ನೀರು ಹರಿಸಲು ಶ್ರಮಿಸು ತ್ತಿದ್ದೇನೆ. ತಾಲೂಕಿನಲ್ಲಿ ಶೀಘ್ರ ಗಾರ್ಮೆಂಟ್ಸ್ ಫ್ಯಾಕ್ಟರಿ ಆರಂಭವಾಗಿ ಸುಮಾರು 5 ಸಾವಿರ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಎಂದರು.ಜಾನಪದ ಕಲೆಗಳ ಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಹೊಸೂರು ಪುಟ್ಟರಾಜು, ಜನಜೀವನ ಮತ್ತು ಉನ್ನತ ಸಾಂಸ್ಕೃೃ ತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಶ್ರಮಿಕರ ಜೀವಾಳ ಎಂದು ತಿಳಿಸಿದರು.
ಸಮ್ಮೇಳನಾದ್ಯಕ್ಷ ಸಿ. ತಿಪ್ಪೇಶ್ ಅವರನ್ನು ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಜಾನಪದ ಶೈಲಿಯ ಅಲಂಕೃತಗೊಂಡ ಜೋಡಿ ಎತ್ತಿನಗಾಡಿ ಮೂಲಕ ಮೆರವಣಿಗೆ ನಡೆಸಲಾಯಿತು. ವೀರಗಾಸೆ, ಡೊಳ್ಳು, ಕೋಲಾಟ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಜಾನಪದ ಕಲಾ ತಂಡಗಳು ಕಲೆಗಳನ್ನು ಪ್ರದರ್ಶಿಸಿದವು. ಗ್ರಾಮೀಣ ಶೈಲಿಯ ಆಹಾರ ಬಳಕೆ ಮತ್ತು ಪರಿಕರಗಳ ವಸ್ತುಪ್ರದರ್ಶನ ಗಮನ ಸೆಳೆಯಿತು.ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ.ಬಿ.ಸುರೇಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್.ಮಲ್ಲೇಶಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಹಿರಿಯ ಜಾನಪದ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ, ಮುಗುಳಿ ಲಕ್ಷ್ಮಿದೇವಮ್ಮ, ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಪ್ರಕಾಶ್, ಆಸಂದಿ ಕಲ್ಲೇಶ್,ಚಿಕ್ಕನಲ್ಲೂರು ಪರಮೇಶ್, ಗುಮ್ಮನಹಳ್ಳಿ ಅಶೋಕ್, ಚಟ್ನಳ್ಳಿ ಮಹೇಶ್, ಕ್ಷೇತ್ರಪಾಲ, ರಾಜಪ್ಪ, ಜಗದೀಶ್ವರಾಚಾರ್, ಜಯಣ್ಣ, ರಾಜು,ಪ್ರಕಾಶ್, ಪರಮೇಶ್ವರಪ್ಪ, ರೇವಣಸಿದ್ದಪ್ಪ, ಸೋಮು, ಚಂದ್ರು, ಕಲ್ಲಪ್ಪ ಮತ್ತಿತರರು ಇದ್ದರು.
ಜಾನಪದ ಉಳಿಸುವ ಜವಾಬ್ದಾರಿ ಯುವಪೀಳಿಗೆ ಹೊರಲಿಆಧುನಿಕ ಸಮಾಜದಲ್ಲಿ ಗ್ರಾಮೀಣ ಉತ್ಸವ, ಜಾನಪದ ಸಂಸ್ಕೃತಿ ಮರೆಯಾಗುತ್ತಿರುವ ಸಂದರ್ಭದಲ್ಲಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವಪೀಳಿಗೆ ಹೊರಬೇಕು ಎಂದು ಸಮ್ಮೇಳನಾಧ್ಯಕ್ಷ ಸಿ.ತಿಪ್ಪೇಶ್ ಕರೆ ನೀಡಿದರು.
ಇಂದಿನ ಆಧುನಿಕತೆಯ ಭರಾಟೆಗೆ ಗ್ರಾಮೀಣ ಭಾಗದಲ್ಲೇ ಜಾನಪದ ನೇಪತ್ಯಕ್ಕೆ ಸರಿಯುತ್ತಿರುವುದು ಬೇಸರದ ಸಂಗತಿ, ಪರಿಷತ್ತಿನ ಮೂಲಕ ಜಾನಪದಕ್ಕೆ ಮನ್ನಣೆ ದೊರಕಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.