ಏಳಿಗೆಗೆ ಶ್ರಮಿಸಿದ ಸಂಸ್ಥಾನದ ರಾಜರುಗಳು

KannadaprabhaNewsNetwork | Published : Apr 3, 2025 12:31 AM

ಸಾರಾಂಶ

ಮೈಸೂರು ಒಡೆಯರು ಆಳ್ವಿಕೆ ನಡೆಸುತ್ತಿದ್ದ ವೇಳೆ ಹೈದರಾಲಿ ಮತ್ತು ಟಿಪ್ಪುವಿನ ಆಳ್ವಿಕೆ ಸಹ ಇತ್ತು.

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಸಂಸ್ಥಾನ 14ನೇ ಶತಮಾನದಲ್ಲಿ ಪಾಳೆಪಟ್ಟು ಎಂಬ ಹೆಸರಿನಿಂದ ಅಸ್ತಿತ್ವಕ್ಕೆ ಬಂದ ಪುಟ್ಟ ಸಾಮ್ರಾಜ್ಯ. ಆರಂಭದ ರಾಜರು ಸಂಸ್ಥಾನದ ಏಳಿಗೆಗೆ ಶ್ರಮವಹಿಸಿದರು ಎಂದು ಕೃಷ್ಣರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎಂ.ಕೆ. ಮಾಧವಿ ಅಭಿಪ್ರಾಯಪಟ್ಟರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ಮೈಸೂರು ಸಂಸ್ಥಾನದಲ್ಲಿ ಆಧುನೀಕರಣ ವಿಷಯ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.ಮೈಸೂರು ಒಡೆಯರು ಆಳ್ವಿಕೆ ನಡೆಸುತ್ತಿದ್ದ ವೇಳೆ ಹೈದರಾಲಿ ಮತ್ತು ಟಿಪ್ಪುವಿನ ಆಳ್ವಿಕೆ ಸಹ ಇತ್ತು. ಹೈದರಾಲಿ ಹಾಗೂ ಟಿಪ್ಪು ಮೈಸೂರು ಅರಸರನ್ನು ಬದಿಗೊತ್ತು ಸಂಸ್ಥಾನ ವಶಪಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ 1799ರ ಸಹಾಯಕ ಸೈನ್ಯ ಪದ್ಧತಿಯಂತೆ ರಾಣಿ ಲಕ್ಷ್ಮಿಅಮ್ಮಣ್ಣಿ ಅವರು ಬ್ರಿಟೀಷರ ಸಹಾಯದೊಂದಿಗೆ ಮತ್ತೆ ಅಧಿಕಾರ ಪಡೆದರು.ಆಧುನೀಕರಣದ ವಿಷಯಕ್ಕೆ ಬಂದರೆ ಸಂಸ್ಥಾನದಲ್ಲಿ ಬ್ರಟೀಷ್ ವಸಾಹತುಷಾಹಿ ಆಳ್ವಿಕೆಯಿಂದ ರಾಜಕೀಯ, ಆಡಳಿತ, ಆರ್ಥಿಕ ಕ್ಷೇತ್ರದಲ್ಲಿ ಸಾಮಾಜಿಕ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆ, ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಅದರಲ್ಲಿ ಭಾರತೀಯರಾದ ರಾಜಾರಾಮ ಮೋಹನರಾಯ್ ಪಾತ್ರ ಪ್ರಮುಖವಾದದ್ದು. ಮಹಿಳೆಯರ ಅಸ್ಮಿತೆಯ ವಿಷಯದಲ್ಲಿ ರಾಜ ಪ್ರಭುತ್ವದಲ್ಲಿ ಆಧುನಿಕತೆ ಆರಂಭವಾಯಿತು. ಕಾಯಿದೆಗಳು ಪ್ರಮುಖ ಪಾತ್ರ ವಹಿಸಿದವು. 1894ರಲ್ಲಿ ಬಾಲ್ಯ ವಿವಾಹ ತಡೆ ಕಾನೂನನ್ನು ಯಶಸ್ವಿಯಾಗಿ ಜಾರಿಗೆತರಲಾಯಿತು ಎಂದರು.1933ರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಭಾಗ, 1938ರ ವಿಧವಾ ಪುನರ್‌ ವಿವಾಹ ಕಾಯಿದೆ ಮುಂತಾದ ಮಹಿಳಾ ಅನುಕೂಲಕರ ಕಾಯಿದೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ವಿಶೇಷ ಉಪನ್ಯಾಸ ಮಾಲೆಯು ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಇಂತಹ ಉಪನ್ಯಾಸ ಕಾರ್ಯಕ್ರಮ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಪ್ರಾಂಶುಪಾಲ ಡಾ.ಎಸ್. ಮರೀಗೌಡ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು.ಅಂತಿಮ ಬಿಎ ತರಗತಿ ವಿದ್ಯಾರ್ಥಿಗಳಾದ ಸ್ಪಂದನ ಕಶ್ಯಪ್ ಹಾಗೂ ಪ್ರಿಯಾಂಕ ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಇತಿಹಾಸ ವಿಭಾಗದ ಎಂ.ಜೆ. ಯಮುನಾ ನಿರೂಪಿಸಿದರು. ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಿಯಾಂಕ ವಂದಿಸಿದರು.

Share this article