ಮೋದಿಯವರ ಮತ್ತು ನನ್ನದು ಯಾವುದೋ ಜನ್ಮಾಂತರದ ಸಂಬಂಧ. ನನ್ನ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ. ಅದೇ ಕಾಂಗ್ರೆಸ್ ನನ್ನನ್ನು ಅಧಿಕಾರದಿಂದ ಕಿತ್ತು ಹಾಕಿತು. ಈ ದೇವೇಗೌಡ ಒಂದೇ ಒಂದು ರುಪಾಯಿ ದುರುಪಯೋಗ ಮಾಡಿಲ್ಲ.
ಕನ್ನಡಪ್ರಭ ವಾರ್ತೆ ಹಾಸನ
ಮೋದಿಯವರ ಮತ್ತು ನನ್ನದು ಯಾವುದೋ ಜನ್ಮಾಂತರದ ಸಂಬಂಧ. ನನ್ನ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ. ಅದೇ ಕಾಂಗ್ರೆಸ್ ನನ್ನನ್ನು ಅಧಿಕಾರದಿಂದ ಕಿತ್ತು ಹಾಕಿತು. ಈ ದೇವೇಗೌಡ ಒಂದೇ ಒಂದು ರುಪಾಯಿ ದುರುಪಯೋಗ ಮಾಡಿಲ್ಲ.
ಇಡೀ ಹಿಂದುಸ್ಥಾನದಲ್ಲಿ ನನ್ನ ಬಗ್ಗೆ ಯಾರೂ ಆರೋಪ ಮಾಡಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆತ್ಮವಿಶ್ವಾಸದಿಂದ ಹೇಳಿಕೊಂಡರು.
ನಗರದ ಬಿಎಂ ರಸ್ತೆ ಬಳಿ ಇರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ 5 ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನೊಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಹಾಸನದಲ್ಲಿ ಸಮಸ್ಯೆಗಳು ಬಹಳ ಇದೆ.
ಮಾಡಬೇಕಾದ್ದು ಕೂಡ ಸಾಕಷ್ಟು ಇದೆ. ಆದರೂ ಪ್ರಜ್ವಲ್ ಶಕ್ತಿಮೀರಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ.
ವಾರದ ಹಿಂದೆ ಕಾಂಗ್ರೆಸಿನವರು ಅರಸೀಕೆರೆ, ಹಾಸನದಲ್ಲಿ ಸಭೆ ಮಾಡಿದ್ದಾರೆ. ಹಾಸನದ ಮೆಡಿಕಲ್ ಕಾಲೇಜು ನೂತನ ಕಟ್ಟಡ ಉದ್ಘಾಟನೆ ಮಾಡಿದ್ದಾರೆ. ಆದರೆ ಈ ಕಾಲೇಜು ಆಗಿದ್ದು ಯಾವಾಗ? ಮೆಡಿಕಲ್ ಕಾಲೇಜು ಉಳಿಸಲು ರೇವಣ್ಣ ಮಾಡಿದ ಪ್ರಯತ್ನ ಗೊತ್ತಿದೆಯಾ? ಎಂದು ಹಳೆಯದನ್ನು ಪ್ರಸ್ತಾಪಿಸಿದರು.
ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ನಮ್ಮ ಅವಧಿಯಲ್ಲಿ ಆದ ಕೆಲಸಗಳನ್ನು ಈಗ ಉದ್ಘಾಟನೆ ಮಾಡುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಮಾಡಿರೊ ಕೆಲಸ ಜನರಿಗೆ ಮುಟ್ಟಿಸಲು ನಾವು ಹಿಂದೆ ಬಿದ್ದರೆ ಮುಂದಿನ ೧೦೦ ದಿನಗಳಲ್ಲಿ ನಮ್ಮ ಎದುರಾಳಿಗಳು ನಮ್ಮನ್ನ ರಾಜಕೀಯವಾಗಿ ಮುಗಿಸುತ್ತಾರೆ. ಇಷ್ಟೆಲ್ಲಾ ಕೆಲಸ ಮಾಡಿರೊ ಸಂಸದರನ್ನ ಸೋಲಿಸಲೇಬೇಕು ಎಂದು ಕೆಲಸ ಮಾಡುತ್ತಿದ್ದಾರೆ.
ನಾನು ಪ್ರಧಾನಿಯಾಗಿ ದೇಶದ ಹಲವಾರು ಸಮಸ್ಯೆ ಬಗೆಹರಿಸಿದ್ದೇನೆ. ನೇಗಿಲ ಗೆರೆ ಪುಸ್ತಕ ಓದಬೇಕು. ನನಗೆ ಇನ್ನೂ ಎರಡು ವರ್ಷ ರಾಜ್ಯಸಭೆ ಅವಕಾಶ ಇದೆ. ನಾನು ಪ್ರಜ್ವಲ್ ಹಿಂದೆ ನಿಲ್ಲುತ್ತೇನೆ.
ಅವರಿಗೆ ಸಲಹೆ ಕೊಡ್ತೇನೆ, ಜಿಲ್ಲೆಯ ಜನತೆಯ ಋಣ ತೀರಿಸೋಣ! ಕುಮಾರಸ್ವಾಮಿ ೨೬ ಸಾವಿರ ಕೋಟಿ ಸಾಲಮನ್ನ ಮಾಡಿದ್ರಲ್ಲ. ಅದಕ್ಕೆ ಅಸೂಯೆ ಪಡ್ತೀರಾ! ಸಿದ್ದರಾಮಯ್ಯ ಅವರೇ ನಿಮ್ಮ ಎಲ್ಲಾ ಭಾಗ್ಯಗಳಿಗೆ ಕುಮಾರಸ್ವಾಮಿ ಅವರು ಹಣ ಒದಗಿಸಿದರು.
ರೈತರ ಸಾಲಾಮನ್ನಾ ಮಾಡೊದಾದ್ರೆ ನನ್ನ ಭಾಗ್ಯಗಳಿಗೆ ಹಣ ಇಟ್ಟು ಆಮೇಲೆ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ರು. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯ ವಿಚಾರ ಪ್ರಸ್ತಾಪ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಹೆಚ್.ಪಿ. ಸ್ವರೂಪ್ , ಮಾಜಿ ಶಾಸಕ ಕೆ.ಎನ್. ಲಿಂಗೇಶ್, ಹೆಚ್.ಕೆ. ಕುಮಾರಸ್ವಾಮಿ, ವೈ.ಎಸ್. ದತ್ತಾ, ತೋ.ಚ. ಅನಂತ ಸುಬ್ಬರಾಯ್, ಬಿದರಿಕೆರೆ ಜಯರಾಂ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಹೊಂಗೆರೆ ರಘು ಮತ್ತಿತರರಿದ್ದರು.