ಹಳದಿ ಮೆಟ್ರೋಗೆ ಮೋದಿ ಚಾಲನೆ

KannadaprabhaNewsNetwork |  
Published : Aug 11, 2025, 12:30 AM ISTUpdated : Aug 11, 2025, 06:56 AM IST
ಹಳದಿ ಮೆಟ್ರೋಗೆ ಮೋದಿ ಚಾಲನೆ | Kannada Prabha

ಸಾರಾಂಶ

ಸಿಲಿಕಾನ್‌ ಸಿಟಿಯ ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು (19.15 ಕಿಮೀ) ಪ್ರಧಾನಿ ಮೋದಿ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.

  ಬೆಂಗಳೂರು :  ಸಿಲಿಕಾನ್‌ ಸಿಟಿಯ ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು (19.15 ಕಿಮೀ) ಪ್ರಧಾನಿ ಮೋದಿ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.

ಆರ್‌.ವಿ.ರಸ್ತೆಯ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ರಾಜ್ಯದ ಮೊದಲ ಚಾಲಕರಹಿತವಾಗಿ ಸಂಚರಿಸುವ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿದ ಅವರು ಬಳಿಕ ಅದೇ ರೈಲಿನಲ್ಲಿ ಎಲೆಕ್ಟ್ರಾನಿಕ್‌ ಸಿಟಿ ನಿಲ್ದಾಣದವರೆಗೆ ಸಂಚರಿಸಿದರು.ಬರೋಬ್ಬರಿ ₹7160 ಕೋಟಿ ರು. ಮೊತ್ತದಲ್ಲಿ ನಿರ್ಮಾಣ ಆಗಿರುವ ಹಳದಿ ಮಾರ್ಗ ಸೇರ್ಪಡೆ ಮೂಲಕ ಬೆಂಗಳೂರಿನ ಮೆಟ್ರೋದ ಒಟ್ಟೂ ಉದ್ದ 76.95 ಕಿ.ಮೀ.ನಿಂದ 96 ಕಿ.ಮೀ.ಗೆ ವಿಸ್ತರಣೆ ಆದಂತಾಗಿದೆ. ಒಟ್ಟು ಮೂರು ರೈಲುಗಳ ಮೂಲಕ ಈ ಮಾರ್ಗದ ವಾಣಿಜ್ಯ ಸಂಚಾರ ಆರಂಭ ಆಗಲಿದ್ದು, ಆರಂಭದ ಕೆಲ ತಿಂಗಳು ಪ್ರತಿನಿತ್ಯ 50000 ಹಾಗೂ ಮುಂದೆ 8 ಲಕ್ಷ ಜನ ಸಂಚರಿಸುವ ನಿರೀಕ್ಷೆಯಿದೆ. 

ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಅವರು ರಸ್ತೆ ಮಾರ್ಗದ ಮೂಲಕ ಡಬಲ್‌ ಡೆಕ್ಕರ್‌ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದರು. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸಾಥ್ ನೀಡಿದರು. ಈ ವೇಳೆ ಪ್ರಧಾನಿಯವರು ಹಳದಿ ಮಾರ್ಗದ ಇಂಟರ್‌ಚೇಂಜ್‌ ದೇಶದ ಅತೀ ಎತ್ತರದ ಜಯದೇವ ಮೆಟ್ರೋ ನಿಲ್ದಾಣದ ಮಾದರಿ ವೀಕ್ಷಿಸಿದರು. ಅದರ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ ಮೋದಿಯವರಿಗೆ ವಿವರಿಸಿದರು.

ನಿಲ್ದಾಣದಲ್ಲಿ ಅಳವಡಿಸಲಾದ ಡಿಜಿಟಲ್ ಮೆಟ್ರೋ ಟಿಕೆಟ್ ವೆಂಡಿಂಗ್ ಯಂತ್ರದಲ್ಲಿ ಬಿತ್ತರವಾಗುವ ಕ್ಯುಆರ್ ಕೋಡ್ ಅನ್ನು ಖುದ್ದು ಸ್ಕ್ಯಾನ್‌ ಮಾಡುವ ಮೂಲಕ ಮೋದಿ ಟಿಕೆಟ್ ಖರೀದಿಸಿದರು. ಪಡೆದ ಟಿಕೆಟನ್ನು ಮೆಟ್ರೋ ಬ್ಯಾರಿಕೆಡ್‌ನಲ್ಲಿ ಸ್ಕ್ಯಾನ್ ಮಾಡಿ ನಿಲ್ದಾಣದ ಒಳಪ್ರವೇಶಿಸಿ ಪ್ಲಾಟ್‌ಫಾರ್ಮ್‌ಗೆ ಹೋದರು.ಅಲ್ಲಿ ಬೆಂಗಳೂರಿನ ಚಾಲಕರಹಿತ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿದರು. ಮೋದಿಯವರಿದ್ದ ಮೆಟ್ರೋ ರೈಲನ್ನು ಮಹಿಳಾ ಲೊಕೋಪೈಲಟ್ ವಿನೂತಾ ಅವರು ಚಾಲನೆ ಮಾಡಿದರು. 

ರೈಲಿನೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಮೋದಿಯವರ ಅಕ್ಕಪಕ್ಕ ಕೂತಿದ್ದರು.ಜತೆಗೆ ರಾಜ್ಯಪಾಲ ಥಾವರ್ ಚಂದ ಗೆಹಲೋತ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ಲಾಲ್‌ ಕಟ್ಟರ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಕುಳಿತಿದ್ದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಇದ್ದರು.- ಬಾಕ್ಸ್‌-

ವಿದ್ಯಾರ್ಥಿಗಳು ಕಾರ್ಮಿಕರ ಜತೆ ಮಾತುಕತೆಇದಕ್ಕೂ ಮುನ್ನ ಮೊದಲ ಕೋಚ್ ನಲ್ಲಿ ಮೋದಿ ಅವರ ಜೊತೆಗೆ ಮೆಟ್ರೋ ಹಳದಿ ನಿರ್ಮಾಣದಲ್ಲಿ ಶ್ರಮಿಸಿದ 8 ಉದ್ಯೋಗಿಗಳು ಸೇರಿ, 16 ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ 8 ನಾಗರಿಕರು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ರೈಲು ನಿಲ್ದಾಣದವರೆಗೆ ಸಂಚಾರ ನಡೆಸಿದರು. ಎಲ್ಲರ ಜತೆಗೆ ಈವೇಳೆ ಮೋದಿ ಕೆಲಕಾಲ ನಸುನಗುತ್ತ ಮಾತುಕತೆ ನಡೆಸಿದರು.

PREV
Read more Articles on

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ