ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶಕ್ಕೆ ದೇವರು ಮತ್ತು ಅಲ್ಲಾ ಕೊಟ್ಟಿರುವ ಉಡುಗೊರೆ ಎಂದು ಮೋದಿಯವರನ್ನು ಕಾಣಲು ಬಂದಿದ್ದ ಶಿವಾಜಿ ನಗರದ ಮೊಹಮ್ಮದ್ ಗೌಸ್ ಹೇಳಿದರು.
ಚಾಲುಕ್ಯ ವೃತ್ತದಲ್ಲಿ ಮೋದಿ ಆಗಮನಕ್ಕಾಗಿ ಕಾಯುತ್ತಿದ್ದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಅವರನ್ನು ಈ ಹಿಂದೆಯೂ ಹತ್ತಿರದಿಂದ ನೋಡಿದ್ದೇನೆ. ಇಂದು ಮತ್ತೆ ನೋಡಲು ಬಂದಿದ್ದೇನೆ. ನಾನು ಅವರ ಅಭಿಮಾನಿ ಕಾರ್ಯಕರ್ತ. ಅವರು ದೇಶಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಷ್ಟು ಕೆಲಸಗಳನ್ನು ಯಾರೂ ಮಾಡಿಲ್ಲ ಎಂದರು.
ತೆರಿಗೆ ಹೆಚ್ಚಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಹೆದರಿಸಿದರೂ ಅವರು ಭಯಪಟ್ಟಿಲ್ಲ, ಹೆದರಿಲ್ಲ. ಏಕೆಂದರೆ ಅವರಿಗೆ ದೇವರು ಮತ್ತು ಅಲ್ಲಾನ ಆಶೀರ್ವಾದ ಇದೆ. ಅವರ ಹೆಸರನ್ನು ಚಿನ್ನದಲ್ಲಿ ಬರೆಯಬೇಕು ಎಂದು ಮೊಹಮ್ಮದ್ ಗೌಸ್ ಹೇಳಿದರು.
ಬೆಂಗಳೂರಿಗೆ ಕೊಡುಗೆ ಕೊಟ್ಟಿದ್ದಾರೆ: ಯಲಹಂಕದಿಂದ ಬಂದಿದ್ದ ಮಹಿಳಾ ಕಾರ್ಯಕರ್ತೆಯೊಬ್ಬರು, ಪ್ರಧಾನಿ ಅವರು ವಂದೇ ಭಾರತ್ ರೈಲು ಮತ್ತು ಮೆಟ್ರೋ ರೈಲನ್ನು ಬೆಂಗಳೂರಿನ ಮತ್ತು ರಾಜ್ಯದ ಜನತೆಗೆ ಉಡುಗೊರೆಯಾಗಿ ನೀಡಿದ್ದಾರೆ. ಅವರು ಎಲ್ಲ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾರೆ. ಹೀಗಾಗಿ, ಅವರನ್ನು ಕಾಣಲು ಸಾವಿರಾರು ಜನ ಬರುತ್ತಾರೆ ಎಂದರು.
ಡ್ರಾಯಿಂಗ್ ನೀಡಲು ಬಂದಿದ್ದ ಮಕ್ಕಳು
ಪ್ರಧಾನಿ ಮೋದಿ, ಆತ್ಮನಿರ್ಭರ ಭಾರತ ಕಲ್ಪನೆಯ ಚಿತ್ರ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚಿತ್ರಗಳನ್ನು ಬಿಡಿಸಿದ್ದ ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿಗಳು ಆ ಚಿತ್ರಗಳನ್ನು ಮೋದಿ ಅವರಿಗೆ ನೀಡಲೆಂದು ರಸ್ತೆ ಬದಿ ನಿಂತಿದ್ದರು. ಆದರೆ, ಆ ಚಿತ್ರಗಳನ್ನು ನೀಡಲು ಸಾಧ್ಯವಾಗಲಿಲ್ಲ. ಮುಂದಿನ ಬಾರಿ ಬಂದಾಗ ನೀಡುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದರು.
ಚಾಲುಕ್ಯ ವೃತ್ತದಲ್ಲಿ ಜನದಟ್ಟಣೆ
ನಗರದ ಚಾಲುಕ್ಯ ವೃತ್ತದಲ್ಲಿ ಅಪಾರ ಸಂಖ್ಯೆಯ ಅಭಿಮಾನಗಳು ಸೇರಿದ್ದರು. ಪ್ರಧಾನಿ ಕಾರು ಬರುತ್ತಿದ್ದಂತೆ ಭಾರತ್ ಮಾತಾ ಕೀ ಜೈ, ಭಾಜಪಾ ಕೀ ಜೈ, ನರೇಂದ್ರ ಮೋದಿಜೀ ಕೀ ಜೈ ಎಂದು ಘೋಷಣೆ ಕೂಗಿದರು. ಅಲ್ಲಲ್ಲಿ ಡೊಳ್ಳು, ಹಲಗಿ ಸೇರಿ ವಿವಿಧ ವಾದ್ಯಗಳನ್ನು ಬಾರಿಸುವ ಮೂಲಕ ಸ್ವಾಗತ ಕೋರಿದರು.
ಕಾಂಗ್ರೆಸ್, ಬಿಜೆಪಿ ಜೈಕಾರ
ರಸ್ತೆ ಬದಿ ಅಲ್ಲಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಜಮಾಯಿಸಿದ್ದರು. ಪ್ರಧಾನಿ ಮತ್ತು ಇತರ ನಾಯಕರ ಕಾರುಗಳು ಸಂಚರಿಸುವ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಜೈ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರಿಗೆ ಜೈ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಬಿಜೆಪಿ ಮತ್ತು ಮೋದಿ ಪರವಾಗಿ ಜೈಕಾರ ಕೂಗಿದರು.
ಭಿತ್ತಿಪತ್ರಕ್ಕೆ ಪೊಲೀಸರ ಆಕ್ಷೇಪ
‘ಆಪರೇಷನ್ ಸಿಂಧೂರ, ಕಾಂಗ್ರೆಸ್ ದೂರ’ ಎಂಬ ಬರಹವಿದ್ದ ಭಿತ್ತಿಪತ್ರ ಪ್ರದರ್ಶನ ಮಾಡಿದ ಬಿಜೆಪಿ ಕಾರ್ಯಕರ್ತನ ವರ್ತನೆಗೆ ಪೊಲೀಸರು ಆಕ್ಷೇಪಿಸಿ ಪ್ರದರ್ಶಿಸದಂತೆ ಪೊಲೀಸರು ಸೂಚಿಸಿದರು.