ಮೋದಿ ಸಾಧನೆಯನ್ನು ಮುಂದೆ ಸಿದ್ದು ಹೊಗಳ್ತಾರೆ: ಸೋಮಣ್ಣ

KannadaprabhaNewsNetwork |  
Published : Jun 13, 2025, 03:47 AM IST
ಸೋಮಣ್ಣ | Kannada Prabha

ಸಾರಾಂಶ

ಕೇಂದ್ರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಕಲ್ಪನೆಯಲ್ಲಿ ಹಲವಾರು ಯೋಜನೆಗಳ ಮೂಲಕ ಸಾಮಾನ್ಯರ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ದೇಶಕ್ಕೆ ತೊಂದರೆ ಕೊಟ್ಟವರಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ತಕ್ಕ ಉತ್ತರ ಕೊಡಲಾಗಿದೆ. ಇಡೀ ವಿಶ್ವ ಇಂದು ದೇಶದ ಜತೆಗೆ ಇದೆ. ಅದಕ್ಕೆ ಕಾರಣ ನರೇಂದ್ರ ಮೋದಿ ಅವರಾಗಿದ್ದಾರೆ.

ಹುಬ್ಬಳ್ಳಿ: ದೇಶಕ್ಕೆ ಭವಿಷ್ಯವಿದೆ ಎಂಬುದನ್ನು ತೋರಿಸಿಕೊಟ್ಟವರು ಪ್ರಧಾನಿ ನರೇಂದ್ರ ಮೋದಿ ಅವರು. ತಲೆಬುಡ ಇಲ್ಲದ ನಾಯಕ ಸಿದ್ದರಾಮಯ್ಯ ಇದೀಗ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಮುಂದೆ ಅವರೇ ಮೋದಿ ಅವರ ಸಾಧನೆಯನ್ನು ಬೀದಿ ಬೀದಿಗಳಲ್ಲಿ ಹೇಳುವ ಕಾಲ ಬರುತ್ತದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಇಲ್ಲಿನ ಅರವಿಂದ ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಧಾರವಾಡ ಗ್ರಾಮಾಂತರ ಜಿಲ್ಲೆ ವತಿಯಿಂದ ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಯ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೇಂದ್ರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಕಲ್ಪನೆಯಲ್ಲಿ ಹಲವಾರು ಯೋಜನೆಗಳ ಮೂಲಕ ಸಾಮಾನ್ಯರ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ದೇಶಕ್ಕೆ ತೊಂದರೆ ಕೊಟ್ಟವರಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ತಕ್ಕ ಉತ್ತರ ಕೊಡಲಾಗಿದೆ. ಇಡೀ ವಿಶ್ವ ಇಂದು ದೇಶದ ಜತೆಗೆ ಇದೆ. ಅದಕ್ಕೆ ಕಾರಣ ನರೇಂದ್ರ ಮೋದಿ ಅವರಾಗಿದ್ದಾರೆ. ವಿವಿಧ ದೇಶಕ್ಕೆ ಸರ್ವಪಕ್ಷಗಳ ನಿಯೋಗ ಕಳಿಸುವ ಮೂಲಕ ಭಯೋತ್ಪಾದನೆ ವಿರುದ್ಧ ವಿಶ್ವದ ಗಮನ ಸೆಳೆದರು. ಅಲ್ಲದೆ, ಜಾತಿ, ಕುಲ ಕೇಳದೆ ದೂರದೃಷ್ಟಿಯ ಮೂಲಕ ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ ಎಂದರು.

ಬೆಂಗಳೂರು ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೈಗಾರಿಕೆ ಹಾಗೂ ಸೌಲಭ್ಯ ಹೊಂದಿರುವ ನಗರ ಹುಬ್ಬಳ್ಳಿಯಾಗಿದೆ. ಹೀಗಾಗಿ ಹುಬ್ಬಳ್ಳಿ ಧಾರವಾಡ ನಗರ ಜಗತ್ತಿನ ಭೂಪಟದಲ್ಲಿ ಮಿಂಚುತ್ತಿದೆ ಎಂದರು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಭಾರತ ದೇಶ ಏನು ಎಂದು ತೋರಿಸಿಕೊಟ್ಟವರೆಂದರೆ ಅವರು ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ದೇಶದ ಜನರಿಗಾಗಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಅಡಿಯಲ್ಲಿ ಹಲವಾರು ಯೋಜನೆ ತಂದಿದ್ದಾರೆ. ದೇಶಕ್ಕೆ ಪದೇ ಪದೇ ತೊಂದರೆ ಕೊಡುತ್ತಿದ್ದ ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ನಾವೆಲ್ಲರೂ ಅವರ ಜತೆ ನಿಲ್ಲೋಣ ಎಂದರು.

ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಲಿಂಗರಾಜ ಪಾಟೀಲ, ನಿಂಗಪ್ಪ ಸುತಗಟ್ಟಿ, ಡಾ. ಕ್ರಾಂತಿಕಿರಣ, ವಿಜಯಾನಂದ ಶೆಟ್ಟರ್, ಸಂಜಯ ಕಪಟಕರ್, ಈರಣ್ಣ ಜಡಿ, ಬಸವರಾಜ ಕುಂದಗೋಳಮಠ, ರವಿ ನಾಯಕ ಸೇರಿದಂತೆ ಇತರರು ಇದ್ದರು.ಬೆಳಗಾವಿ- ಧಾರವಾಡ ಭೂಸ್ವಾಧೀನದ ಅಡೆತಡೆ ನಿವಾರಣೆ

ಹುಬ್ಬಳ್ಳಿ:

ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿ ಎಲ್ಲ ಪ್ರಕ್ರಿಯೆಗಳು ಧನಾತ್ಮಕವಾಗಿ ಸಾಗಿವೆ. ಮುಂದಿನ 2-3 ತಿಂಗಳಲ್ಲಿ ಸ್ಪಷ್ಟರೂಪ ಪಡೆದುಕೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿದರು.

ಬೆಳಗಾವಿ- ಧಾರವಾಡ ನೂತನ ರೈಲು ಮಾರ್ಗದ ಭೂಸ್ವಾಧೀನದ ಅಡೆತಡೆಯೂ ನಿವಾರಣೆಯಾಗಿದೆ. ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ ಎಂದು ಇದೇ ವೇಳೆ ಹೇಳಿದರು.

ಕೇಂದ್ರ ಸರ್ಕಾರ ಯಶಸ್ವಿ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರದ ಸಾಧನೆಗಳನ್ನು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಈ ವೇಳೆ ಹುಬ್ಬಳ್ಳಿ-ಅಂಕೋಲಾ ಯೋಜನೆ ಪ್ರಸ್ತಾಪಿಸಿ, ಯೋಜನೆಗೆ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್‌ ಸಿಕ್ಕಿದೆ. ಯೋಜನೆ ಡಿಪಿಆರ್‌ ಕೂಡ ಸಿದ್ಧಪಡಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರ-ವಿರೋಧ ಚರ್ಚೆ ನಡೆದಿವೆ. ಅಲ್ಲಿನ ಸಂಸದ ಕಾಗೇರಿ ಅವರು ನಿಭಾಯಿಸುತ್ತಿದ್ದಾರೆ. 15 ದಿನಗಳೊಳಗಾಗಿ ಭೇಟಿ ನೀಡಿ ವಿರೋಧಿಗಳ ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

45 ಎಕರೆ ಅಷ್ಟೇ!: ಧಾರವಾಡ- ಬೆಳಗಾವಿ ರೈಲು ಮಾರ್ಗಕ್ಕೆ ಅಡ್ಡಿಯಾಗಿದ್ದ ಭೂ ಸ್ವಾಧೀನ ಅಡಚಣೆಯನ್ನು ರಾಜ್ಯ ಮೂಲಸೌಕರ್ಯ ಖಾತೆ ಸಚಿವ ಎಂ.ಬಿ. ಪಾಟೀಲ ನಿವಾರಿಸಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪ್ರಕ್ರಿಯೆ ಸರಾಗವಾಗಿದೆ. ಧಾರವಾಡ ಜಿಲ್ಲೆಯಲ್ಲಿ 45 ಎಕರೆ ಸ್ವಾಧೀನ ಸಮಸ್ಯೆಯಿದ್ದು, ಕೆಲವೇ ದಿನಗಳಲ್ಲಿ ಬಗೆಹರಿಯಲಿದೆ. ನನ್ನ ಅವಧಿಯಲ್ಲಿಯೇ ಯೋಜನೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು.

ಹುಬ್ಬಳ್ಳಿ ಭಾಗಕ್ಕೆ ಅನುಕೂಲ: ರಾಜ್ಯದಲ್ಲಿ ಹೊಸ ಏರ್ಪೋರ್ಟ್‌ ನಿರ್ಮಾಣ ಯೋಜನೆ ಆಗಲಿದ್ದು, ಬೆಂಗಳೂರಿನಿಂದ 150 ಕಿ.ಮೀ ದೂರದಲ್ಲಿ ನಿರ್ಮಿಸುವ ಪ್ರಸ್ತಾಪವಿದೆ. ಇದು ಹುಬ್ಬಳ್ಳಿ ಭಾಗಕ್ಕೆ ಅನುಕೂಲವಾಗಲಿದೆ. ಇದರಿಂದ ಹುಬ್ಬಳ್ಳಿ ನಿಲ್ದಾಣ ಇನ್ನೂ 100 ಪಟ್ಟು ಅಭಿವೃದ್ಧಿಯಾಗಲಿದೆ ಎಂದು ಹೇಳುವ ಮೂಲಕ, ತುಮಕೂರ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಅಭಿಲಾಷೆ ವ್ಯಕ್ತಪಡಿಸಿದರು.

₹3- 5 ಲಕ್ಷ ಕೋಟಿ ಬಂಡವಾಳ: 11 ವರ್ಷಗಳಲ್ಲಿ ರಾಜ್ಯದ‌ಲ್ಲಿ ₹3-5 ಲಕ್ಷ ಕೋಟಿ ಬಂಡವಾಳ ಹೂಡಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲ್ವೆ ಯೋಜನೆಗಳಿಗೆ ₹41 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಬೀದರ- ಹೈದರಾಬಾದ್‌ ನಡುವೆ ದ್ವಿಪಥ ಮಾರ್ಗ ನಿರ್ಮಿಸಲಾಗುವುದು. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ವಂದೇ ಭಾರತ್‌ ರೈಲುಗಳನ್ನು ಓಡಿಸುತ್ತೇವೆ ಎಂದರು.

ಬೆಂಗಳೂರು ಉತ್ತರಕ್ಕೆ ಗೊತ್ತಿಲ್ಲ: ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಗೆ ಸೇರ್ಪಡೆ ವಿಷಯ ನಡೆಯುತ್ತಿರುವ ಚರ್ಚೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸೋಮಣ್ಣ, ಇದು ತೋಳ ಮತ್ತು ಕುರಿಮರಿ ಕಥೆಯಂತಿದೆ ಎಂದು ಲೇವಡಿ ಮಾಡಿದರು.

ಈ ವಿಷಯದಲ್ಲಿ ಗೃಹ ಸಚಿವ ಡಾ. ಪರಮೇಶ್ವರ ದುಡುಕುವುದಿಲ್ಲ ಎಂಬ ವಿಶ್ವಾಸವಿದೆ. ಈ ವಿಚಾರದಲ್ಲಿ ನಾನು ಇನ್ನೂ ನಿಲುವು ತಳೆದಿಲ್ಲ. ಒಳ್ಳೆಯದಾದರೆ ಸಪೋರ್ಟ್‌ ಮಾಡುತ್ತೇನೆ, ಕೇಡು ಎನಿಸುವುದಾದರೆ ವಿರೋಧಿಸುತ್ತೇನೆ ಎಂದರು.

ಚರ್ಚೆಗೆ ಪಂಥಾಹ್ವಾನ: ಕೇಂದ್ರದ 11 ವರ್ಷಗಳ ಆಡಳಿತ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಝೀರೋ ಮಾರ್ಕ್ಸ್‌ ಕೊಡುವುದಾಗಿ ಹೇಳಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ವಿ. ಸೋಮಣ್ಣ, ಮೋದಿ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗಿಲ್ಲ ಎಂದರು.

ಇಂಥ ಉಡಾಫೆ ಮಾತುಗಳನ್ನು ಬಿಡಬೇಕು. ಕಾಂಗ್ರೆಸ್‌ನವರಿಗೆ ಮಾತನಾಡಲು ನೈತಿಕತೆ ಇಲ್ಲ. ಕೈಲಾಗದವ ಮೈ ಪರಚಿಕೊಂಡರಂತೆ ಎನ್ನುವಂತೆ ಕಾಂಗ್ರೆಸ್ಸಿಗರು ವರ್ತಿಸುತ್ತಿದ್ದಾರೆ. ಇಂಥ ಮಾತುಗಳನ್ನು ಜನರ ಗಂಭೀರವಾಗಿ ಸ್ವೀಕರಿಸುವುದಿಲ್ಲ. ಮೊದಲಿನ ಸಿದ್ದರಾಮಯ್ಯ ಈಗಿಲ್ಲ. ಅವರು ಕಾಣೆಯಾಗಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಕೇಂದ್ರದ ಆಡಳಿತ, ಅಭಿವೃದ್ಧಿ ನೋಡಲು ಸಿಎಂ 8 ದಿನ ದೆಹಲಿಯಲ್ಲಿ ಕುಳಿತು ನೋಡಲಿ, ಅವರಿಗೆ ಜ್ಞಾನೋದಯವಾಗುತ್ತದೆ. ಅಭಿವೃದ್ಧಿ ಕುರಿತಾಗಿ ಸಿಎಂ ಬಹಿರಂಗ ಚರ್ಚೆಗೆ ಬರಲಿ ಎಂದು ಸಚಿವ ಸೋಮಣ್ಣ ಪಂಥಾಹ್ವಾನ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಆರ್‌. ಪಾಟೀಲ, ಹು-ಧಾ ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಸಂಜಯ ಕಪಟಕರ, ಡಾ. ಕ್ರಾಂತಿ ಕಿರಣ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ