ಯಲಬುರ್ಗಾ:
ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಸವರಾಜ ಗೋಗೇರಿ ಹೇಳಿದರು.ತಾಲೂಕಿನ ಗುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬಂಧು ಸೇವಾ ಗುರುಬಳಗದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಿದ್ದು, ಭೂಮಿ, ಪರಿಸರ ಹಾಳಾಗುತ್ತಿದೆ. ಸಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಪರಿಸರ ದಿನ ಕೇವಲ ಆಚರಣೆಗೆ ಸೀಮಿತವಾಗದೆ ಗಿಡ-ಮರ ಪೋಷಿಸುವ ಕಾರ್ಯವಾಗಬೇಕು. ಮಣ್ಣು, ಜಲ, ಅರಣ್ಯ ಉಳಿಸಲು ಸಮುದಾಯಕ್ಕೆ ಜಾಗೃತಿ ಮೂಡಿಸಬೇಕು ಎಂದರು.
ಉಪನ್ಯಾಸ ನೀಡಿದ ಇಂದಿರಾ ಮುತ್ತಾಳ, ವಿಶ್ವಬಂಧು ಸೇವಾ ಗುರುಬಳಗ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡು ತಾಲೂಕಿನ ಕೀರ್ತಿಯನ್ನು ರಾಜ್ಯಾದ್ಯಂತ ಪಸರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ವಿಶ್ವಬಂಧು ಸೇವಾ ಗುರುಬಳಗದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿದರು. ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ನೂರಂದಪ್ಪ, ಸಿಆರ್ಪಿ ಶರಣು ಕುರ್ನಾಳ, ಮುಖ್ಯಶಿಕ್ಷಕರಾದ ಕಳಕೇಶ ಬಳಿಗಾರ, ಲಾಲ್ಬಹದ್ದೂರ್ ಶಾಸ್ತ್ರಿ, ಶಿಕ್ಷಕರಾದ ಮಹಾವೀರ ಕಲ್ಭಾವಿ, ಮಾಂತೇಶ ಹಿರೇಮಠ, ಉಪ ವಲಯ ಅರಣ್ಯಾಧಿಕಾರಿ ಚಿದಾನಂದ ಓಲೇಕಾರ, ಅರಣ್ಯ ಇಲಾಖೆಯ ಕಳಕಪ್ಪ ಬ್ಯಾಳಿ, ಬಳಗದ ಪ್ರಮುಖರಾದ ಸಂಗಯ್ಯ ಹಿರೇಮಠ, ಶರಣಪ್ಪ ಅಂಗಡಿ, ಬಸವರಾಜ, ರಾಜೇಶ್ವರಿ, ಪ್ರಭು ಶಿವನಗೌಡ್ರ, ಪರಮೇಶ ಚಿಂತಾಮಣಿ, ಮಾರುತಿ ಹಾದಿಮನಿ, ಗಣೇಶ, ದಾವಲಸಾಬ ಹೆಬ್ಬಳ್ಳಿ, ಮಾರುತಿ ಬನ್ನಿಗೋಳ, ಶಂಕರ ಇಂಗಳದಾಳ, ಕವಿತಾ ಹೂಗಾರ ಇದ್ದರು.ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಲಿ
ಯಲಬುರ್ಗಾ:ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಈಶಪ್ಪ ವಕ್ರ ಹೇಳಿದರು.
ತಾಲೂಕಿನ ಮಾಟಲದಿನ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಾನವ ತನ್ನ ಬೇಕು-ಬೇಡಿಕೆ ಈಡೇರಿಸಿಕೊಳ್ಳಲು ಪರಿಸರ ನಾಶ ಪಡಿಸುತ್ತಿದ್ದಾನೆ. ಅದರಿಂದ ಮಾನವನಿಗೆ ಎಷ್ಟು ಸಮಸ್ಯೆ ಇದೆ ಎಂಬುದನ್ನು ಮನಗಾಣಬೇಕು. ಸುತ್ತಲಿನ ಪರಿಸರ, ಶುದ್ಧ ಗಾಳಿಯಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಆದ್ದರಿಂದ ಪ್ರತಿಯೊಬ್ಬರು ಸಸಿ ನೆಟ್ಟು ಪೋಷಿಸಬೇಕೆಂದು ಹೇಳಿದರು.
ಈ ವೇಳೆ ಗ್ರಾಪಂ ಸದಸ್ಯ ಹನುಮಂತಪ್ಪ ಹಂಚಿನಾಳ, ಎಸ್ಡಿಎಂಸಿ ಸದಸ್ಯ ಬಸವರಾಜ ಹಂಚಿನಾಳ, ಎಸ್ಕೆಡಿಆರ್ಡಿಪಿ ಮೇಲ್ವಿಚಾರಕಿ ಸವಿತಾ, ಸೇವಾ ಪ್ರತಿನಿಧಿ ಸಿದ್ದಗಂಗಮ್ಮ, ಮುಖ್ಯಶಿಕ್ಷಕ ರಾಘವೇಂದ್ರ, ಶಿಕ್ಷಕರಾದ ವೀರೇಶಪ್ಪ ಕುಂಬಾರ, ಕಳಕನಗೌಡ ಪಾಟೀಲ್, ಶಿವರಾಜ ಪೂಜಾರ, ಶಕುಂತಲಾ ಮಾಲಿಗೌಡ್ರ ಸೇರಿದಂತೆ ಇತರರು ಇದ್ದರು.