ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳುವಲ್ಲಿ ಇಟ್ಟ ಮೋದಿ ಹೆಜ್ಜೆ ವಿಶ್ವಕ್ಕೆ ಮಾದರಿ: ಸಂಸದ ಯದುವೀರ್‌

KannadaprabhaNewsNetwork |  
Published : May 13, 2025, 01:39 AM IST
62 | Kannada Prabha

ಸಾರಾಂಶ

ಶಾಂತಿ, ಸಮನ್ವಯತೆಯನ್ನು ಸಾಧಿಸಲು ನಮಗೆ ಬುದ್ಧ, ಬಸವಾದಿ ಶರಣರ ಜೀವನಾದರ್ಶಗಳೇ ಕಾರಣವಾಗಿದೆ. ಭಾರತದ ಉದ್ದೇಶ ಪಹಲ್ಗಾಂ ನರಮೇಧರ ಮಾರಣಹೋಮ ಮಾಡಬೇಕಿತ್ತು. ವಿಶ್ವದಲ್ಲಿ ಉಗ್ರರ ಸರ್ವನಾಶವಷ್ಟೇ ನಮ್ಮ ಗುರಿಯಾಗಿತ್ತು. ಹಾಗಾಗಿ ಆಪರೇಷನ್ ಸಿಂಧೂರ್ ಮೂಲಕ ಘರ್ಷಣೆ ನಡೆದ ನಾಲ್ಕು ದಿನಗಳೂ ಕೂಡ ದೇಶದ ಸೈನಿಕರು ಉಗ್ರರ ಸಂಹಾರವನ್ನೇ ಗುರಿಯಾಗಿಸಿಕೊಂಡು ಯಶಸ್ಸು ಸಾಧಿಸಿದರು.

ಕನ್ನಡಪ್ರಭ ವಾರ್ತೆ ಹುಣಸೂರು

ಪಹಲ್ಗಾಂ ಹತ್ಯಾಕಾಂಡದ ನರರಾಕ್ಷಸ ಉಗ್ರರ ನರವಧೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಸೈನ್ಯ ನಡೆಸಿದ ಕಾರ್ಯಾಚರಣೆಯು ನಿರ್ಧಿಷ್ಟ ಉದ್ದೇಶ ಮತ್ತು ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಲ್ಲಿ ಇಟ್ಟ ಹೆಜ್ಜೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಬಸವ ಸಮಿತಿಯ ತಾಲೂಕು ಘಟಕದ ವತಿಯಿಂದ ಸೋಮವಾರ ಜಗಜ್ಯೋತಿ ಬಸವೇಶ್ವರರ 134ನೇ ಜಯಂತಿ ಅಂಗವಾಗಿ ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ವೇಳೆಯಲ್ಲಿ ಶಾಂತಿ, ಸಮನ್ವಯತೆಯನ್ನು ಸಾಧಿಸಲು ನಮಗೆ ಬುದ್ಧ, ಬಸವಾದಿ ಶರಣರ ಜೀವನಾದರ್ಶಗಳೇ ಕಾರಣವಾಗಿದೆ. ಭಾರತದ ಉದ್ದೇಶ ಪಹಲ್ಗಾಂ ನರಮೇಧರ ಮಾರಣಹೋಮ ಮಾಡಬೇಕಿತ್ತು. ವಿಶ್ವದಲ್ಲಿ ಉಗ್ರರ ಸರ್ವನಾಶವಷ್ಟೇ ನಮ್ಮ ಗುರಿಯಾಗಿತ್ತು. ಹಾಗಾಗಿ ಆಪರೇಷನ್ ಸಿಂಧೂರ್ ಮೂಲಕ ಘರ್ಷಣೆ ನಡೆದ ನಾಲ್ಕು ದಿನಗಳೂ ಕೂಡ ದೇಶದ ಸೈನಿಕರು ಉಗ್ರರ ಸಂಹಾರವನ್ನೇ ಗುರಿಯಾಗಿಸಿಕೊಂಡು ಯಶಸ್ಸು ಸಾಧಿಸಿದರು. ನಾಗರಿಕ ಸಮಾಜಕ್ಕೆ ತೊಡಕನ್ನು ಉಂಟುಮಾಡಿಲಿಲ್ಲ. ಯುದ್ಧ ಕಾಲದಲ್ಲಿನ ನಮ್ಮ ಈ ರೀತಿ ನೀತಿಗಳು ಭಗವಾನ್ ಬುದ್ಧ ಮತ್ತು ಬಸವೇಶ್ವರರು ಪ್ರತಿಪಾದಿಸಿದ ಶಾಂತಿಮಂತ್ರಗಳೇ ಕಾರಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ ಗೌಡ ಮಾತನಾಡಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು 12ನೇ ಶತಮಾನದಲ್ಲೇ ಬಸವಣ್ಣ ನೀಡಿದ್ದರೂ, ಇಂದಿಗೂ ನಮ್ಮ ಸಮಾಜ ಬದಲಾಗುವತ್ತ ಮನಸು ಮಾಡದಿರುವುದು ವಿಷಾದನೀಯ. ಬಸವತತ್ವಗಳು ಶಾಂತಿ ಮತ್ತು ಸಹೋದರತ್ವಕ್ಕೆ ನಾಂದಿ ಹಾಡಿದ್ದು, ಆಧುನಿಕತೆಯ ಸೋಗಿನಲ್ಲಿ ಮನುಷ್ಯ ಮನುಷ್ಯ ಸಂಬಂಧಗಳನ್ನು ಮರೆಯುವುದು ಸರಿಯಲ್ಲ. ಎಲ್ಲರೂ ಎಲ್ಲರಿಗಾಗಿ ಬದುಕುವುದನ್ನು ಕಲಿಯೋಣವೆಂದರು.

ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಬಿ.ವಿ. ವಸಂತಕುಮಾರ್ ಮಾತನಾಡಿ, ಒಡಕು ಎನ್ನುವುದು ವಿನಾಶಕ್ಕೆ ಕಾರಣ, ಅದು ಮನಸುಗಳ ಒಡಕಾಗಿರಬಹುದು, ಕುಟುಂಬ, ಸಮಾಜ ಅಥವಾ ದೇಶದ್ದಾಗಿರಬಹುದು. ಬಸವಣ್ಣರ ಕಾವ್ಯನಾಮ ಕೂಡಲಸಂಗಮದೇವ ಎಂದಾಗಿದ್ದು, ಕನ್ನಡ ಪದ ಕೂಡಲ ಮತ್ತು ಸಂಸ್ಕೃತಪದ ಸಂಗಮ ಎರಡರ ಅರ್ಥವೂ ಒಂದಾಗಿರುವುದು ಎನ್ನುವುದಾಗಿದೆ. ಹಾಗಾಗಿ ಬಸವಣ್ಣ ತಮ್ಮ ವಚನಗಳ ಮೂಲಕ ಒಂದಾಗಿ ಬಾಳುವುದನ್ನು ತಿಳಿಸಿದರು ಕನಕಪುರ ದೇಗುಲ ಮಠದ ಶ್ರೀ ಡಾ.ಚನ್ನಬಸವ ಸ್ವಾಮಿಗಳು ಆಶೀರ್ವಚನ ನೀಡಿದರು. ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್ ಸ್ವಾಗತಿಸಿದರು, ಬಸವ ಸಮಿತಿ ಅಧ್ಯಕ್ಷ ಕೆ.ಎಚ್. ವೀರಭದ್ರಪ್ಪ ಇದ್ದರು. ಯುವಪ್ರತಿಭೆ ಪೂರ್ಣಚಂದ್ರ ತೇಜಸ್ವಿ ಅವರು ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಕುರಿತಾಗಿ ರಚಿಸಿದ ಕವನಸಂಕಲನವನ್ನು ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್ ಬಿಡುಗಡೆಗೊಳಿಸಿದರು.

ತುಮಕೂರು ಸಿದ್ಧಗಂಗಾಮಠದ ಮಠಾಧೀಶರದ ಸಿದ್ದಲಿಂಗ ಸ್ವಾಮೀಜಿ, ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ, ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬ ಸದಾಶಿವ ಸ್ವಾಮೀಜಿ, ಆಶೀರ್ವಚನ ನೀಡಿದರು.

ಡಾ.ವೃಷಬೇಂದ್ರಸ್ವಾಮಿ, ಚಿನ್ನವೀರಯ್ಯ, ಎಚ್.ಮಹದೇವ್, ಶೇಖರ್, ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಶ್ರೀಧರ್, ಪುಟ್ಟಲಿಂಗಯ್ಯ, ರಮೇಶ್, ಕೆ.ವಿ.ಮಹದೇವ್, ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಸೇರಿದಂತೆ ಮಹಿಳಾ ಘಟಕದ ಸದಸ್ಯರು ಮತ್ತು ಸಮಾಜದ ಬಾಂಧವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ