ಮೋದಿ ಕಾರ್ಯವೈಖರಿ ವಿಶ್ವಮಾನ್ಯ : ಶಾಸಕ ದಿನಕರ ಶೆಟ್ಟಿ

KannadaprabhaNewsNetwork |  
Published : Jun 23, 2025, 11:46 PM ISTUpdated : Jun 24, 2025, 01:22 PM IST
ಫೋಟೋ : ೧೬ಕೆಎಂಟಿ_ಜೆಯುಎನ್_ಕೆಪಿ೧ : ರೋಟರಿ ಹಾಲ್‌ನಲ್ಲಿ ಬಿಜೆಪಿ ಕಾರ್ಯಾಗಾರಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು. ಎನ್.ಎಸ್.ಹೆಗಡೆ, ಗುರುಪ್ರಸಾದ ಹೆಗಡೆ, ಪ್ರಶಾಂತ ನಾಯ್ಕ, ಸುಮತಿ ಭಟ್, ಜಿ.ಎಸ್.ಗುನಗಾ, ವೆಂಕಟೇಶ ನಾಯಕ ಇತರರು ಇದ್ದರು. | Kannada Prabha

ಸಾರಾಂಶ

ದೇಶದ ಉದ್ದಗಲಕ್ಕೂ ಅಭಿವೃದ್ಧಿಯ ಹೊಸ ಮೈಲುಗಲ್ಲುಗಳನ್ನು ದಾಟಲಾಗಿದ್ದು, ಇತಿಹಾಸವೇ ನಿರ್ಮಾಣವಾಗಿದೆ.

ಕುಮಟಾ: 11 ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಉದ್ದಗಲಕ್ಕೂ ಅಭಿವೃದ್ಧಿಯ ಹೊಸ ಮೈಲುಗಲ್ಲುಗಳನ್ನು ದಾಟಲಾಗಿದ್ದು, ಇತಿಹಾಸವೇ ನಿರ್ಮಾಣವಾಗಿದೆ. ಮೋದಿ ಅವರ ಕಾರ್ಯವೈಖರಿ ದೇಶಹಿತದ ಮೇರು ಮಾರ್ಗದರ್ಶಿಯಾಗಿದ್ದು, ವಿಶ್ವಮಾನ್ಯವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದ ರೋಟರಿ ಹಾಲ್‌ನಲ್ಲಿ ಬಿಜೆಪಿ ಕುಮಟಾ ಮಂಡಲದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮೋದಿ ಸರ್ಕಾರದ ೧೧ ವರ್ಷ, ಪರಿಸರ ದಿನ, ಯೋಗ ದಿನ ಹಾಗೂ ತುರ್ತು ಪರಿಸ್ಥಿತಿ ಕರಾಳ ದಿನ ಆಚರಣೆ ಕುರಿತು ಚಟುವಟಿಕೆ ಪೂರ್ವಸಿದ್ಧತೆಗಾಗಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮೋದಿ ಅವರ ಆಳ್ವಿಕೆಯಲ್ಲಿ ನೂರಾರು ಮಹತ್ವಾಕಾಂಕ್ಷಿ ಯೋಜನೆ ಜಾರಿಯಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರು, ಮುಖಂಡರ ಮೇಲೆ ಎಫ್‌ಐಆರ್‌ ದಾಖಲಿಸಲು ಹವಣಿಸುತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಕೇವಲ ₹೧೮ ಕೋಟಿ ನೀಡಿದೆ. ಉತ್ತರ ಕನ್ನಡ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ತರಲು ಸಾಧ್ಯವಾಗಲಿಲ್ಲ. ಕಿಸಾನ್ ಸಮ್ಮಾನದಂತಹ ಯೋಜನೆಗಳು ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಕುಮಟಾದಲ್ಲಿ ಸರ್ಕಾರಿ ಪದವಿ ಕಾಲೇಜು, ಶೇ. ೮೦ ಗುಣಮಟ್ಟದ ರಸ್ತೆ, ಮಿನಿ ವಿಧಾನಸೌಧ, ಹೊನ್ನಾವರ ಕುಡಿಯುವ ನೀರಿನ ಯೋಜನೆ, ಮೇದಿನಿಗೆ ₹೪ ಕೋಟಿ, ಮತ್ತಿತರ ಕಾಮಗಾರಿಗಳ ಯಶಸ್ವಿ ಅನುಷ್ಠಾನಕ್ಕೆ ಮೋದಿಜಿ ನೇತೃತ್ವದ ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಉತ್ತಮ ಸಹಯೋಗವೇ ಕಾರಣ. ಗೋಕರ್ಣ ಓಂ ಬೀಚ್ ರಸ್ತೆ ಆಗುವುದಿದೆ. ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆ ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಬೇಕಾಗಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಮಾತನಾಡಿ, ಪಕ್ಷ ಕೇವಲ ಚುನಾವಣೆಗೆ ಸೀಮಿತವಾಗದೇ ಕಾರ್ಯಕರ್ತರ ಮತ್ತು ಮಂಡಲದಲ್ಲಿ ಚಟುವಟಿಕೆ ವಿಸ್ತರಿಸಲಾಗುತ್ತಿದೆ. ಮುಂಬರುವ ಚುನಾವಣೆ ಪುರಸಭೆ, ನಗರ ಸಭೆ, ಪಟ್ಟಣ ಪಂಚಾಯಿತಿ ಮತ್ತು ತಾಪಂ, ಜಿಪಂ ಮತ್ತು ಗ್ರಾಪಂ ಚುನಾವಣೆಗಳು ಕಾರ್ಯಕರ್ತರ ಚುನಾವಣೆಗಳಾಗಿದ್ದು, ನಾವು ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನರ ಮಧ್ಯೆ ಕೊಂಡೊಯ್ಯಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಭಾರತವನ್ನು ಹಾವಾಡಿಗರ ದೇಶ ಎಂದೆಲ್ಲಾ ಟೀಕಿಸುತ್ತಿದ್ದ ಕಾಲದಿಂದ ಇಂದು ವಿಶ್ವವೇ ಭಾರತದ ಕಡೆ ತಲೆಎತ್ತಿ ನೋಡುವಂತಾಗಿದೆ. ಪ್ರಧಾನಿ ಮೋದಿ ಅವರು ನೀಡಿದ ಯೋಜನೆ, ಕಾರ್ಯಕ್ರಮಗಳನ್ನು ದೇಶದ ಕಟ್ಟಕಡೆಯ ನಾಗರಿಕನಿಗೂ ತಲುಪಿಸಿದರೆ ಮೋದಿ ಅವರ ೧೧ ವರ್ಷಗಳ ಆಡಳಿತ ಸಾರ್ಥಕತೆಯತ್ತ ಸಾಗಲಿದೆ. ಕೇಂದ್ರ ಸರ್ಕಾರದಿಂದ ರೇಷನ್ ಅಕ್ಕಿ ೫ ಕೆಜಿ ನೀಡುತ್ತಿದ್ದರೂ ಅದು ಸಿದ್ದರಾಮಯ್ಯ ನೀಡಿರುವ ಯೋಜನೆ ಎಂದು ಜನ ತಿಳಿದಿದ್ದಾರೆ, ಈ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಬೇಕಾಗಿದೆ. ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರತಿಯೊಬ್ಬರೂ ಕನಿಷ್ಠ ೧೦ ಗಿಡ ನೆಡುವ ಸಂಕಲ್ಪ ಮಾಡಬೇಕಾಗಿದೆ ಎಂದರು.

ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಸುಮತಿ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಶಿರಸಿ, ಜಿಲ್ಲಾ ಉಪಾಧ್ಯಕ್ಷ ಸುಬ್ರಾಯ ವಾಳ್ಕೆ, ಜಿ.ಎಸ್. ಗುನಗಾ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಗಣೇಶ ಪಂಡಿತ ಇನ್ನಿತರರು ಇದ್ದರು.

PREV
Read more Articles on

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ