ಮೃತ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಹಣ ಜಮೆ:ವಾಪಸ್ ಪಡೆದು ಅರ್ಹರಿಗೆ ತಲುಪಿಸಲು ಕ್ರಮ: ಎಸ್.ಆರ್. ಪಾಟೀಲ

KannadaprabhaNewsNetwork |  
Published : Jun 08, 2026, 03:15 AM IST
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ.. | Kannada Prabha

ಸಾರಾಂಶ

ಮೃತರ ಹೆಸರಿನಲ್ಲಿ ಗೃಹಲಕ್ಷ್ಮೀ ಹಣ ಪಡೆದಿರುವ ಗಮನಕ್ಕೆ ಬಂದಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹1.10 ಕೋಟಿ ನಷ್ಟವಾಗಿದ್ದು ಪತ್ತೆಯಾಗಿದೆ. ಮೃತ ಮಹಿಳೆಯರ ಪತ್ತೆ ಮಾಡಿ ಹಣವನ್ನು ಮರಳಿ ಪಡೆದು ಅರ್ಹ ಫಲಾನುಭವಿಗಳಿಗೆ ನೀಡುವುದಾಗಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ಬ್ಯಾಡಗಿ: ಮೃತರ ಹೆಸರಿನಲ್ಲಿ ಗೃಹಲಕ್ಷ್ಮೀ ಹಣ ಪಡೆದಿರುವ ಗಮನಕ್ಕೆ ಬಂದಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹1.10 ಕೋಟಿ ನಷ್ಟವಾಗಿದ್ದು ಪತ್ತೆಯಾಗಿದೆ. ಮೃತ ಮಹಿಳೆಯರ ಪತ್ತೆ ಮಾಡಿ ಹಣವನ್ನು ಮರಳಿ ಪಡೆದು ಅರ್ಹ ಫಲಾನುಭವಿಗಳಿಗೆ ನೀಡುವುದಾಗಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ರೇವಣ್ಣ ಹಾಗೂ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 1.5 ಲಕ್ಷ ಫಲಾನುಭವಿಗಳ ಮರಣಾನಂತರವೂ ಅವರ ಖಾತೆಗಳಿಗೆ ಗೃಹಲಕ್ಷ್ಮೀ ಹಣ ಜಮೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಯೋಜನೆಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದರು.

ಪ್ರಾಮಾಣಿಕತೆ ತೋರಬೇಕು: ಫಲಾನುಭವಿಗಳು ಮೃತರಾಗಿದ್ದಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ (ಪಿಡಿಒ) ತಿಳಿಸುವುದು ಕುಟುಂಬದ ಜವಾಬ್ದಾರಿ, ಇದಕ್ಕೆ ತಪ್ಪಿದಲ್ಲಿ ಸೂಕ್ತ ಕಾನೂನು ರೀತ್ಯ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ, ರಾಜ್ಯಾದ್ಯಂತ ಸಮಗ್ರ ಪರಿಶೀಲನೆ ಕೈಗೊಳ್ಳಲಾಗಿದ್ದು, ಸುಮಾರು 1.40 ಲಕ್ಷ ಫಲಾನುಭವಿಗಳ ಐಟಿ ರಿಟರ್ನ್ಸ್ ಹಾಗೂ ಜಿಎಸ್‌ಟಿ ನೋಂದಣಿ ಹೊಂದಿರುವ ಕುಟುಂಬಗಳ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದರು.

1859 ಫಲಾನುಭವಿಗಳ ಸಾವು: ಹಾವೇರಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಆರಂಭಗೊಂಡು 3 ವರ್ಷದಲ್ಲಿ 2026ರ ಏಪ್ರಿಲ್ ಅಂತ್ಯದ ವರೆಗೆ 1859 ಫಲಾನುಭವಿಗಳು ಮೃತಪಟ್ಟಿರುವುದು ದೃಢಪಟ್ಟಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಬ್ಯಾಂಕ್ ಖಾತೆಗಳಿಗೆ 548 ಕಂತುಗಳ ರೂಪದಲ್ಲಿ ಸುಮಾರು ₹10.96 ಲಕ್ಷ ಹಣ ಜಮೆಯಾಗಿದ್ದು, ಇದರಲ್ಲಿ 95 ಫಲಾನುಭವಿಗಳ ಖಾತೆಗಳಿಂದ ಹಣ ಸರ್ಕಾರಕ್ಕೆ ಮರಳಿಸಲಾಗಿದೆ ಎಂದರು.

ಬಿಪಿಎಲ್ ಆದಾಯ ಮಿತಿ ಹೆಚ್ಚಳ: ಪ್ರಸ್ತುತ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ವಾರ್ಷಿಕ ಆದಾಯ ಮಿತಿ ₹1.20 ಲಕ್ಷ ನಿಗದಿಯಾಗಿದೆ. ಇದನ್ನು ಹೆಚ್ಚಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಆದಾಯ ಮಿತಿ ಕುರಿತು ಕೆಲ ಗೊಂದಲಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ರಮೇಶ ಮೋಟೆಬೆನ್ನೂರು, ಜಗದೀಶಗೌಡ ಪಾಟೀಲ ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಸಿರು ರಕ್ಷಣೆಗೆ ಸಂಘ- ಸಂಸ್ಥೆಗಳು ಮುಂದಾಗಲಿ: ವಕೀಲ ಬಿ.ಎಸ್. ಬಾಳೇಶ್ವರಮಠ
ವಿಶ್ವಕರ್ಮರಿಂದ ಮಾತ್ರ ದೇಶ ಕಟ್ಟಲು ಸಾಧ್ಯ: ಬಸವರಾಜ ಬೊಮ್ಮಾಯಿ