ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಕೃಷಿ ಸಂಬಂಧಿತ ಮಳಿಗೆಗಳು ಪಟ್ಟಣ ಹಾಗೂ ತಾಲೂಕಿನ ಹಳ್ಳಿಗಳಲ್ಲಿ ಬಹುತೇಕ ವ್ಯಾಪಾರ, ವಹಿವಾಟು ಕುಸಿತವಾಗಿದೆ.ಮಳೆ ಸುರಿಯಬೇಕಾದ ಸಮಯದಲ್ಲಿ ಮೋಡ ಕವಿದರೂ ಸಮರ್ಪಕ ಮಳೆಯಾಗದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಬಿತ್ತನೆ ಮಾಡಿದ ಜಮೀನುಗಳಲ್ಲಿ ತೇವಾಂಶದ ಕೊರತೆ ಕಂಡುಬರುತ್ತಿದೆ. ಮುಂಗಾರು ನಿರೀಕ್ಷೆಯಲ್ಲಿ ಕೆಲವೆಡೆ ರೈತರು ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ, ಹತ್ತಿ ಬಿತ್ತನೆ ಮಾಡಿದ್ದರೂ ಮಳೆ ಕೈಕೊಟ್ಟ ಪರಿಣಾಮ ಬೆಳೆ ಒಣಗುತ್ತಿದೆ.
ವ್ಯಾಪಾರ ಇಳಿಕೆ: ಅಲಗಿನ ಪಟ್ಟಿ, ಕುಡಾ, ಕೂರಗಿ, ಬೆಳೆಸಾಲ ಕುಂಟಿ, ಯಡೆ ಕುಂಟಿ, ತಾಳ, ರಂಟಿ, ನಗಾ, ಸಲಕೆ, ಗುದ್ದಲಿ ಸೇರಿದಂತೆ ರೈತರಿಗೆ ಬೇಕಾಗುವ ಕೃಷಿ ಕೆಲಸದ ಪರಿಕರಗಳನ್ನು ಮಾರಾಟ ಮಾಡುತ್ತಿದ್ದು, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೃಷಿ ಸಲಕರಣೆ ಮಾರಾಟ ಕಡಿಮೆಯಾಗಿದ್ದು, ವ್ಯಾಪಾರ ಸಂಪೂರ್ಣ ಥಂಡಾ ಆಗಿದೆ ಎಂದು ಕೀರ್ತಿ ಸ್ಟೀಲ್ ಮತ್ತು ಹಾರ್ಡವೇರ್ ವ್ಯಾಪಾರಸ್ಥರಾದ ಪ್ರವೀಣ ಪೃಥ್ವಿರಾಜ ಜೈನ್ ತಿಳಿಸಿದರು.
ಒಣಗುತ್ತಿರುವ ಬೆಳೆ: ಮೇ, ಜೂನ್ ತಿಂಗಳಲ್ಲಿ ಆದ ಅಲ್ಪ ಸ್ವಲ್ಪ ಮುಂಗಾರು ಮಳೆಗೆ ಶೇಂಗಾ, ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ನಂತರ ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ಬೆಳೆಗಳು ಒಣಗಲಾರಂಭಿಸಿವೆ. ಬೀಜ, ಗೊಬ್ಬರ, ಔಷಧಿ ಸಿಂಪರಣೆ, ಆಳು ಹೀಗೆ ಹತ್ತಾರು ಸಾವಿರ ಹಣ ಖರ್ಚು ಮಾಡಿದ್ದು, ಮಳೆಯ ಮುನಿಸಿನಿಂದ ದಿಕ್ಕು ತೋಚದಂತಾಗಿದೆ ಎಂದು ರೈತರಾದ ತಿಪ್ಪಣ್ಣ ಕೊಂಚಿಗೇರಿ, ಶರಣಪ್ಪ ಹರ್ಲಾಪೂರ ತಿಳಿಸಿದರು.