ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಶೇ.81 ಕುಂಠಿತ

KannadaprabhaNewsNetwork |  
Published : Jun 03, 2026, 01:15 AM IST
ಸಸಸಸ | Kannada Prabha

ಸಾರಾಂಶ

ಮಳೆಯ ಅಸಮರ್ಪಕ ಹಂಚಿಕೆ ಕಾರಣಕ್ಕೆ ಮೇ ಅಂತ್ಯಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇವಲ 517 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಮುಂಗಾರು ಹಂಗಾಮಿನ ಬಿತ್ತನೆಯಾಗಲಿದ್ದು, ಕಳೆದ ವರ್ಷದ ಮೇ ಅಂತ್ಯಕ್ಕೆ ಹೋಲಿಕೆ ಮಾಡಿದರೆ, ಬರೋಬ್ಬರಿ ಶೇ.81ರಷ್ಟು ಬಿತ್ತನೆ ಹಿನ್ನಡೆಯಾಗಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಳೆಯ ಅಸಮರ್ಪಕ ಹಂಚಿಕೆ ಕಾರಣಕ್ಕೆ ಮೇ ಅಂತ್ಯಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇವಲ 517 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಮುಂಗಾರು ಹಂಗಾಮಿನ ಬಿತ್ತನೆಯಾಗಲಿದ್ದು, ಕಳೆದ ವರ್ಷದ ಮೇ ಅಂತ್ಯಕ್ಕೆ ಹೋಲಿಕೆ ಮಾಡಿದರೆ, ಬರೋಬ್ಬರಿ ಶೇ.81ರಷ್ಟು ಬಿತ್ತನೆ ಹಿನ್ನಡೆಯಾಗಿದೆ.

ಕಳೆದ 2025ರ ಮೇ ಅಂತ್ಯಕ್ಕೆ ಬರೋಬ್ಬರಿ 2,714 ಹೆಕ್ಟೇರ್‌ನಷ್ಟು ಬಿತ್ತನೆ ಆಗಿತ್ತು. ಆದರೆ, ಈ ಬಾರಿ ಕೇವಲ 517 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 97,045 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಬಿತ್ತನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೃಷಿ ಬೆಳೆಗಳ ಪೈಕಿ ರಾಗಿ ಮುಖ್ಯ ಬೆಳೆಯಾಗಿದೆ. ಒಟ್ಟು 58 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಲಿದೆ. ಈವರೆಗೂ ರಾಗಿ ಬಿತ್ತನೆ ಆಗಿಲ್ಲ. ಇನ್ನೂ 10 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ, ಹೆಸರು, ಉದ್ದು, ಆಲಸಂದೆ ಸೇರಿದಂತೆ ಕೆಲವೇ ಬೆಳೆಗಳು ಬಿತ್ತನೆ ಆಗಿದೆ. ಉಳಿದಂತೆ ಮುಖ್ಯವಾದ ಬೆಳೆಗಳು ಬಿತ್ತನೆ ಆಗದಿರುವುದು ಚಿಂತೆಗೀಡು ಮಾಡಿದೆ.

ಎಣ್ಣೆಕಾಳು ಬಿತ್ತನೆ ಭಾರೀ ಹಿನ್ನೆಡೆ

ಕಳೆದ 2025 ಮೇ ಅಂತ್ಯಕ್ಕೆ ಜಿಲ್ಲೆಯಲ್ಲಿ ಬರೋಬ್ಬರಿ 1295 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಬಿತ್ತನೆ ಆಗಿತ್ತು. ಆದರೆ, ಈ ಬಾರಿ ಕೇವಲ 35 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಸಾಸಿವೆ ಒಂದೇ ಒಂದು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ. ನೆಲಗಡಲೆ 20 ಹೆಕ್ಟೇರ್‌ ಹಾಗೂ ಎಳ್ಳು 15 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ.

ಮಳೆ ಹಂಚಿಕೆ ಅಸಮತೋಲನ

ಜಿಲ್ಲೆಯ 9 ತಾಲೂಕು ಪೈಕಿ ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದೆ. ಕೊಪ್ಪ, ಕಳಸ ಮತ್ತು ಶೃಂಗೇರಿ ತಾಲೂಕಿನಲ್ಲಿ ಮಾತ್ರ ಒಂದಿಷ್ಟು ಮಳೆಯಾಗಿದೆ. ಇನ್ನು ಎನ್‌ಆರ್‌ಪುರದಲ್ಲಿ ಮಳೆ ಅಷ್ಟಕ್ಕೆ ಅಷ್ಟೇ ಆಗಿದೆ.

ಕೃಷಿ ಬೆಳಗಳ ಬಿತ್ತನೆ ಹೆಚ್ಚಿನ ಪ್ರಮಾಣ ಆಗುವುದು ಬಯಲು ಸೀಮೆಯ ತಾಲೂಕುಗಳಲ್ಲಿ, ಆದರೆ, ಆ ತಾಲೂಕುಗಳಲ್ಲಿಯೇ ಮಳೆ ಕೊರತೆ ಆಗಿರುವುದು ಬಿತ್ತನೆ ಹಿನ್ನಡೆಗೆ ಕಾರಣವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. 53,104 ಟನ್‌ ರಸಗೊಬ್ಬರ ದಾಸ್ತಾನು

ಮುಂಗಾರು ಅವಧಿಗೆ ಜಿಲ್ಲೆಗೆ 156941 ಟನ್‌ ನಷ್ಟು ರಸಗೊಬ್ಬರದ ಬೇಡಿಕೆ ಇದೆ. ಈ ಪೈಕಿ ಮೇ ಅಂತ್ಯದ ವರೆಗೆ 46,529 ಟನ್‌ ನಷ್ಟು ಬೇಡಿಕೆ ಬಂದಿದೆ. ಈ ಪೈಕಿ 25,323 ಟನ್‌ ನಷ್ಟು ರಸಗೊಬ್ಬರ ವಿತರಣೆ ಮಾಡಲಾಗಿದೆ. ಇನ್ನೂ 53,104 ಟನ್‌ ನಷ್ಟು ರಸಗೊಬ್ಬರದ ದಾಸ್ತಾನು ಇದೆ.

ಆದರೆ, ಅನಾಗತ್ಯವಾಗಿ ಗೊಬ್ಬರ ಶೇಖರಣೆ ಮಾಡುವುದಕ್ಕೆ ಕೃಷಿ ಇಲಾಖೆ ಅವಕಾಶ ನೀಡುತ್ತಿಲ್ಲ. ಆದರೆ, ಅಗತ್ಯ ಇರುವ ರೈತರಿಗೆ ಗೊಬ್ಬರ ನೀಡುವುದಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ 2 ತಿಂಗಳಿಂದ ಗೊಬ್ಬರ ಸರಬರಾಜು ಇಳಿಕೆ

ಕಳೆದ ಎರಡು ತಿಂಗಳಿನ ಅಂಕಿ ಅಂಶ ಗಮನಿಸಿದರೆ, ಜಿಲ್ಲೆಯ ಬೇಡಿಕೆ ಪ್ರಮಾಣಕ್ಕಿಂತ ಅರ್ದದಷ್ಟು ಕಡಿಮೆ ರಸಗೊಬ್ಬರ ಪೂರೈಕೆ ಆಗಿರುವುದು ಕಂಡು ಬಂದಿದೆ. ಏಪ್ರಿಲ್‌ನಲ್ಲಿ 22,357 ಟನ್‌ ನಷ್ಟು ರಸಗೊಬ್ಬರ ಬೇಡಿಕೆ ಇದ್ದರೂ, 13, 536 ಟನ್‌ನಷ್ಟು ಸರಬರಾಜು ಆಗಿದೆ. ಇನ್ನೂ ಮೇ ತಿಂಗಳಿನಲ್ಲಿ 24,172 ಟನ್‌ ಬೇಡಿಕೆ ಇದ್ದರೂ, 11,788 ಟನ್‌ ನಷ್ಟು ಮಾತ್ರ ಸರಬರಾಜು ಅಗಿದೆ,

ರಸಗೊಬ್ಬರ ಅಂಗಡಿಗಳಲ್ಲಿ ಡಿಮ್ಯಾಂಡ್‌ ಸೃಷ್ಟಿ

ಮಧ್ಯಪ್ರಾಚ್ಯದ ದೇಶಗಳಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಹೀಗಾಗಿ, ಕೃಷಿ ಇಲಾಖೆಯು ಅಗತ್ಯ ಇರುವ ರೈತರಿಗೆ ಮಾತ್ರ ರಸಗೊಬ್ಬರ ನೀಡುವಂತೆ ಸೂಚಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ರಸಗೊಬ್ಬರ ಅಂಗಡಿ ಮಾಲೀಕರು, ರೈತರಿಗೆ ಗೊಬ್ಬರ ನೀಡದಂತೆ ಇಲಾಖೆ ಸೂಚನೆ ನೀಡಿದೆ ಎಂದು ಡಿಮ್ಯಾಂಡ್‌ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಜತೆಗೆ, ಜನಪ್ರತಿನಿದಿಗಳಿಗೂ ಗೊಬ್ಬರ ಪೂರೈಕೆಯಲ್ಲಿ ಸಮಸ್ಯೆ ಇದೆ ಎಂಬ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಹೀಗಾಗಿ, ರೈತರಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಗೆ ಕಾರಣವಾಗಿದೆ ಎಂದು ಕೃಷ್ಟಿ ಇಲಾಖೆಯ ಅಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಯಾವ ಗೊಬ್ಬರ ಎಷ್ಟು ಪ್ರಮಾಣ ದಾಸ್ತಾನು

ರಸಗೊಬ್ಬರಪ್ರಮಾಣ (ಟನ್)

ಡಿಎಪಿ 4469

ಎನ್‌ಪಿಕೆ 28,600

ಎಂಒಪಿ 7237

ಯೂರಿಯಾ 10,388

ಎಸ್‌ಎಸ್‌ಪಿ 2410

ಒಟ್ಟು 53,104

ಜಿಲ್ಲೆಯಲ್ಲಿ ಈವೆಗೆ ಯಾವ ಬೆಳೆ ಎಷ್ಟು ಹೆಕ್ಟೇರ್‌ ಬಿತ್ತನೆ (ಮೇ 31ಕ್ಕೆ)

ಬೆಳೆ ಗುರಿ ಸಾಧನೆ (ಬಿತ್ತನೆ 2025ರ ಮೇ 31ಕ್ಕೆ)

ಮುಸುಕಿನ ಜೋಳ7530 10 20

ಆಲಸಂದೆ 1500 85 302

ಉದ್ದು 425 54 172

ಹೆಸರು 1750 78 437

ನೆಲಗಡಲೆ 2450 20 508

ಎಳ್ಳು 1400 15 320

ಸೂರ್ಯಕಾಂತಿ 1450 0 435

ಹರಳು 500 0 32

ಹತ್ತಿ 2020 140 350

ಕಬ್ಬುಕೊಳೆ(ನೀರಾವರಿ) 500 115 118

ನಾಟಿ ಕಬ್ಬು 100 0 20

ಮಳೆ ಕೊರತೆ ಹಿನ್ನೆಲೆಯಲ್ಲಿ ಬಿತ್ತನೆ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ, ರಸಗೊಬ್ಬರದ ಬೇಡಿಕೆ ಅಷ್ಟೊಂದು ಇಲ್ಲ. ರೈತರಿಗೆ ಅಗತ್ಯವಿರುವ ಗೊಬ್ಬರ ಸಹ ದಾಸ್ತಾನು ಇದೆ. ರೈತರು ಅನಾಗತ್ಯ ಗೊಂದಲಕ್ಕೆ, ಆತಂಕಕ್ಕೆ ಒಳಗಾಗಬಾರದು.

ತಿರುಮಲೇಶ್‌ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಚಿಕ್ಕಮಗಳೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮೀರ್‌ ವಿರುದ್ಧ ಕಠಿಣ ಕ್ರಮ, ಮಂಪರು ಪರೀಕ್ಷೆಗೆ ಒತ್ತಾಯ
ನಾಲ್ಕು ಹೋಬಳಿಯಲ್ಲಿ ಬಿತ್ತನೆ ಬೀಜ ವಿತರಣೆ